ADVERTISEMENT

ಕೋಡಿಹಾಳಕ್ಕೆ ಬಸ್ ಸೌಲಭ್ಯ: ಪ್ರಯಾಣಿಕರಿಂದ ಧರಣಿ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2012, 8:35 IST
Last Updated 6 ಡಿಸೆಂಬರ್ 2012, 8:35 IST

ಹುನಗುಂದ: ತಮ್ಮ ಭಾಗಕ್ಕೆ ಸಾಕಷ್ಟು ಬಸ್ ಸೌಲಭ್ಯ ಇಲ್ಲದ್ದನ್ನೂ ಖಂಡಿಸಿ ಪ್ರತಿಭಟಿಸಿದ ಪ್ರಯಾಣಿಕರು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಮಂಗಳವಾರ ಇಲ್ಲಿನ ನಿಲ್ದಾಣದಲ್ಲಿ ಬಸ್ ತಡೆ ಮಾಡಿದರು.

ಸುಮಾರು ವರ್ಷಗಳಿಂದ ಈ ಬಗ್ಗೆ ವಿನಂತಿಸಿಕೊಂಡಾಗಲೂ ಪ್ರಯೋಜನವಾಗಿಲ್ಲ. ಈಚೆಗೆ ಹುನಗುಂದಕ್ಕೆ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಬಂದಾಗ ತಮ್ಮ ಸಮಸ್ಯೆಗಳನ್ನು ಹೇಳಿಕೊಂಡು ಮನವಿ ಕೊಡಲು ಬಂದರೆ ಅವಕಾಶ ಕೊಡಲಿಲ್ಲ ಎಂದು ಈ ಭಾಗದ ಪ್ರಯಾಣಿಕರು `ಪ್ರಜಾವಾಣಿ' ಮುಂದೆ ಅಳಲು ತೋಡಿಕೊಂಡರು.

ಕೋಡಿಹಾಳಕ್ಕೆ ಮಧ್ಯಾಹ್ನ 12ಕ್ಕೆ ಹೋದರೆ ಮತ್ತೆ ಸಂಜೆ 6ಕ್ಕೆ ಬಸ್ ಇರುವುದು. ಅಲ್ಲಿಯ ತನಕ ಜನರು ಏನು ಮಾಡಬೇಕು. ತಾಲ್ಲೂಕು ಸ್ಥಳವಾದ ಹುನಗುಂದಕ್ಕೆ ವಿವಿಧ ಕೆಲಸಕ್ಕೆ ಬರುವ ಜನರ ಅನಾವಶ್ಯಕ ಗೋಳು ಮತ್ತು ಖರ್ಚನ್ನು ಕೇಳುವವರಾರು. ಪ್ರತಿನಿತ್ಯ ಸಾಕಷ್ಟು ಜನರು ಶಿಕ್ಷಕರು ಮತ್ತು ವಿವಿಧ ಇಲಾಖೆ ನೌಕರರು ಪರದಾಡುವುದನ್ನು ನೋಡಬಾರದು ಎಂದರು. ಬಸ್ ಇಲ್ಲದ್ದಕ್ಕೆ ಖಾಸಗಿಯವರ ಹಾವಳಿ ಹೆಚ್ಚಿದೆ.

ಧರಣಿ ವೇಳೆಗೆ ಯುವಕರು ರಸ್ತೆಯಲ್ಲಿ ಮಲಗಿ ಪ್ರತಿಭಟಿಸಿದರು. ಸಕಾಲಕ್ಕೆ ಬಂದ ಪೊಲೀಸರು ಜನರನ್ನು ಚದುರಿಸಿದ್ದಲ್ಲದೇ ಸೂಕ್ತ ತಿಳಿವಳಿಕೆ ಹೇಳಿದರು ಎನ್ನಲಾಗಿದೆ. ಜನರಿಲ್ಲದ ಕಡೆಯಲ್ಲಿ ಕರಿ ಎತ್ತಿನಂತೆ ಬಸ್ ಓಡಿಸುವ ಸಾರಿಗೆ ಇಲಾಖೆ ಈ ಜನರ ಸಮಸ್ಯೆಗಳತ್ತ ತಕ್ಷಣ ಕಣ್ಣು ಹಾಯಿಸಲಿ. ಇಲ್ಲದಿದ್ದರೆ ಈ ಭಾಗದ ಜನರಿಂದ ಹೋರಾಟ ಅನಿವಾರ್ಯವಾದಿತೆಂದು ನಾಗರಿಕ ಸೇವಾ ಹೋರಾಟ ಸಮಿತಿ ಅಧ್ಯಕ್ಷ ಬಸವರಾಜ ಕಮ್ಮಾರ ಎಚ್ಚರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.