ADVERTISEMENT

ಗುಣಮಟ್ಟದ ವೈದ್ಯಕೀಯ ಸೇವೆ ಅಗತ್ಯ: ಕೋರೆ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2012, 7:50 IST
Last Updated 8 ನವೆಂಬರ್ 2012, 7:50 IST

ಬೆಳಗಾವಿ: `ಇಂದು ವಿಶ್ವದಾದ್ಯಂತ ಎಲ್ಲ ಕ್ಷೇತ್ರಗಳಲ್ಲೂ ಗುಣಮಟ್ಟದ ಚರ್ಚೆ ನಡೆಯುತ್ತಿರುವುದರಿಂದ ವಿಶೇಷವಾಗಿ ವೈದ್ಯ ಶಿಕ್ಷಣ ಮತ್ತು ವೈದ್ಯಕೀಯ ಸೇವೆಯಲ್ಲಿ ಗುಣಮಟ್ಟ ಕಾಯ್ದುಕೊಳ್ಳುವುದು ಅತಿ ಮುಖ್ಯವಾಗಿದೆ~ ಎಂದು ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ಹೇಳಿದರು.

ಕೆಎಲ್‌ಇ ವಿಶ್ವವಿದ್ಯಾಲಯ, ಜವಾಹರಲಾಲ್ ನೆಹರು ವೈದ್ಯಕೀಯ ಮಹಾವಿದ್ಯಾಲಯ, ಡಾ. ಪ್ರಭಾಕರ ಕೋರೆ ಆಸ್ಪತ್ರೆ ಮತ್ತು ವೈದ್ಯಕೀಯ ಸಂಶೋಧನಾ ಕೇಂದ್ರ, ಭಾರತೀಯ ಗ್ಯಾಸ್ಟ್ರೋಎಂಟ್ರಾಲಜಿ ಸಂಸ್ಥೆಯ ರಾಜ್ಯ ಘಟಕ ಹಾಗೂ ಡೆಕ್ಕನ್ ಗ್ಯಾಸ್ಟ್ರೋ ಇಂಟೆಸ್ಟೈನಲ್ ಎಂಡೊಸ್ಕೋಪಿಸ್ಟ್ಸ್ ಸಂಸ್ಥೆಯ ಆಶ್ರಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ `ಗ್ಯಾಸ್ಟ್ರೋಕಾನ್ 2012~ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

`ಗುಣಮಟ್ಟದ ಜ್ಞಾನಾರ್ಜನೆಯು ನಡೆಯಬೇಕು. ವೈದ್ಯಕೀಯ ಮೂಲಸೌಲಭ್ಯ ಮತ್ತು ವಿಶ್ವ ದರ್ಜೆಯ ಗುಣಮಟ್ಟವನ್ನು ನೀಡು ವಂತಾಗಬೇಕು~ ಎಂದರು.

`ಆರ್ಥಿಕವಾಗಿ ಅತ್ಯಂತ ಹಿಂದುಳಿದ ಜನರಿಗೆ ಗುಣಮಟ್ಟದ ವೈದ್ಯಕೀಯ ಸೌಲಭ್ಯ ಅತ್ಯಂತ ಕಡಿಮೆ ದರದಲ್ಲಿ ಲಭಿಸುವಂತಾಗಬೇಕು. ವೈದ್ಯಕೀಯ ಆಡಳಿತಗಾರರು ಅದನ್ನು ಸವಾಲಾಗಿ ಸ್ವೀಕರಿಸಿ, ವೈದ್ಯಕೀಯ ಕ್ಷೇತ್ರ ದಲ್ಲಾ ಗುತ್ತಿರುವ ಸಂಶೋಧನೆಯು ಕಟ್ಟ ಕಡೆಯ ವ್ಯಕ್ತಿಗೆ ತಲುಪಿಸಿ, ಆರೋಗ್ಯ ಯುತ ಸಮಾಜ ನಿರ್ಮಿಸಬೇಕು. ಮುಂಬರುವ ಶೈಕ್ಷಣಿಕ ವರ್ಷದಿಂದ ಗ್ಯಾಸ್ಟ್ರೋಎಂಟ್ರಾ ಲಾಜಿ ಯಲ್ಲಿ ಸ್ನಾತ್ತಕೋತ್ತರ ಪದವಿಯನ್ನು ಪ್ರಾರಂಭಿಸಲಾಗುವುದು~ ಎಂದು ತಿಳಿಸಿದರು.

ಕೆಎಲ್‌ಇ ವಿಶ್ವವಿದ್ಯಾಲಯದ ಕುಲಪತಿ ಡಾ. ಚಂದ್ರಕಾಂತ ಕೊಕಾಟೆ, `ವೈದ್ಯಕೀಯ ಶಿಕ್ಷಣದಲ್ಲಿ ಸದಾ ಸಂಶೋಧನೆ ಇರಲೇಬೇಕು. ವೈದ್ಯಕೀಯ ರಂಗ ಅತ್ಯಂತ ಅಭಿವದ್ಧಿ ಪಥದಲ್ಲಿ ಸಾಗುತ್ತಿದೆ. ಅತ್ಯಾಧುನಿಕ ತಂತ್ರಜ್ಞಾನ ಬಳಸಿಕೊಂಡು ಆರೋಗ್ಯ ಸೇವೆಯನ್ನು ಇನ್ನೂ ಉತ್ತಮಗೊಳಿಸಬೇಕಾಗಿದೆ. ಕೌಶಲ್ಯವನ್ನು ವಿನಿಮಯ ಮಾಡಿ ಕೊಳ್ಳಲು ಸಂಪನ್ಮೂಲ ವ್ಯಕ್ತಿಗಳು ಪ್ರಮುಖ ಪಾತ್ರ ವಹಿಸುತ್ತಾರೆ~ ಎಂದು ಅಭಿಪ್ರಾಯಪಟ್ಟರು.

ಅಂತರರಾಷ್ಟ್ರೀಯ ಖ್ಯಾತಿಯ ಶಸ್ತ್ರಚಿಕಿತ್ಸಕರಾದ ಬೆಳಗಾವಿ ಮೂಲದ ಮುಂಬೈನ ಡಾ. ವಿ.ಎನ್. ಶ್ರೀಖಂಡೆ ಹಾಗೂ ಡಾ. ಶರದ್ ಶಾಹ ಅವರನ್ನು ಡಾ. ಪ್ರಭಾಕರ ಕೋರೆ ಸತ್ಕರಿಸಿದರು.

ಗ್ಯಾಸ್ಟ್ರೋಕಾನ್ ಸಂಘಟನಾ ಕಾರ್ಯದಶಿ ಡಾ. ಸಂತೋಷ ಹಜಾರೆ ಸ್ವಾಗತಿಸಿದರು. ಭಾರತೀಯ ಗ್ಯಾಸ್ಟ್ರೋ ಎಂಟ್ರಾಲಜಿ ಸಂಸ್ಥೆಯ ರಾಜ್ಯ ಘಟಕದ ಕಾರ್ಯದರ್ಶಿ ಡಾ. ಸತ್ಯ ಪ್ರಕಾಶ ಸಂಸ್ಥೆಯ ವಾರ್ಷಿಕ ವರದಿಯನ್ನು ವಾಚಿಸಿದರು. ಸಂಸದ ಸುರೇಶ ಅಂಗಡಿ, ಡಾ. ಬಿ.ವಿ. ತಂತ್ರಿ, ಡಾ. ಮೋಹನ್ ಜೈನ್, ಡಾ.ಎ.ಎಸ್. ಗೋಧಿ, ಡಾ. ವಿ.ಡಿ. ಪಾಟೀಲ, ಡಾ. ಎಂ.ವಿ. ಜಾಲಿ ವೇದಿಕೆ ಮೇಲೆ ಹಾಜರಿದ್ದರು. ಡಾ. ವಿ.ಎ. ಕೋಠಿವಾಲೆ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.