ADVERTISEMENT

ಕಾರ್ಖಾನೆ ಕಾನೂನು ಉಲ್ಲಂಘಿಸಿಲ್ಲ: ಸಾಸಣೆ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2013, 6:13 IST
Last Updated 24 ಸೆಪ್ಟೆಂಬರ್ 2013, 6:13 IST

ನಿಪ್ಪಾಣಿ: ‘ಸುಕುಮಾರ ಪಾಟೀಲ ಬೂದಿಹಾಳಕರ ಅವರು ಕ್ಷುಲ್ಲಕ ಹೇಳಿಕೆ ನೀಡುವ ಮೂಲಕ ಕಾರ್ಖಾನೆಯ ಸದಸ್ಯರನ್ನು ತಪ್ಪು ದಾರಿಗೆ ಎಳೆಯುತ್ತಿ ದ್ದಾರೆ’ ಎಂದು ಶ್ರೀ ಹಾಲಸಿದ್ಧನಾಥ ಸಹಕಾರಿ ಸಕ್ಕರೆ ಕಾರ್ಖಾನೆಯ ಕಾರ್ಯಾಧ್ಯಕ್ಷ ಬಾಬಾಸಾಹೇಬ ಸಾಸಣೆ ಹೇಳಿದರು.

ಸಕ್ಕರೆ ಕಾರ್ಖಾನೆ ಮಾರಾಟದ ಹುನ್ನಾರ ನಡೆಸಿದ್ದಾರೆ ಎಂದು ಮಾಜಿ ಕಾರ್ಯಾಧ್ಯಕ್ಷ ಸುಕುಮಾರ ಪಾಟೀಲ  ಮಾಡಿದ ಆರೋಪದ ಹಿನ್ನೆಲೆಯಲ್ಲಿ  ಕಾರ್ಖಾನೆಯ ಸಭಾ ಭವನದಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

‘ಒಂಬತ್ತೂವರೆ ವರ್ಷಗಳ ಕಾಲ ಅಧಿಕಾರದಲ್ಲಿದ್ದರೂ ಒಬ್ಬ ಸದಸ್ಯ ರನ್ನೂ ಸೇರ್ಪಡೆ ಮಾಡಿಕೊಳ್ಳಲು ಆಗಲಿಲ್ಲ. ಕಾರ್ಖಾನೆಯ ಒಂದು ತಗಡನ್ನೂ ಬದಲಾಯಿಸಲಾಗಲಿಲ್ಲ. ಹೊಸ ಸದಸ್ಯರ ಸೇರ್ಪಡೆ ಕಾಯ್ದೆಯ ಪ್ರಕಾರವೇ ಮಾಡಲಾಗಿದ್ದು, ಕಾಯ್ದೆಯ ಉಲ್ಲಂಘನೆ ಮಾಡಿಲ್ಲ. ಅವ್ಯವಹಾರವೂ ನಡೆದಿಲ್ಲ. ಎಲ್ಲ ಸದಸ್ಯರು ಅ. 12ರಂದು ಜರುಗಲಿ ರುವ ಚುನಾವಣೆಯಲ್ಲಿ ಮತದಾನಕ್ಕೆ ಪಾತ್ರವಿದ್ದಾರೆ’ ಎಂದರು.

‘ಕಾರ್ಖಾನೆಯಲ್ಲಿ ಐದೂವರೆ ವರ್ಷಗಳಲ್ಲಿ ರಾಜಕಾರಣ ರಹಿತ ಆಡಳಿತ ನಡೆಸಿದ್ದೇವೆ. ಪ್ರಸಕ್ತ ಹಂಗಾ ಮಿನಲ್ಲಿ ಬೂದಿಹಾಳ ಗ್ರಾಮದಿಂದ 9000 ಟನ್‌ ಕಬ್ಬು ಪಡೆದದ್ದು ಇದಕ್ಕೆ ಒಂದು ಉದಾಹರಣೆಯಾಗಿದೆ. ಕಳೆದ ಐದು ವರ್ಷದಲ್ಲಿ ಸಿಬ್ಬಂದಿಗೆ ರೂ.29 ಕೋಟಿ ಸಂಬಳ ಮತ್ತು ರೂ..2.25 ಕೋಟಿ ಬೋನಸ್‌  ನೀಡಲಾಗಿದೆ. 2007–08ರಲ್ಲಿ ಕಾರ್ಖಾನೆಯ ಸಾಲ  ರೂ.30 ಕೋಟಿ ಇತ್ತು. ಕಬ್ಬು ನುರಿಸುವ ಕ್ಷಮತೆ ಹೆಚ್ಚಿಸಿದ್ದರಿಂದ ಈಗ ರೂ.71 ಕೋಟಿ ಸಾಲವಿದೆ. ರೂ.2500 ರಂತೆ ರೈತರಿಗೆ ಕಬ್ಬುದರ ಪಾವತಿಸಿದ್ದು ಕಬ್ಬು ಬಿಲ್ಲು ಬಾಕಿಯನ್ನು ಉಳಿಸಿಕೊಂಡಿಲ್ಲ’ ಎಂದು ಹೇಳಿದರು.

‘ಯಾವುದೇ ಆರೋಪಗಳಿದ್ದಲ್ಲಿ ಸಾಕ್ಷ್ಯಾಧಾರ ಒದಗಿಸಬೇಕು.  ಕಾರ್ಖಾನೆಯ ಹಿತದೃಷ್ಟಿಯಿಂದ ಚುನಾವಣೆ ಅವಕಾಶ ಕಲ್ಪಿಸದೆ  ಆಡಳಿತಾರೂಢ ಮಂಡಳಿಗೆ ಅವಿರೋಧವಾಗಿ ಆಯ್ಕೆ ಮಾಡಲು ಸಹಕರಿಸಬೇಕು’ ಎಂದರು. ಕಾರ್ಖಾನೆಯ ಉಪಕಾರ್ಯಾಧ್ಯಕ್ಷ ಆರ್‌.ಆರ್‌. ಪಾಟೀಲ, ಸಂಚಾಲಕ ಗಣೇಶ ಹುಕ್ಕೇರಿ, ಆರ್‌.ವೈ. ಪಾಟೀಲ, ಎಂ.ಪಿ. ಪಾಟೀಲ, ಎ.ಎಸ್‌. ಜೊಲ್ಲೆ, ಎ.ಎ.ಪಾಟೀಲ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.