ಅಥಣಿ: ‘ಸರ್ಕಾರಿ ಕಚೇರಿಗಳು ಕಾಂಗ್ರೆಸ್ ಪಕ್ಷದವರ ಅಡ್ಡೆಗಳಾಗಿವೆ’ ಎಂದು ಶಾಸಕ ಲಕ್ಷ್ಮಣ ಸವದಿ ಗಂಭೀರ ಆರೋಪ ಮಾಡಿದರು.ತಾಲ್ಲೂಕಿನ ಗುಂಡೇವಾಡಿಯಲ್ಲಿ ಸೋಮವಾರ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.
‘ಜನಸಾಮಾನ್ಯರ ಪ್ರತಿ ಕೆಲಸಗಳೂ ಇಂತಹ ಏಜೆಂಟರ ಜೊತೆ ಹೋದರೆ ಮಾತ್ರ ಆಗುತ್ತವೆ ಎನ್ನುವಂತಹ ಸ್ಥಿತಿ ಇದೆ. ಇನ್ನು 30 ದಿನಗಳಲ್ಲಿ ಏಜೆಂಟರ ಹಾವಳಿ ತಪ್ಪಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.
‘ವೀರಶೈವ ಹಾಗೂ ಲಿಂಗಾಯತ ಪ್ರತ್ಯೇಕ ಎನ್ನುವುದು ಈಚೆಗೆ ಕಾಂಗ್ರೆಸ್ ಸೃಷ್ಟಿಸಿರುವ ರೋಗ. ಇವು ಎಂದಿಗೂ ಬೇರೆಯಲ್ಲ ಎನ್ನುವುದನ್ನು ಸಮುದಾಯದವರು ಮರೆಯಬಾರದು. ರಾಜಕೀಯ ದುರುದ್ದೇಶದಿಂದ ಜಾತಿ– ಜಾತಿಗಳ ನಡುವೆ ವಿಷ ಬೀಜಗಳನ್ನು ಬಿತ್ತಿ ಒಡೆದು ಆಳುವ ಹುನ್ನಾರ ಮಾಡುತ್ತಿರುವ ಕಾಂಗ್ರೆಸ್ನವರಿಗೆ ಮೇ 12ರಂದು ನಾಡಿನ ಜನರು ಪಾಠ ಕಲಿಸಲಿದ್ದಾರೆ’ ಎಂದು ಹೇಳಿದರು.
‘ಪವಿತ್ರವಾದ ಮತಗಳನ್ನು ಖರೀದಿಸಬಹುದು ಎಂದು ಮೆರೆಯುತ್ತಿದ್ದಾರೆ. ರೈತರ ರಕ್ತವನ್ನು ಹೀರಿದ ಪಾಪದ ದುಡ್ಡಿಗೆ ಸ್ವಾಭಿಮಾನಿ ಮತದಾರರು ಮರಳಾಗುವುದಿಲ್ಲ’ ಎಂದರು.
ವಿಧಾನಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ, ‘ಕಾಂಗ್ರೆಸ್ ನಡಿಗೆ ಕೃಷ್ಣೆಯ ಕಡೆಗೆ ಎಂದು ಪ್ರಮಾಣ ಮಾಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಪಕ್ಷ ಅಭಿವೃದ್ಧಿ ಕಾರ್ಯಗಳನ್ನು ಕಡೆಗಣಿಸಿದೆ. ಬಿಜೆಪಿ ಸರ್ಕಾರವಿದ್ದಾಗ ಮಂಜೂರಾದ ಬಸವೇಶ್ವರ ಏತ ನೀರಾವರಿ ಯೋಜನೆಯನ್ನು ನಿರ್ಲಕ್ಷಿಸಿತು. ಅಧಿಕಾರಕ್ಕೆ ಬಂದ ತಕ್ಷಣ ಚಾಲನೆ ನೀಡಿದ್ದರೆ ಇಷ್ಟೊತ್ತಿಗೆ ರೈತರ ಭೂಮಿಗೆ ನೀರು ಹರಿಯುತ್ತಿತ್ತು. ಇಲ್ಲಿ ಇಬ್ಬರು ಪ್ರಭಾವಿ ಬಿಜೆಪಿ ಶಾಸಕರಿದ್ದಾರೆ ಎಂಬ ಕಾರಣಕ್ಕೆ ವಿಳಂಬ ಮಾಡಿದರು. ಚುನಾವಣೆ ಹೊಸ್ತಿಲಲ್ಲಿ ಪ್ರಾರಂಭಿಸಿದರು’ ಎಂದು ಟೀಕಿಸಿದರು.
ಶಾಸಕರಾದ ಪಿ. ರಾಜೀವ ಹಾಗೂ ಭರಮಗೌಡ ಕಾಗೆ ಮಾತನಾಡಿದರು. ಜಿಲ್ಲಾ ಪಂಚಾಯ್ತಿ ಸದಸ್ಯ ಅಜಿತ ಚೌಗುಲೆ, ಕೃಷ್ಣಾ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಪರಪ್ಪಣ್ಣ ಸವದಿ, ಉಪಾಧ್ಯಕ್ಷ ಜ್ಯೋತಗೌಡ ಪಾಟೀಲ, ನಿರ್ದೇಶಕರಾದ ಗುರುಬಸು ತೇವರಮನಿ, ಗುಳಪ್ಪ ಜತ್ತಿ, ಮುಖಂಡರಾದ ಶೀತಲಗೌಡ ಪಾಟೀಲ, ನಿಂಗಪ್ಪ ಖೋಕಲೆ, ನಾಥಗೌಡ ಪಾಠೀಲ, ಸುಶೀಲಕುಮಾರ ಪತ್ತಾರ, ಗಜಾನನ ಯರಂಡೋಲಿ, ಬಾಹುಸಾಹೇಬ ಜಾಧವ, ಪ್ರಕಾಶ ಡೊಳ್ಳಿ, ರಾಮಗೌಡ ಪಾಟೀಲ, ಶಿದ್ರಾಯ ತೇಲಿ, ಶಿವಾನಂದ ಗೊಲಬಾವಿ, ಮಲ್ಲಿಕಾರ್ಜುನ ದಳವಾಯಿ ಭಾಗವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.