ADVERTISEMENT

ಅಂತಃಸತ್ವ ಇಲ್ಲದ ಕಾವ್ಯ ರಚನೆ ಹೆಚ್ಚಳ

ಬೆಳಗಾವಿಯಲ್ಲಿ ಕವಿಗೋಷ್ಠಿ ಕವಿ ವೆಂಕಟೇಶ ಹುಣಸಿಕಟ್ಟಿ ಅಭಿಪ್ರಾಯ

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2018, 5:44 IST
Last Updated 2 ಏಪ್ರಿಲ್ 2018, 5:44 IST

ಬೆಳಗಾವಿ: ‘ಇತ್ತೀಚಿನ ದಿನಗಳಲ್ಲಿ ಕಾವ್ಯವು ಅಂತಃಸತ್ವವಿಲ್ಲದೇ ಹೊರಹೊಮ್ಮುತ್ತಿರುವುದು ಕೊಂಚ ಬೇಸರದ ಸಂಗತಿ’ ಎಂದು ಕವಿ ವೆಂಕಟೇಶ ಹುಣಸಿಕಟ್ಟಿ ಹೇಳಿದರು. ಬೆಳಗಾವಿಯ ನಗರದ ಕೇಂದ್ರ ಗ್ರಂಥಾಲಯದ ಸಭಾಭವನದಲ್ಲಿ ಶನಿವಾರ ನಗರದ ಸದ್ಗುರು ಸಾಹಿತ್ಯ ಪ್ರತಿಷ್ಠಾನ ಹಾಗೂ ರಾಮದುರ್ಗದ ಮೌಲ್ಯ ಸಂಪದ ಸ್ವಯಂ ಸೇವಾ ಸಂಸ್ಥೆಯ ಪತ್ರಿಕಾ ಬಳಗದ ಸಂಯುಕ್ತಾಶ್ರಯದಲ್ಲಿ ಜರುಗಿದ ಕಾವ್ಯ ಚೈತ್ರೋತ್ಸವ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ’ಅಪಾರ ಅನುಭವದಿಂದ ಭಾವಝರಿಯಾಗಿ ಪ್ರಬುದ್ಧ ಭಾಷೆಯಲ್ಲಿ ಕಾವ್ಯ  ಹೊರಹೊಮ್ಮಬೇಕಾಗಿದೆ’ ಎಂದು ಅವರು ಹೇಳಿದರು.

ಮುಖ್ಯ ಅತಿಥಿಯಾಗಿದ್ದ ಸಾಹಿತಿ ನೀಲಗಂಗಾ ಚರಂತಿಮಠ ಮಾತನಾಡಿ ‘ಕಾವ್ಯವು ಅರ್ಥವಂತಿಕೆಯಲ್ಲಿ ಸಿರಿತನ ಹೊಂದಿರಬೇಕು. ಉದಯೋನ್ಮುಖ ಕವಿಗಳು ಅಧ್ಯಯನಶೀಲರಾಗಿ ಉತ್ತಮ ಕವಿತೆಗಳನ್ನು ನೀಡಬೇಕು’ ಎಂದು ಹೇಳಿದರು.

ಸಾಹಿತಿ ಎ.ಎ. ಸನದಿ  ಹಾಗೂ ಹಿರಿಯರಾದ ಕಲ್ಯಾಣರಾವ್ ಮುಚಳಂಬಿ ಮಾತನಾಡಿದರು. ಆರ್.ಎಸ್. ಪಾಟೀಲ ರಚಿಸಿದ 'ಕೆಲವು ಚಿಂತನೆಗಳು' ಪುಸ್ತಕವನ್ನು ನಗರ ಕೇಂದ್ರ ಗ್ರಂಥಾಲಯಾಧಿಕಾರಿ ಜೆ. ರಾಮಯ್ಯ ಲೋಕಾರ್ಪಣೆಗೊಳಿಸಿದರು. ಎ.ಎ. ಸನದಿ ಹಾಗೂ ಶಿಕ್ಷಕಿ ಶಬಾನಾ ಅಣ್ಣಿಗೇರಿ ಅವರನ್ನು  ಸನ್ಮಾನಿಸಲಾಯಿತು.

ADVERTISEMENT

ಸದ್ಗುರು ಸಾಹಿತ್ಯ ಪ್ರತಿಷ್ಠಾನದ ಅಧ್ಯಕ್ಷ ಬಸವರಾಜ ಸುಣಗಾರ ಅವರನ್ನು ಖಾಸಬಾಗದ ತಾಳೂಕರ ಚಿತ್ರಕಲಾ ಮತ್ತು ಸಮಾಜ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಕೃಷ್ಣರಾಜೇಂದ್ರ ತಾಳೂಕರ ಸನ್ಮಾನಿಸಿದರು. ಕವಿಗೋಷ್ಠಿಯಲ್ಲಿ ಬಿ.ಕೆ. ಹೊಂಗಲ, ಸಿದ್ದೇಶ್ವರ ಹಿರೇಮಠ, ಹೇಮಾ ಸೊನೊಳ್ಳಿ, ಸುನಂದಾ ಹಾಲಬಾವಿ, ಎ. ಎ. ದರ್ಗಾ, ಸುನಂದಾ ಎಣ್ಣಿ, ಎಲ್.ಎಚ್. ಮಿಕ್ಕಲಿ, ರಾಜು ರಾಮದುರ್ಗ, ಸಿಕಂದರ ಮಹಾತ, ಜಗದೀಶ ಧಾರವಾಡಕರ, ಎಂ.ಎನ್. ಗೊವನ್ನವರ, ರವಿ ಶಾಸ್ತ್ರಿ, ಡಿ.ಎಸ್. ಡಿಗ್ಗಿಮಠ, ಚಂದ್ರಶೇಖರ ಕೊಪ್ಪದ, ಗಂಗಾಧರ ಗಾಡದ, ಬಸವನಗೌಡ ಪಾಟೀಲ, ಸುನೀತಾ ಪಾಟೀಲ, ಕಾಡೇಶ ಬಸ್ತವಾಡಿ, ರೇಖಾ ಅಂಗಡಿ, ಫ್ರಕುಸಾಬ ಬಾವನ್ನವರ, ಶಿವಾ ಬಿದರಕಟ್ಟಿ, ಅಜಮವ್ವ ಭೋವಿ, ಸಂತೋಷ ನಾಯಕ ಹಾಗೂ ಆನಂದ ಹಿರೇಮಠ ಕಾವ್ಯ ವಾಚಿಸಿದರು. ಬಸವರಾಜ ಸುಣಗಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಸೋಮಶೇಖರ ಸೊಗಲದ ನಿರೂಪಿಸಿದರು. ರಾಜು ರಾಮದುರ್ಗ ಸ್ವಾಗತಿಸಿದರು. ನೀರಾ ಗೋಣಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.