ADVERTISEMENT

32 ಗುಂಟೆ ಜಾಗದ ಒತ್ತುವರಿ ತೆರವು: ₹30 ಕೋಟಿ ಮೌಲ್ಯದ ಸ್ವತ್ತನ್ನು ಸ್ವಾಧೀನಕ್ಕೆ

₹30 ಕೋಟಿ ಮೌಲ್ಯದ ಸ್ವತ್ತನ್ನು ಸ್ವಾಧೀನಕ್ಕೆ ಪಡೆದ ಬಿಡಿಎ

​ಪ್ರಜಾವಾಣಿ ವಾರ್ತೆ
Published 5 ಜನವರಿ 2022, 20:08 IST
Last Updated 5 ಜನವರಿ 2022, 20:08 IST
ಆರ್‌ಎಂವಿ ಎರಡನೇ ಹಂತದಲ್ಲಿ ನಿರ್ಮಿಸಲಾಗಿದ್ದ ಶೆಡ್‌ಗಳನ್ನು ಬಿಡಿಎ ಅಧಿಕಾರಿಗಳು ತೆರವುಗೊಳಿಸಿದರು
ಆರ್‌ಎಂವಿ ಎರಡನೇ ಹಂತದಲ್ಲಿ ನಿರ್ಮಿಸಲಾಗಿದ್ದ ಶೆಡ್‌ಗಳನ್ನು ಬಿಡಿಎ ಅಧಿಕಾರಿಗಳು ತೆರವುಗೊಳಿಸಿದರು   

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (ಬಿಡಿಎ) ರಾಜಮಹಲ್‌ ವಿಲಾಸದ (ಆರ್‌ಎಂವಿ) ಎರಡನೇ ಹಂತದಲ್ಲಿ ಹೊಂದಿರುವ ಜಾಗದಲ್ಲಿ ಅಕ್ರಮವಾಗಿ ನಿರ್ಮಾಣ ಮಾಡಲಾದ ಶೆಡ್‌ಗಳನ್ನು ತೆರವುಗೊಳಿಸಿ ಜಾಗವನ್ನು ಅಧಿಕಾರಿಗಳು ಮತ್ತೆ ಸ್ವಾಧೀನಕ್ಕೆ ಪಡೆದಿದ್ದಾರೆ. ಈ ಜಾಗದ ಮೌಲ್ಯ ₹ 30 ಕೋಟಿ ಎಂದು ಬಿಡಿಎ ಅಂದಾಜು ಮಾಡಿದೆ.

‘ನಾಗಶೆಟ್ಟಿಹಳ್ಳಿಯ ಆರ್‌ಎಂವಿ ಎರಡನೇ ಹಂತದಲ್ಲಿ ಸರ್ವೆನಂಬರ್ 71/3 ರಲ್ಲಿ 32 ಗುಂಟೆ ಜಾಗವನ್ನು ಬಿಡಿಎ ಹೊಂದಿದೆ.
ಎನ್‌ಟಿಐ ಸೊಸೈಟಿಯವರು ಈ ಜಾಗದಲ್ಲಿ ಅನಧಿಕೃತವಾಗಿ ತಾತ್ಕಾಲಿಕ ಶೆಡ್‌ಗಳನ್ನು ನಿರ್ಮಿಸಿದ್ದರು. ಇದನ್ನು ತೆರವುಗೊಳಿಸುವಂತೆ ಹಲವು ಬಾರಿ ಸೂಚನೆ ನೀಡಿದ್ದರೂ ಅವರು ಸ್ಪಂದಿಸಿರಲಿಲ್ಲ.’

‘ಕಾರ್ಯಪಾಲಕ ಎಂಜಿನಿಯರ್‌ ಕುಮಾರ್, ಪೊಲೀಸ್ ಅಧಿಕಾರಿಗಳಾದ ಭಾಸ್ಕರ್ ಮತ್ತು ರವಿಕುಮಾರ್ ನೇತೃತ್ವದಲ್ಲಿ ಪ್ರಾಧಿಕಾರದ ಸಿಬ್ಬಂದಿ ಶೆಡ್‌ಗಳನ್ನು ಬುಧವಾರ ಬೆಳಿಗ್ಗೆ ನೆಲಸಮ ಮಾಡಿ ಜಾಗವನ್ನು ವಶಪಡಿಸಿಕೊಂಡರು. ಸ್ವಾಧೀನಪಡಿಸಿಕೊಂಡ ಜಾಗದಲ್ಲಿ ಆವರಣ ಗೋಡೆ
ನಿರ್ಮಿಸಿ, ಸೂಚನಾ ಫಲಕವನ್ನು ಅಳವಡಿಸಲಾಗುತ್ತದೆ’ ಎಂದು ಬಿಡಿಎ ಪ್ರಕಟಣೆಯಲ್ಲಿ ತಿಳಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.