ಬೆಳಗಾವಿ: ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರ ಮಾಲೀಕತ್ವದ ಸೌಭಾಗ್ಯ ಲಕ್ಷ್ಮೀ ಸಕ್ಕರೆ ಕಾರ್ಖಾನೆಗೆ ಕಬ್ಬು ಪೂರೈಸಿದ ರೈತರಿಗೆ ಪೂರ್ಣ ಹಣ ನೀಡಿಲ್ಲ. ಬಾಕಿ ಉಳಿದಿರುವ ಹಣವನ್ನು ಶೀಘ್ರ ನೀಡಬೇಕು ಎಂದು ಬೈಲಹೊಂಗಲ ತಾಲ್ಲೂಕಿನ ಅಂಬಡಗಟ್ಟಿ ಗ್ರಾಮದ ರೈತರು ಪ್ರತಿಭಟನೆ ಮಾಡಿದರು.
ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದ ಅವರು, 2013– 14 ಹಾಗೂ 2015–16ನೇ ಸಾಲಿನಲ್ಲಿ ಕಬ್ಬು ಪೂರೈಸಿದ್ದೆವು. ಆಗ ಸ್ವಲ್ಪ ಹಣವನ್ನು ಮಾತ್ರ ನೀಡಿ, ಇನ್ನುಳಿದ ಹಣವನ್ನು ಬೇಗನೇ ನೀಡುತ್ತೇವೆಂದು ಕಾರ್ಖಾನೆಯ ಆಡಳಿತ ಮಂಡಳಿ ಹೇಳಿತ್ತು. ಆದರೆ, 2–3 ವರ್ಷ ಕಳೆದರೂ ಹಣ ಪಾವತಿಯಾಗಿಲ್ಲ ಎಂದು ದೂರಿದರು.
ಕಾರ್ಖಾನೆಯ ಹಣ ಪಾವತಿ ಮಾಡುವಂತೆ ಹಲವು ಬಾರಿ ಮನವಿ ಸಲ್ಲಿಸಿದ್ದೆವು. ಕಾರ್ಖಾನೆ ಮುಂದೆ ಪ್ರತಿಭಟನೆಯೂ ಮಾಡಿದ್ದೆವು. ಅಧಿವೇಶನದ ವೇಳೆಯೂ ಪ್ರತಿಭಟನೆ ಮಾಡಿದ್ದೆವು. ಆದರೆ, ಇದ್ಯಾವುದಕ್ಕೂ ಕಾರ್ಖಾನೆಯವರು ಸ್ಪಂದಿಸಿಲ್ಲ. ಜಿಲ್ಲಾಧಿಕಾರಿಯವರು ಈ ಕೂಡಲೇ ಹಣ ಪಾವತಿಸುವಂತೆ ಕಾರ್ಖಾನೆಯ ಆಡಳಿತ ಮಂಡಳಿಗೆ ಆದೇಶ ನೀಡಬೇಕು ಎಂದು ಒತ್ತಾಯಿಸಿದರು.
ಸೂರ್ಯಕಾಂತ ಶೀಗೆಹಳ್ಳಿ, ಬಸಪ್ಪ ಚಿಕ್ಕೇರಿ, ಕಸ್ತೂರಿ ಹಳೇಮನಿ, ಮಂಜುನಾಥ ಹಿತ್ತಲಮನಿ, ಈರಪ್ಪ ಬೆಳವಡಿ, ಯಲ್ಲಪ್ಪ ಎಡಾಲ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.