ADVERTISEMENT

`ಕಾಂಗ್ರೆಸ್, ಜೆಡಿಎಸ್‌ಗೆ ತಕ್ಕ ಪಾಠ'

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2013, 7:40 IST
Last Updated 25 ಏಪ್ರಿಲ್ 2013, 7:40 IST

ಬೆಳಗಾವಿ: `ಬಿಜೆಪಿಯು ಸಾಮಾಜಿಕ, ಶೈಕ್ಷಣಿಕ, ವೈದ್ಯಕೀಯ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಅಭಿವೃದ್ಧಿಯ ಪರ್ವವನ್ನೇ ಮಾಡಿದ್ದು, ಜನಸಾಮಾನ್ಯರ ವಿಶ್ವಾಸ ವನ್ನು ಗಳಿಸಿದೆ. ಹೀಗಾಗಿ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಸ್ಪಷ್ಟ ಬಹುಮತದೊಂದಿಗೆ ಪುನಃ ಅಧಿಕಾರದ ಗದ್ದುಗೆಗೆ ಏರಲಿದೆ' ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಪ್ರಹ್ಲಾದ್ ಜೋಶಿ ವಿಶ್ವಾಸ ವ್ಯಕ್ತಪಡಿಸಿದರು.

ಉದ್ಯಮಬಾಗದ ಫೌಂಡರಿ ಕ್ಲಸ್ಟರ್‌ನ ಸಭಾಭವನದಲ್ಲಿ ಬುಧವಾರ ಹಮ್ಮಿ ಕೊಂಡಿದ್ದ ಪಕ್ಷದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, `ಆಂತರಿಕ ಕಚ್ಚಾಟ ಹಾಗೂ ಭಿನ್ನಾಭಿಪ್ರಾಯಗಳಿಂದ ಬಿಜೆಪಿಯಲ್ಲಿ ಗೊಂದಲದ ವಾತಾವರಣ ಸೃಷ್ಟಿ ಯಾಗಿದ್ದು ನಿಜ. ಆದರೆ, ವಿಪಕ್ಷಗಳಾದ ಕಾಂಗ್ರೆಸ್, ಜೆಡಿಎಸ್ ಇದನ್ನೇ ಬಂಡವಾಳ ಮಾಡಿಕೊಂಡು ಪಕ್ಷದ ವಿರುದ್ಧ ಅಪಪ್ರಚಾರ ಮಾಡುತ್ತಿವೆ. ಸದ್ಯ ಪಕ್ಷದಲ್ಲಿನ ಎಲ್ಲ ಗೊಂದಲಗಳನ್ನು ನಿವಾರಿಸಿಕೊಂಡು ಒಗ್ಗಟ್ಟಿನಿಂದ ಚುನಾವಣಾ ಅಖಾಡಕ್ಕೆ ಇಳಿದಿದ್ದೇವೆ. ಆ ಪಕ್ಷಗಳಿಗೆ ನಾಡಿನ ಜನತೆ ಈ ಬಾರಿಯ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ' ಎಂದು ಗುಡುಗಿದರು.

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಸಮರ್ಥ ನಾಯಕತ್ವದಿಂದ ಪ್ರತಿಯೊಂದು ಹಳ್ಳಿಗಳಲ್ಲಿ ಗುಣಮಟ್ಟದ ರಸ್ತೆಗಳನ್ನು ನಿರ್ಮಿಸಿದ್ದಾರೆ. ಸರ್ವ ಶಿಕ್ಷಣ ಅಭಿಯಾನ ಯೋಜನೆಯನ್ನು ಜಾರಿಗೆ ತಂದು ಅಕ್ಷರಸ್ಥರ ಪ್ರಮಾಣದಲ್ಲಿ ಗಣನೀಯವಾಗಿ ಏರಿಕೆ ಮಾಡಿದ್ದಾರೆ. ಆದರೆ, ಪಕ್ಷದ ಏಳ್ಗೆಯನ್ನು ಸಹಿಸದ ವಿರೋಧ ಪಕ್ಷಗಳ ನಾಯಕರು ಅಪ ಪ್ರಚಾರ ಮಾಡುವುದರಲ್ಲಿ ತಲ್ಲೆನರಾ ಗಿದ್ದಾರೆ. ಅವರು, ಪ್ರತಿಪಕ್ಷಗಳ ವಿರುದ್ಧ ಇಲ್ಲ ಸಲ್ಲದ ಆರೋಪಗಳನ್ನು ಮಾಡು ವುದನ್ನು ಬಿಟ್ಟು, ಜನರ ಸಮಸ್ಯೆಗಳೆಡೆಗೆ ಗಮನ ಹರಿಸಿದ್ದರೆ ಅಭಿವೃದ್ಧಿ ಕಾರ್ಯಗಳನ್ನು ಮಾಡಬಹುದಿತ್ತು' ಎಂದು ತಿಳಿಸಿದರು.

`ಇಂದು ರಾಜಕಾರಣ ಪ್ರತಿಷ್ಠೆ ಹಾಗೂ ಹಣದ ಮೇಲೆ ನಿಂತಿದೆ. ಹೀಗಾಗಿ ಮತದಾರರು ಯಾವುದೇ ಆಸೆ, ಆಮಿಷಗಳಿಗೆ ಬಲಿಯಾಗದೇ ಸಚ್ಚಾರಿತ್ರ್ಯವುಳ್ಳ ಅಭ್ಯರ್ಥಿಗೆ ಮತ ಹಾಕಬೇಕು. ಅದೇ ತೆರನಾಗಿ ಪ್ರತಿ ಯೊಬ್ಬರು ಕಡ್ಡಾಯವಾಗಿ ಮತದಾನ ಮಾಡಬೇಕು' ಎಂದು ಹೇಳಿದರು.

ಶಾಕಸ ಅಭಯ ಪಾಟೀಲ ತಮ್ಮ ಅಧಿಕಾರಾವಧಿಯಲ್ಲಿ ಬೆಳಗಾವಿ ದಕ್ಷಿಣ ಕ್ಷೇತ್ರದಲ್ಲಿ ಹಲವಾರು ಅಭಿವೃದ್ಧಿ ಹೊಳೆಯನ್ನೇ ಹರಿಸಿದ್ದಾರೆ. ಕೆರೆ, ರಸ್ತೆ, ಉದ್ಯಾನಗಳನ್ನು ಅಭಿವೃದ್ಧಿ ಮಾಡುವು ದರ ಜೊತೆಗೆ ಸಾಂಸ್ಕೃತಿಕ, ಸಾಹಿತ್ಯಿಕ ಕ್ಷೇತ್ರಗಳಿಗೆ ಕೊಡುಗೆ ನೀಡಿದ್ದಾರೆ. ಮಕ್ಕಳಿಗಾಗಿ ವಿವಿಧ ಕಲಾತ್ಮಕ ಸ್ಪರ್ಧೆಗಳನ್ನು ಆಯೋಜಿಸಿದ್ದಾರೆ. ಹೀಗಾಗಿ ಬೆಳಗಾವಿ ದಕ್ಷಿಣ ಭಾಗದ ಮತದಾರರು ಅಭಯ ಪಾಟೀಲ ಅವರಿಗೆ ಬೆಂಬಲ ನೀಡಿ ಆರಿಸಿ ತರಬೇಕು ಎಂದು ಮನವಿ ಮಾಡಿದರು.

ಶಾಸಕ ಅಭಯ ಪಾಟೀಲ ಮಾತನಾಡಿ, `ತಾವು ತಮ್ಮ ಅಧಿಕಾರಾ ವಧಿಯಲ್ಲಿ ಬೆಳಗಾವಿ ದಕ್ಷಿಣ ಕ್ಷೇತ್ರವನ್ನು ಸಾಕಷ್ಟು ಅಭಿವೃದ್ಧಿಪಡಿಸಿದ್ದೇನೆ. ಹೀಗಾಗಿ ತಮಗೆ ಎಲ್ಲ ಮತದಾರರು ಬೆಂಬಲ ನೀಡಿ ಜನಸೇವೆ ಮಾಡಲು ಅವಕಾಶ ಕಲ್ಪಿಸಿ ಕೊಡಬೇಕು' ಎಂದರು.

`ನಾನು ಪುನಃ ಆಯ್ಕೆಯಾದರೆ ಕ್ಷೇತ್ರದಲ್ಲಿನ ಮೂಲ ಸಮಸ್ಯೆಗಳನ್ನು ನಿವಾರಿಸುತ್ತೇನೆ. 2000 ಎಕರೆಯಲ್ಲಿ ಐಟಿ ಪಾರ್ಕ್ ನಿರ್ಮಿಸಲಾಗುವುದು. 24 ಗಂಟೆ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುವುದು. ವರ್ತುಲ ರಸ್ತೆ ನಿರ್ಮಿಸಲಾಗುವುದು. ಕೈಗಾರಿಕಾ ಕ್ಷೇತ್ರ ಅಭಿವೃದ್ಧಿಪಡಿಸಿ, ಹೊಸ ಉದ್ಯೋಗಗಳನ್ನು ಸೃಷ್ಟಿಸಲಾಗುವುದು' ಎಂದು ತಿಳಿಸಿದರು.

ಕೆಜೆಪಿ ಕಾರ್ಯಕರ್ತರು ಪ್ರಹ್ಲಾದ ಜೋಶಿ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಗೊಂಡರು.ಬುಡಾ ಅಧ್ಯಕ್ಷ ಪರಮಾನಂದ ಗೋದ್ವಾನಿ ಬಿಜೆಪಿ ಮಹಾನಗರ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಬಿ. ಝಿರಲಿ, ದತ್ತಾ ಡೋರಲೆ, ವಿನಯ ಜಟಾರ, ಅನಿಲ ಬೆನಕೆ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.