ADVERTISEMENT

`ಆಸರೆ ಫಲಾನುಭವಿಗಳ ಈಡೇರದ ಸೂರಿನ ಆಸೆ'

ನಾಲ್ಕು ವರ್ಷವಾದರೂ ನೆರೆಪೀಡಿತರಿನ್ನೂ ಸಂತ್ರಸ್ತರೇ!

​ಪ್ರಜಾವಾಣಿ ವಾರ್ತೆ
Published 21 ಜೂನ್ 2013, 10:20 IST
Last Updated 21 ಜೂನ್ 2013, 10:20 IST
ರಾಮದುರ್ಗ ತಾಲ್ಲೂಕಿನ ಸುನ್ನಾಳದ ನಿರಾಶ್ರಿತರಿಗಾಗಿ ಎತ್ತರ ಪ್ರದೇಶದಲ್ಲಿ ನಿರ್ಮಿಸಿದ `ಆಸರೆ' ಯೋಜನೆಯ ಮನೆಗಳು
ರಾಮದುರ್ಗ ತಾಲ್ಲೂಕಿನ ಸುನ್ನಾಳದ ನಿರಾಶ್ರಿತರಿಗಾಗಿ ಎತ್ತರ ಪ್ರದೇಶದಲ್ಲಿ ನಿರ್ಮಿಸಿದ `ಆಸರೆ' ಯೋಜನೆಯ ಮನೆಗಳು   

ರಾಮದುರ್ಗ: 2009ರ ಸೆಪ್ಟೆಂಬರ್‌ನಲ್ಲಿ ರಾಜ್ಯದೆಲ್ಲೆಡೆ ಸುರಿದ ಕುಂಭದ್ರೋಣ ಮಳೆಗೆ ನದಿ ಪಕ್ಕದ ಜನರು ಮನೆ-ಮಠ ಕಳೆದುಕೊಂಡರು. ಮಲಪ್ರಭೆಯ ಒಡಲು ತುಂಬಿ ಪ್ರವಾಹ ಉಂಟಾಗಿ ಅನೇಕರು ಆಸ್ತಿಪಾಸ್ತಿ ಕಳೆದುಕೊಂಡು ನಿರ್ಗತಿಕರಾದರು.

  ನೆರೆಸಂತ್ರಸ್ತರಿಗಾಗಿ ಆಗಿನ ಬಿಜೆಪಿ ಸರ್ಕಾರ `ಆಸರೆ' ಯೋಜನೆಯಡಿ ಮನೆ ನಿರ್ಮಿಸಲು ಮುಂದಾಯಿತು. ರಾಮದುರ್ಗ ತಾಲ್ಲೂಕಿನ ವಿವಿಧ ಕಡೆಗಳಲ್ಲಿ `ಆಸರೆ' ಮನೆಗಳ ನಿರ್ಮಾಣ ಕಾರ್ಯ ಸಹ ನಡೆಯಿತು.

ಅಂಥದರಲ್ಲಿ ತಾಲ್ಲೂಕಿನ ಸುನ್ನಾಳ ಗ್ರಾಮವೂ ಒಂದು. ಸುನ್ನಾಳ ಗ್ರಾಮದಿಂದ ಸುಮಾರು 2 ಕಿ.ಮೀ. ದೂರದ ಎತ್ತರದ ಪ್ರದೇಶದಲ್ಲಿ ಅಂದಿನ ಬಿಜೆಪಿ ಸರ್ಕಾರ ಸುಮಾರು 213 ಮನೆಗಳನ್ನು ನಿರ್ಮಿಸಿತು. ಅಂದಿನ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡರು ನವೆಂಬರ್ 6, 2011ರಂದು ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನ ಅಂಕಲಿ ಗ್ರಾಮದಲ್ಲಿ ತರಾತುರಿಯಲ್ಲಿ ಕೆಲವು ಫಲಾನುಭವಿಗಳನ್ನು ಕರೆಯಿಸಿ ಹಕ್ಕುಪತ್ರ ವಿತರಿಸಿದರು.

ಆದರೆ ಕನಿಷ್ಠ ಮೌಲಸೌಕರ್ಯದಿಂದ ವಂಚಿತವಾಗಿರುವ ಈ ಮನೆಗಳಲ್ಲಿ ಫಲಾನುಭವಿಗಳು ವಾಸ ಮಾಡುತ್ತಿಲ್ಲ. ಅವು ಈಗ ಅಕ್ರಮ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿವೆ.

`ಮನೆಗಳಿಗೆ ಶೌಚಾಲಯದ ವ್ಯವಸ್ಥೆಯಿಲ್ಲ. ಹಕ್ಕುಪತ್ರ ನೀಡಿಲ್ಲ. ಬೀದಿ ದೀಪಗಳಿಲ್ಲ, ರಸ್ತೆಯೂ ಇಲ್ಲ. ಮನೆಗಳ ಕಿಟಕಿ ಬಾಗಿಲು ಕಿತ್ತು ಹೋಗಿವೆ. ಇಂತಹ ಪರಿಸ್ಥಿತಿಯಲ್ಲಿ ಫಲಾನುಭವಿಗಳು ಹೇಗೆ ಜೀವಿಸಬೇಕು' ಎನ್ನುತ್ತಾರೆ ಫಲಾನುಭವಿ ಜಾವೀದ್ ಅಹ್ಮದ್ ಉಸ್ತಾದ್.

`ಆಸರೆ' ಯೋಜನೆಯಡಿ ನಿರ್ಮಿಸಿದ ಮನೆಗಳು ತೀರ ಕಳಪೆ ಮಟ್ಟದಲ್ಲಿವೆ. ನಿರ್ಮಾಣದ ಹಂತದಲ್ಲಿಯೂ ವಿರೋಧ ವ್ಯಕ್ತಪಡಿಸಿದರೂ ಪ್ರಯೋಜನವಾಗಲಿಲ್ಲ. ಅಗತ್ಯ ಸೌಲಭ್ಯಗಳನ್ನು ಮನೆಗಳಲ್ಲಿ ನಿರ್ಮಿಸಿಲ್ಲ. ಅಂತಹ ಮನೆಗಳನ್ನು ಹಸ್ತಾಂತರಿಸಿಕೊಳ್ಳುವುದು ಫಲಾನುಭವಿಗಳಿಗೆ ಬೇಡವಾಗಿದೆ. ಹೀಗಾಗಿ ಮನೆಗಳನ್ನು ಹಸ್ತಾಂತರಿಸಿಕೊಂಡಿಲ್ಲ' ಎಂದು ಗ್ರಾಮ ಪಂಚಾಯ್ತಿ ಸಿಬ್ಬಂದಿಯೊಬ್ಬರು ತಿಳಿಸಿದರು.

`ಸರ್ಕಾರದ ಹಣದಲ್ಲಿ ನಿರಾಶ್ರಿತರಿಗಾಗಿ ಒಟ್ಟು 213 ಮನೆಗಳನ್ನು ನಿರ್ಮಿಸಿದ್ದರೂ, ನೀರು, ವಿದ್ಯುತ್, ರಸ್ತೆಗಳಂಥ ಅಗತ್ಯ ಸೌಲಭ್ಯಗಳಿಂದ ವಂಚಿತವಾಗಿವೆ. ಬಿಜೆಪಿ ಸರ್ಕಾರ ತರಾತುರಿಯಲ್ಲಿ ಮನೆಗಳನ್ನು ನಿರ್ಮಿಸಿ ಸರ್ಕಾರದ ಹಣ ದುರ್ಬಳಕೆ ಮಾಡಿಕೊಂಡಿದೆ' ಎಂದು ಮಾಜಿ ಶಾಸಕ ಎನ್. ವಿ. ಪಾಟೀಲ ಆರೋಪಿದ್ದಾರೆ.

`ಮನೆಗಳ ಸುತ್ತಮುತ್ತ ಮುಳ್ಳುಕಂಟಿಗಳು ಬೆಳೆದು ವಿಷಜಂತುಗಳ ತಾಣವಾಗಿದೆ. ಕಿಟಕಿ ಬಾಗಿಲುಗಳು ಕಿತ್ತು ಹೋಗಿವೆ. ಶೌಚಾಲಯಕ್ಕೆ ಪರಿಕರಗಳ ಜೋಡಣೆ ಇಲ್ಲದೇ ತೊಂದರೆಯಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಮುತುವರ್ಜಿ ವಹಿಸಿ ಫಲಾನುಭವಿಗಳಿಗೆ ಮನೆ ಹಸ್ತಾಂತರಿಸಬೇಕು' ಎಂದು ಒತ್ತಾಯಿಸಿದರು.

`ಒಂದು ವರ್ಷದ ಹಿಂದೆ ಆಸರೆ ಮನೆಗಳನ್ನು ಆಯಾ ಗ್ರಾಮ ಪಂಚಾಯ್ತಿಗಳಿಗೆ ಹಸ್ತಾಂತರ ಮಾಡಲಾಗಿದೆ. ಅಲ್ಲಿ ಅಗತ್ಯ ಮೂಲಸೌಕರ್ಯ ಕಲ್ಪಿಸಿ, ಫಲಾನುಭವಿಗಳಿಗೆ ವಿತರಿಸಬೇಕಿರುವುದು ಗ್ರಾಮ ಪಂಚಾಯ್ತಿ' ಎಂದು ಭೂ ಸೇನಾ ನಿಗಮದ ಉಪ ನಿರ್ದೇಶಕ ಝಡ್.ಎಂ. ಚಿಂಚೋಳಿಕರ ತಿಳಿಸಿದ್ದಾರೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.