ಬೆಳಗಾವಿ: ತಾಲ್ಲೂಕಿನ ಕಡೋಲಿ, ಜಾಫರವಾಡಿ ಮತ್ತು ಗುಂಜೇನಟ್ಟಿ ಗ್ರಾಮಗಳಲ್ಲಿ ಸುದೀರ್ಘ 38 ವರ್ಷಗಳ ನಂತರ ಐದು ದಿನಗಳವರೆಗೆ ನಡೆಯುತ್ತಿರುವ ಲಕ್ಷ್ಮೀದೇವಿ ಜಾತ್ರಾ ಮಹೋತ್ಸವಕ್ಕೆ ಮಂಗಳವಾರ ಸಂಭ್ರಮದ ಚಾಲನೆ ದೊರೆಯಿತು.
ಸೂರ್ಯೋದಯದ ಸಂದರ್ಭದಲ್ಲಿ ದೇವಿಯ ವಿವಾಹ ಸಮಾರಂಭದೊಂದಿಗೆ ಧಾರ್ಮಿಕ ಕಾರ್ಯಕ್ರಮಗಳನ್ನು ಉದ್ಘಾಟಿಸಲಾಯಿತು. ಮಧ್ಯಾಹ್ನ 12ರವರೆಗೆ ದೇವಿಯ ಉಡಿತುಂಬುವ ಕಾರ್ಯಕ್ರಮ ನಡೆಯಿತು. ನೂರಾರು ಮಹಿಳೆಯರು ಭಾಗವಹಿಸಿದ್ದರು. ನಂತರ ದೇವಿಯನ್ನು ರಥದಲ್ಲಿ ಕೂರಿಸಿ ರಥ ಎಳೆಯಲಾಯಿತು.
ಬುಧವಾರ ರಥದ ಮೆರವಣಿಗೆ ಮೂಲಕ ದೇವಿಯನ್ನು ಕರೆದೊಯ್ದು ಗದ್ದುಗೆಗೆ ಕೂರಿಸಲಾಗುವುದು. 28ರವ
ರೆಗೆ ಜಾತ್ರೆ ನಡೆಯಲಿದ್ದು, ವಿಧಿವಿಧಾನಗಳ ಮೂಲಕ ಸಾಂಪ್ರದಾಯಿಕ ಕಾರ್ಯಕ್ರಮಗಳು ಜರುಗಲಿವೆ. ಈ ಮೂರು ಗ್ರಾಮದವರು ಮಾತ್ರವಲ್ಲದೇ, ಸುತ್ತಮುತ್ತಲಿನ ನೂರಾರು ಮಂದಿ ಸಂಭ್ರಮದಲ್ಲಿ ಭಾಗಿಯಾಗುತ್ತಿದ್ದಾರೆ. ಮೊದಲ ದಿನ ಭಕ್ತರು ಪರಸ್ಪರ ಭಂಡಾರ ಹಾಕಿಕೊಂಡು ಸಂಭ್ರಮಿಸಿದರು.
ಮೂರೂ ಗ್ರಾಮಗಳಲ್ಲೂ ಹಬ್ಬದ ವಾತಾವರಣ ನಿರ್ಮಾಣವಾಗಿದ್ದು, ರಸ್ತೆಗಳು ವಿದ್ಯುದ್ದೀಪಾಲಂಕಾರದಿಂದ ಕಂಗೊಳಿಸುತ್ತಿವೆ. ಭಕ್ತರ ಅನುಕೂಲಕ್ಕಾಗಿ ಮೂಲಸೌಲಭ್ಯ ಒದಗಿಸಲಾಗಿದೆ.
ಮುಂಜಾಗ್ರತಾ ಕ್ರಮವಾಗಿ ಕಾಕತಿ ಠಾಣೆ ಪಿಎಸ್ಐ ವಸಂತ ಬಂಡಗಾರ ನೇತೃತ್ವದಲ್ಲಿ 100ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ.
ಮಾರುತಿ ದೇವರ ಓಕುಳಿ ಸಂಪನ್ನ
ಬೆಟಗೇರಿ (ಗೋಕಾಕ): ತಾಲ್ಲೂಕಿನ ಗೋಸಬಾಳ ಗ್ರಾಮದ ಮಾರುತಿ ದೇವರ ಓಕುಳಿ ಮೂರು ದಿನ ಸಡಗರದಿಂದ ಜರುಗಿ ಸಂಪನ್ನಗೊಂಡಿತು.
ಮಹಾರುದ್ರಾಭಿಷೇಕ, ಮಹಾಪೂಜೆ ಮತ್ತು ಕುಂಕುಮ ಪೂಜೆ, ಓಕುಳಿ ಕೊಂಡ ಪೂಜೆ ನಡೆಯಿತು. ಪೂಜೆ-, ಪುನಸ್ಕಾರ, ನೈವೈದ್ಯ ಅರ್ಪಣೆ, ಹರಕೆ ತಿರಿಸುವ ಕಾರ್ಯಕ್ರಮ ನಡೆಯಿತು.
ವಿವಿಧ ಗ್ರಾಮಗಳಿಂದ ದೇವರ ಪಲ್ಲಕ್ಕಿಗಳನ್ನು ವೈಭವದಿಂದ ಬರಮಾಡಿಕೊಳ್ಳಲಾಯಿತು. ಸ್ಥಳೀಯ ಹಾಗೂ ಸುತ್ತಲಿನ ಹಳ್ಳಿಗಳ ವಿವಿಧ ದೇವರುಗಳ ಓಕಳಿ ಕೊಂಡಕ್ಕೆ ಪಲ್ಲಕ್ಕಿ ಪ್ರದಕ್ಷೀಣೆ ಸಂಭ್ರಮದಿಂದ ನಡೆದ ಬಳಿಕ ನೀರು ಎರಚುವ ಕಡೆ ಓಕಳಿ ಜರುಗಿತು.
ಓಕುಳಿ ಉತ್ಸವ ಆಚರಣಾ ಸಮಿತಿ ಅಧ್ಯಕ್ಷ ಶಿವಾನಂದ ಬುಳ್ಳಿ, ರಾಮಯ್ಯ ಮಠದ, ಸತ್ತೆಪ್ಪ ಹೊಸಟ್ಟಿ, ಬಾಳಪ್ಪ ಬುಳ್ಳಿ, ಬಸವರಾಜ ಬುಳ್ಳಿ, ಸುರೇಶ ಮಠದ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.