ಸವದತ್ತಿ: ಇಲ್ಲಿನ ಸ್ಥಳೀಯ ಯಂಗ್ ಜನರೇಷನ್ ಶಿಕ್ಷಣ ಸಂಸ್ಥೆ ಮತ್ತು ಎನ್ಕರೇಜ್ ಸಂಸ್ಥೆಯವರು ಜಂಟಿಯಾಗಿ ಭಾನುವಾರ, ಕೆಎಎಸ್, ಐಎಎಸ್ ಮತ್ತು ಐಪಿಎಸ್ ಪರೀಕ್ಷೆಗಳಲ್ಲಿ ಪಾಲ್ಗೊಳ್ಳುವ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಯನ್ನು ಏರ್ಪಡಿಸಿತ್ತು.
ಈ ಪರೀಕ್ಷೆಯಲ್ಲಿ ಪಾಲ್ಗೊಳ್ಳಲು ರಾಜ್ಯದ ರಾಜ್ಯಧಾನಿ ಬೆಂಗಳೂರು, ಮೈಸೂರು, ದಾವಣಗೇರಿ, ಬೀದರ-ಗುಲ್ಬರ್ಗ ಮುಂತಾದ ಕಡೆಗಳಿಂದ ಸುಮಾರು ಐದು ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಆಗಮಿಸಿದ್ದರು.
ಬಂದ ಎಲ್ಲ ಪರೀಕ್ಷಾರ್ಥಿಗಳ ಮನರಂಜನೆಗಾಗಿ ಒಂದು ಸುಂದರ ಕಾರ್ಯಕ್ರಮ ಆಯೋಜಿಸಲಾಗಿತ್ತು. ನೃತ್ಯ ಕಾರ್ಯಕ್ರಮ; ಅನುಭವಿಗಳಿಂದ, ಬುದ್ಧಿಜೀವಿಗಳಿಂದ ಉತ್ತಮ ಗುಣ ಮಟ್ಟದ ಉಪನ್ಯಾಸ ಏರ್ಪಡಿಸಲಾಗಿತ್ತು.
ಕಾರ್ಯಕ್ರಮದ ನಂತರ ಭಾರಿ ಭೋಜನ ಏರ್ಪಡಿಸಲಾಗಿತ್ತು. ಇಲ್ಲಿ ಗೋಧಿ ಹುಗ್ಗಿ, ಶೇಂಗಾ ಹೋಳಿಗೆ, ಜೋಳದ ರೊಟ್ಟಿ, ಚಪಾತಿ, ವಿವಿಧ ಬಗೆಯ ಚಟ್ನಿಗಳು, ಅನ್ನ-ಮೊಸರು ಊಟದ ವ್ಯವಸ್ಥೆ ಮಾಡಲಾಗಿತ್ತು.
ಇಲ್ಲಿಯೂ ವಿದ್ಯಾರ್ಥಿಗಳು, ಶಿಕ್ಷಕರು, ವ್ಯವಸ್ಥಾಪಕರು ಹೀಗೆ ಸುಮಾರು ಸಾವಿರ ಜನರು ಆಹಾರ ಭೋಜನ ಸ್ವಿಕರಿಸಿದರು.
ಆ ಮೇಲೆ ಮಧ್ಯಾಹ್ನ 3 ರಿಂದ 5ವರೆಗೆ ನಡೆದ ಸ್ಪರ್ಧಾತ್ಮಕ ಪರೀಕ್ಷೆ ನಡೆದು, ಎರಡು ವಿಭಾಗದಲ್ಲಿ 25 ಬ್ಲಾಕ್ನಲ್ಲಿ 500 ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಪಾಲ್ಗೊಂಡಿದ್ದರು. 40ಕ್ಕೂ ಹೆಚ್ಚು ಶಿಕ್ಷಕರು, ವ್ಯವಸ್ಥಾಪಕರು, ಜಾಗೃತ ದಳದವರು ಉಸ್ತುವಾರಿ ವಹಿಸಿದ್ದರು.
ಆನಂದ ಚೋಪ್ರಾ ಅವರ ಮಾರ್ಗದರ್ಶನದಲ್ಲಿ ಉಭಯ ಸಂಸ್ಥೆಗಳ ಸದಸ್ಯರು ಶ್ರಮಿಸಿದರು.ಈ ಪರೀಕ್ಷೆಯಲ್ಲಿ ಶೇ 100 ಅಂಕ ಪಡೆದವರಿಗೆ 25 ಸಾವಿರ ರೂಪಾಯಿ ಕೂಡುವುದಾಗಿ ಹೇಳಿದ ಆನಂದ ಚೋಪ್ರಾ ಅವರು, ಎಷ್ಟೇ ವಿದ್ಯಾರ್ಥಿಗಳು ಈ ಅಂಕ ಪಡೆದಿದ್ದರೂ ಈ ಬಹುಮಾನ ನೀಡಲಾಗುತ್ತದೆ ಎಂದರು.
ಮುಂದಿನ ಶೈಕ್ಷಣಿಕ ವರ್ಷದಲ್ಲಿ ಇಬ್ಬರು ಪ್ರತಿಭಾವಂತ ವಿದ್ಯಾರ್ಥಿಗಳ ಉನ್ನತ ಶಿಕ್ಷಣದ ಜವಾಬ್ದಾರಿ ತೆಗೆದುಕೊಳ್ಳುವುದಾಗಿ ಪ್ರಕಟಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.