ADVERTISEMENT

ಕಬ್ಬಿಗೆ ನಿಗದಿಯಾದ ದರ ನೀಡಲೇಬೇಕು: ಶಾಂತಕುಮಾರ

​ಪ್ರಜಾವಾಣಿ ವಾರ್ತೆ
Published 10 ಜನವರಿ 2014, 7:58 IST
Last Updated 10 ಜನವರಿ 2014, 7:58 IST

ಬೆಳಗಾವಿ: ‘ಸರ್ಕಾರ ನಿಗದಿಪಡಿಸಿರುವ ಪ್ರತಿ ಟನ್‌ ಕಬ್ಬಿಗೆ ರೂ. 2650 ಸಕ್ಕರೆ ಕಾರ್ಖಾನೆಗಳು ನೀಡಲೇಬೇಕು. ಸರ್ಕಾರ ಈ ಕುರಿತು ಒಂದು ವಾರ ದೊಳಗೆ ಕ್ರಮ ತೆಗೆದುಕೊಳ್ಳದಿದ್ದರೆ ಕಬ್ಬು ಬೆಳೆಯುವ ಜಿಲ್ಲೆಗಳ ಜಿಲ್ಲಾಧಿಕಾರಿ ಕಚೇರಿ ಎದುರು ಇದೇ 17ರಂದು ಪ್ರತಿಭಟನೆ ನಡೆಸಲಾಗು ವುದು. ಈ ಹೋರಾಟಕ್ಕೂ ಸ್ಪಂದಿಸ ದಿದ್ದರೆ 22ರಿಂದ ನಡೆಯುವ ಬೆಳಗಾವಿ ಅಧಿವೇಶನ ಸಂದರ್ಭದಲ್ಲಿ ವಿಧಾನ ಸೌಧದ ಎದುರು ನಿರಂತರ ಧರಣಿ ನಡೆಸಲಾಗುವುದು’ ಎಂದು ಕಬ್ಬು ಬೆಳೆಗಾರರ ಸಂಘದ ರಾಜ್ಯ ಅಧ್ಯಕ್ಷ ಕುರಬೂರು ಶಾಂತಕುಮಾರ ಹೇಳಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಕಬ್ಬು ಬೆಳೆಗಾರರ ಸಮಸ್ಯೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಕಬ್ಬಿಗೆ ದರ ನಿಗದಿಪಡಿಸಿ ಒಂದೂವರೆ ತಿಂಗಳಾ ದರೂ ಕಾರ್ಖಾನೆಗಳು ಈ ದರ ನೀಡುತ್ತಿಲ್ಲ. ಸರ್ಕಾರದ ಆದೇಶವನ್ನು ಕಾರ್ಖಾನೆಗಳು ಪಾಲಿಸುತ್ತಿಲ್ಲ. ಆದ್ದ ರಿಂದ ಅವುಗಳ ವಿರುದ್ಧ ಕ್ರಮ ಕೈಕೊಳ್ಳ ಬೇಕು ಎಂದು ಒತ್ತಾಯಿಸಿದರು.

ಸರ್ಕಾರದಲ್ಲಿರುವ ಸಚಿವರು, ಶಾಸಕರ ಒಡೆತನದಲ್ಲಿರುವ ಸಕ್ಕರೆ ಕಾರ್ಖಾನೆಗಳು ಸಹ ಶಾಸನಬದ್ಧ ಆದೇಶವನ್ನು ಧಿಕ್ಕರಿಸಿವೆ. ಸರ್ಕಾರದ ದೌರ್ಬಲ್ಯವನ್ನು ಇದು ಸಾರುತ್ತದೆ ಎಂದರು.

ರಾಜ್ಯದ 58 ಸಕ್ಕರೆ ಕಾರ್ಖಾನೆಗಳಲ್ಲಿ ಈಗಾಗಲೇ 1.10 ಕೋಟಿ ಟನ್‌ ಕಬ್ಬನ್ನು ನುರಿಸಲಾಗಿದೆ. 1.75 ಕೋಟಿ ಟನ್‌ ಬಾಕಿ ಇದ್ದು, ಮಾರ್ಚ್ ಅಂತ್ಯ ದೊಳಗೆ ನುರಿಸುವ ಕಾರ್ಯ ಮುಗಿಯಲಿದೆ. ರೈತರ ಕಬ್ಬು ಉಳಿಯುವ ಪ್ರಶ್ನೆಯೇ ಇಲ್ಲ. ಆದರೆ, ಕೆಲವು ಕಾರ್ಖಾನೆಗಳು ರೈತರ ದಿಕ್ಕು ತಪ್ಪಿಸಲು, ಹೋರಾಟ ಹತ್ತಿಕ್ಕಲು ಅಪಪ್ರಚಾರ ಮಾಡುತ್ತಿವೆ. ರೈತರು ಆತಂಕ ಪಡಬಾರದು ಎಂದರು.

ಪ್ರಕೃತಿ ವಿಕೋಪಕ್ಕೆ ಬೆಳೆ ನಷ್ಟ ವಾಗಿದ್ದು, ಅವುಗಳಿಗೂ ವೈಜ್ಞಾನಿಕ ಬೆಲೆ ನಿಗದಿಪಡಿಸಬೇಕು ಎಂದರು. ಬಾಬು ಉಪಾಸಿ, ಪಾರ್ವತಮ್ಮ ಕಳಸಣ್ಣವರ, ಈರಣ್ಣ ಅರಳಿಕಟ್ಟಿ, ರಮೇಶ ಹಿರೇಮಠ, ಮಲ್ಲಿಕಾರ್ಜುನ ಜಕಾತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.