ಚಿಕ್ಕೋಡಿ: ‘ಕಬ್ಬು ಬೆಳೆಯನ್ನು ಕಾಳಜಿಯಿಂದ ವೈಜ್ಞಾನಿಕ ರೀತಿಯಲ್ಲಿ ಬೆಳೆಸಿದರೆ ಎಕರೆಗೆ 40 ಟನ್ ಇಳುವರಿ ಬರುವಲ್ಲಿ 70 ಟನ್ ಪಡೆಯಲು ಸಾಧ್ಯ’ ಎಂದು ಇಲ್ಲಿನ ದೂಧ್ಗಂಗಾ ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಅಮಿತ್ ಕೋರೆ ಹೇಳಿದರು.
ತಾಲ್ಲೂಕಿನ ಅಂಕಲಿ ಗ್ರಾಮದ ಶಿವಾಲಯ ಅನುಭವ ಮಂಟಪದಲ್ಲಿ ಶುಕ್ರವಾರ ದೂಧ್ಗಂಗಾ ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆಯು ಪುಣೆಯ ಸ್ಮಾರ್ಟ್ಕೆಮ್ ಟೆಕ್ನಾಲಜಿಸ್ ಲಿ.ನ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕಬ್ಬು ಬೆಳೆ ವಿಚಾರ ಸಂಕಿರಣ ಮತ್ತು ದೂಧ್ಗಂಗಾ ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆಯ ಅಂಕಲಿ ಕಬ್ಬು ಸಂಶೋಧನಾ ಕೇಂದ್ರದಲ್ಲಿ ಆರಂಭಿಸಿ ರುವ ಕಿಶಾನ್ ಬಜಾರ್ಗಳ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
‘ಕೃಷ್ಣಾ, ದೂಧ್ಗಂಗಾ ನದಿ ಅಚ್ಚುಕಟ್ಟು ಪ್ರದೇಶದ ಭೂಮಿಗಳ ಸರಾಸರಿ ಎಕರೆವಾರು ಕಬ್ಬು ಇಳುವರಿ 40 ಟನ್ಗೆ ಇಳಿದಿದೆ. ಕಬ್ಬು ನಾಟಿಗೂ ಮುನ್ನ ಮಣ್ಣು ಪರೀಕ್ಷೆ ಮಾಡಿಸಿ, ಅಗತ್ಯಕ್ಕೆ ತಕ್ಕಂತೆ ರಸಾಯನಿಕ ಗೊಬ್ಬರ, ಭೂಮಿ ಆರೈಕೆ ಮಾಡುವ ಜೊತೆಗೆ ಹಿತಮಿತವಾಗಿ ನೀರು ಕೊಡುವ ಕೆಲಸವಾಗಬೇಕು’ ಎಂದರು.
ದೂಧ್ಗಂಗಾ ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆಯು ಅಂಕಲಿಯಲ್ಲಿರುವ ಕೇಂದ್ರದಲ್ಲಿ ಈಗಾಗಲೇ ಅತ್ಯಾಧುನಿಕ ಉಪಕರಣಗಳೊಂದಿಗೆ ಮಣ್ಣು ಪರೀಕ್ಷೆ, ಸೆಟ್ಲೈಟ್ ಮೂಲಕ ಬೆಳೆಗಳ ಪ್ರಗತಿ ಮೊದಲಾದ ಪ್ರಗತಿಪರ ಸವಲತ್ತುಗಳನ್ನು ಒದಗಿಸುತ್ತಿದೆ. ಮುಂಬರುವ ದಿನಗಳಲ್ಲಿ ನೀರಾವರಿ ಪಂಪಸೆಟ್, ಮೋಟಾರ್ ರಿವೈಡಿಂಗ್, ಟ್ಯಾಕ್ಟರ್ ಟೈರ್ ಮೊದಲಾದ ಗುಣಮಟ್ಟದ ಕೃಷಿ ಉಪಕರಣಗಳನ್ನೂ ಒದಗಿಸುವ ವ್ಯವಸ್ಥೆ ಕಲ್ಪಿಸಲಿದೆ’ ಎಂದು ತಿಳಿಸಿದರು.
ಮಹಾರಾಷ್ಟ್ರದ ಅಷ್ಟಾ ಗ್ರಾಮದ ಸಂಜೀವ ಮಾನೆ, ಕಾರ್ಖಾನೆ ಸಂಚಾಲಕ ರಾದ ಭರತೇಶ ಬನವಣೆ, ಅಜಿತ್ ದೇಸಾಯಿ, ತಾತ್ಯಾಸಾಹೇಬ್ ಕಾಟೆ, ರಾಮಚಂದ್ರ ನಿಶಾನದಾರ, ಸಂದೀಪ ಪಾಟೀಲ, ಮಹಾವೀರ ಮಿರ್ಜಿ, ಮಲ್ಲಪ್ಪ ಮೈಶಾಳೆ, ಚೇತನ ಪಾಟೀಲ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.