ADVERTISEMENT

ಅಂದದ ಮರಡಿಗೊಂದು ಚಂದದ ಪ್ಲಾನ್‌

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2017, 7:15 IST
Last Updated 3 ಡಿಸೆಂಬರ್ 2017, 7:15 IST

ಚನ್ನಮ್ಮನ ಕಿತ್ತೂರು: ‘ಕಿತ್ತೂರು ಸಂಸ್ಥಾನ ಕಾಲದಲ್ಲಿ ನಿರ್ಮಾಣ ಮಾಡಿದರೆನ್ನಲಾದ ಕಾವಲು ಗೋಪುರವಿರುವ ಇತಿಹಾಸ ಪ್ರಸಿದ್ಧ ಗಡಾದ ಮರಡಿ ಅಭಿವೃದ್ಧಿ ಪಡಿಸಿ, ಅಲ್ಲೊಂದು ಬೃಹತ್‌ ಬಸವೇಶ್ವರ ಪ್ರತಿಮೆ ಸ್ಥಾಪನೆ ಮಾಡಬೇಕು’ ಎಂದು ಮಹಮ್ಮದ ಅಕ್ಬರ್ ಸೈಯದ್‌ ಕಿತ್ತೂರು ಅಭಿವೃದ್ಧಿ ಪ್ರಾಧಿಕಾರ ಸಮಿತಿಯನ್ನು ಒತ್ತಾಯಿಸಿದ್ದಾರೆ.

ಸಾವಿರಾರು ರೂಪಾಯಿ ವೆಚ್ಚ ಮಾಡಿ ಪರಿಣಿತರಿಂದ ಅಭಿವೃದ್ಧಿಯ ನೀಲನಕ್ಷೆ ಸಿದ್ಧಪಡಿಸಿರುವ ಅವರು, ‘ಇದನ್ನು ಮತ್ತೊಂದು ಪ್ರವಾಸಿ ತಾಣವನ್ನಾಗಿ ರೂಪಿಸಬೇಕಾದ ಅಗತ್ಯವಿದೆ’ ಎಂದು ಅವರು ಪತ್ರಕರ್ತರಿಗೆ ಶನಿವಾರ ತಿಳಿಸಿದರು.

‘ಕಿತ್ತೂರು ಸಂಸ್ಥಾನದ 5ನೇ ದೊರೆಯಾಗಿದ್ದ ಅಲ್ಲಪ್ಪಗೌಡ ದೇಸಾಯಿ ಕೋಟೆ ನಿರ್ಮಿಸಿದ. ವೈರಿಗಳಿಂದ ಕೋಟೆ ರಕ್ಷಿಸುವ ಸಲುವಾಗಿ ಈ ಸ್ಥಳದಿಂದ 300ಮೀಟರ್‌ ಅಂತರದಲ್ಲಿ ಎತ್ತರವಾದ ಸ್ಥಳದ ಮೇಲೆ ಮರಡಿ ನಿರ್ಮಿಸಿ ಈ ಸ್ಥಳವನ್ನು ಕಾವಲು ಗೋಪುರವನ್ನು ಕ್ರಿ.ಶ. 1660ರಿಂದ 1690 ರ ಅವಧಿಯಲ್ಲಿ ಕಟ್ಟಿಸಿದ್ದ’ ಎಂದು ಅವರು ವಿವರಣೆ ನೀಡಿದರು.

ADVERTISEMENT

‘ಈ ಮರಡಿಯು ಎತ್ತರವಾದ ಸ್ಥಳದಲ್ಲಿದ್ದು ಬುರುಜು ಆಕಾರ ಹೊಂದಿದೆ. ಬುರುಜು ಮೇಲೆ ಹತ್ತಿನಿಂತು ವೀಕ್ಷಿಸಿದರೆ ಸುತ್ತಲಿನ 10ಕಿ.ಮೀ. ದೂರದವರೆಗಿನ ಸ್ಥಳದ ಕಾಣಿಸುತ್ತದೆ. ಸಂಸ್ಥಾನ ಕಾಲದಲ್ಲಿ ಶತ್ರುಗಳ ಮೇಲೆ ನಿಗಾ ಇಡಲು ಈ ಸ್ಥಳ ಬಳಕೆಯಾಗುತ್ತಿತ್ತು. ಕಿತ್ತೂರು ಸಂಸ್ಥಾನ ಪತನವಾದ ನಂತರ ಈ ಸ್ಥಳ ನಿರೀಕ್ಷೆಯಂತೆ ಅಭಿವೃದ್ಧಿ ಹೊಂದಿಲ್ಲದಿರುವುದು ವಿಷಾದಕರ ಸಂಗತಿಯಾಗಿದೆ’ ಎಂದು ಅವರು ತಿಳಿಸಿದರು.

ಬೃಹತ್ ಧ್ವಜಾರೋಹಣ: ‘ದೇಶಕ್ಕೆ ಸ್ವಾತಂತ್ರ್ಯ ದೊರೆತ ನಂತರ ಇದೇ ಎತ್ತರದ ಮರಡಿ ಮೇಲೆ ಬೃಹತ್‌ ಧ್ವಜ ಆರೋಹಣ ಮಾಡಲಾಗುತ್ತಿತ್ತು. ಕೆಲವು ವರ್ಷಗಳ ನಂತರ ಸ್ಥಗಿತಗೊಂಡಿತ್ತು. ಇತ್ತೀಚೆಗೆ ಮತ್ತೆ 21*14 ವಿಸ್ತಾರವುಗಳ್ಳ ದೊಡ್ಡ ಧ್ವಜವನ್ನು ನ. 26 ಮತ್ತು ಆ. 15 ಆರೋಹಣ ಮಾಡಲಾಗುತ್ತಿದೆ. ಬೃಹತ್ ಗಾತ್ರದ ಧ್ವಜಾರೋಹಣ ಮಾಡುವ ಕರ್ನಾಟಕದ 3ನೇ ಮತ್ತು ದೇಶದ 6ನೇ ತಾಣವೆಂಬ ಹೆಗ್ಗಳಿಕಗೆ ಇದಕ್ಕಿದೆ.

ಇದೇ ಸ್ಥಳವನ್ನು ಕಿತ್ತೂರು ಪ್ರಾಧಿಕಾರ ಅಭಿವೃದ್ಧಿ ಪಡಿಸಬೇಕು. 40ಅಡಿ ಅಗಲ ಮತ್ತು 71ಅಡಿ ಎತ್ತರದ ವಿಶ್ವಗುರು ಬಸವಣ್ಣನ ಪ್ರತಿಮೆ ಇಲ್ಲಿ ಅನಾವರಣಗೊಳಿಸಬೇಕು. ಇದಕ್ಕೊಂದು ಅಂದದ ರೂಪು ಕೊಟ್ಟರೆ ಕೋಟೆ, ವಸ್ತುಸಂಗ್ರಹಾಲಯ ವೀಕ್ಷಿಸಲು ಬರುವ ಪ್ರವಾಸಿಗರನ್ನು ಈ ಸ್ಥಳಕ್ಕೂ ಸೆಳೆಯಬಹುದು’ ಎಂದು ಸೈಯದ್‌ ಹೇಳುತ್ತಾರೆ.

‘ಇದಕ್ಕಾಗಿ ಸ್ವಂತ ವೆಚ್ಚದಲ್ಲಿ ಪರಿಣಿತರಿಂದ ನೀಲನಕ್ಷೆ ಸಿದ್ಧಪಡಿಸಲಾಗಿದೆ. ಅದನ್ನು ಪರಿಶೀಲಿಸಬೇಕು, ಏನಾದರೂ ಬದಲಾವಣೆಗಳಿದ್ದರೆ ಮಾಡಿ ಅನುಷ್ಠಾನಕ್ಕೆ ತರಬೇಕು’ ಎಂದು ಪ್ರಾಧಿಕಾರಕ್ಕೆ ಅವರು ಮನವಿ ಮಾಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.