ADVERTISEMENT

ಯುವಕನ ಕುತ್ತು ಸೀಳಿ ಕೊಲೆ: ಒಬ್ಬನ ಬಂಧನ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2020, 3:01 IST
Last Updated 19 ಅಕ್ಟೋಬರ್ 2020, 3:01 IST
ಹತ್ಯೆಯಾದ ಯುವಕ ರಾಜು 
ಹತ್ಯೆಯಾದ ಯುವಕ ರಾಜು    

ದೇವನಹಳ್ಳಿ: ಯುವಕನೊಬ್ಬನನ್ನು ಕತ್ತು ಸೀಳಿ ಕೊಲೆ ಮಾಡಿದ್ದು, ಮತ್ತೊಬ್ಬನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಕೆಂಪತಿಮ್ಮನಹಳ್ಳಿಯಲ್ಲಿ ಶನಿವಾರ ರಾತ್ರಿ ನಡೆದಿದೆ.

ದೊಡ್ಡಪ್ಪನಹಳ್ಳಿಯ ರಾಜು(33) ಮೃತಪಟ್ಟಿದ್ದಾರೆ. ಉಮೇಶ್‍ ಎಂಬಾತ ತೀವ್ರವಾಗಿ ಗಾಯಗೊಂಡಿದ್ದು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ರಾಜು ಸ್ನೇಹಿತ ಉಮೇಶ್‍ ಹಾಗೂ ಕೆಂಪರಾಜು ನಡುವೆ ಶನಿವಾರ ಮಧ್ಯಾಹ್ನ ಗಲಾಟೆ ನಡೆದಿತ್ತು. ಸ್ಥಳೀಯರ ಮಧ್ಯಸ್ಥಿಕೆಯಿಂದ ಗಲಾಟೆ ತಣ್ಣಗಾಗಿತ್ತು. ಆದರೆ, ರಾತ್ರಿ ಗಲಾಟೆ ನಡೆದಿದ್ದ ಜಾಗದಿಂದ ಸ್ವಲ್ಪದೂರದಲ್ಲಿ ರಾಜು ಮತ್ತು ಉಮೇಶ್‍ ಮಾತನಾಡುತ್ತಾ ನಿಂತಿದ್ದರು. ಆ ವೇಳೆ ಏಕಾಏಕಿ ಕೆಂಪರಾಜು ಮತ್ತು ಆತನ ಸ್ನೇಹಿತರು ಇಬ್ಬರ ಮೇಲೆ ಹಲ್ಲೆ ನಡೆಸಿದ್ದಾರೆ. ರಾಜು ಅವರನ್ನು ಕೊಲೆ ಮಾಡಲಾಗಿದ್ದು, ಉಮೇಶ್‍ ಮೇಲೆ ಹಲ್ಲೆ ನಡೆಸಲಾಗಿದೆ.ವಿಶ್ವನಾಥಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಕೆಂಪರಾಜುನನ್ನು ಬಂಧಿಸಲಾಗಿದೆ. ತಲೆಮರೆಸಿಕೊಂಡಿರುವ ಇತರೆ ಆರೋಪಿಗಳ ಪತ್ತೆಗಾಗಿ ಬಲೆ ಬೀಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ಡ್ರಗ್ಸ್‌–ಗಾಂಜಾ ದಂಧೆ ಕಾರಣ:

ಕೆಂಪರಾಜು ಮತ್ತು ಆತನ ತಂಡದ ಸದಸ್ಯರು ಚಟಕ್ಕೆ ಬಲಿಯಾಗಿದ್ದರು. ರಸ್ತೆಯಲ್ಲಿ ಓಡಾಡುವವರನ್ನು ಬೆದರಿಸಿ ಹಣಕ್ಕಾಗಿ ಪೀಡಿಸುತ್ತಿದ್ದರು. ಹಣ ಇದ್ದಾಗ ಇತರೆ ಯುವಕರನ್ನು ಡ್ರಗ್ಸ್‌ ಸೇವಿಸುವಂತೆ ಪೀಡಿಸುತ್ತಿದ್ದರು. ನಿರಾಕರಿಸಿದರೆ ಅವರ ಮೇಲೆ ಹಲ್ಲೆ, ಕೊಲೆ ಬೆದರಿಕೆ ಹಾಕುತ್ತಿದ್ದರು ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಆರಂಭಗೊಂಡ ನಂತರ ಇದರ ಸುತ್ತಮುತ್ತ ಪರ ರಾಜ್ಯದ ಕಾರ್ಮಿಕರ ಸಂಖ್ಯೆ ಹೆಚ್ಚಿದೆ. ಕನ್ನಮಂಗಲ, ಅಣ್ಣೇಶ್ವರ, ಜಾಲಿಗೆ ಪಂಚಾಯಿತಿ ವ್ಯಾಪ್ತಿಯಲ್ಲಿ ಇತ್ತೀಚೆಗೆ ಡ್ರಗ್ಸ್‌ ವಹಿವಾಟು ಹೆಚ್ಚುತ್ತಿದ್ದು ಯುವಜನರು ದಾರಿ ತಪ್ಪುತ್ತಿದ್ದಾರೆ. ಪೊಲೀಸರು ಇದರ ಬಗ್ಗೆ ಸೂಕ್ತ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.