ಚಿಕ್ಕೋಡಿ: ‘ದೇಶದಲ್ಲಿ ಕಾಂಗ್ರೆಸ್ ಪಕ್ಷವು ಅಳಿವಿನ ಅಂಚಿನಲ್ಲಿದೆ. ಕಾಂಗ್ರೆಸ್ ದೇಶವನ್ನು ಅವನತಿಗೆ ಕೊಂಡೊಯ್ಯುವ ವಿಕೃತ ಭಾವ ತೋರುತ್ತಿದೆ’ ಎಂದು ಬಿಜೆಪಿಯ ಕರ್ನಾಟಕ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ತೇಜಸ್ವಿ ಸೂರ್ಯ ಹೇಳಿದರು.
ಪಟ್ಟಣದ ಕಿವಡ ಮೈದಾನದಲ್ಲಿ ಗುರುವಾರ ಚಿಕ್ಕೋಡಿ–ಸದಲಗಾ ವಿಧಾನಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅಣ್ಣಾಸಾಹೇಬ್ ಜೊಲ್ಲೆ ಪರ ಪ್ರಚಾರಾರ್ಥ ಹಮ್ಮಿಕೊಂಡಿದ್ದ ಯುವ ಸಮಾವೇಶದಲ್ಲಿ ಅವರು ಮಾತನಾಡಿದರು.
‘ನಾವೆಲ್ಲರೂ ಒಂದೇ, ನಾವೆಲ್ಲರೂ ಭಾರತೀಯರು ಎಂಬುದು ಬಿಜೆಪಿಯ ಧ್ಯೇಯವಾಗಿದ್ದು, ಪಕ್ಷದಲ್ಲಿ ತ್ಯಾಗ, ಬಲಿದಾನಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಸ್ವಾರ್ಥ, ಸ್ವಜನ ಪಕ್ಷಪಾತದಿಂದ ಪಕ್ಷ ದೂರ ಇದೆ. ಜನಪರ ಮತ್ತು ಜನಹಿತ ರಾಜಕಾರಣಕ್ಕೆ ಹೆಚ್ಚಿನ ಮಹತ್ವ ನೀಡಲಾಗಿದೆ. ಕಾಂಗ್ರೆಸ್ ಸ್ವಂತ ಲಾಭಕ್ಕಾಗಿ ಹಾಗೂ ಅಧಿಕಾರ ಕೇಂದ್ರಿಕರಣಕ್ಕೆ ಪ್ರಾಶಸ್ತ್ಯ ನೀಡಿ, ದೇಶ ಒಡೆಯುವ ರಾಜಕಾರಣ ಮಾಡುತ್ತಿದೆ’ ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ, ಅಭ್ಯರ್ಥಿ ಅಣ್ಣಾಸಾಹೇಬ ಜೊಲ್ಲೆ, ಮುಖಂಡ ನಂದು ಗಾಯಕವಾಡ, ಜಗದೀಶ ಕವಟಗಿಮಠ, ಬಸವಪ್ರಸಾದ ಜೊಲ್ಲೆ, ಚೇತನ ಪಾಟೀಲ, ಶಿವರಾಜ ಜೊಲ್ಲೆ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.