ಬೆಳಗಾವಿ: ಚಳಿಗಾಲದ ಅಧಿವೇಶನದಲ್ಲಿ ಗೋ ಹತ್ಯೆ ನಿಷೇಧ ಮಸೂದೆಯನ್ನು ಅಂಗೀಕರಿಸಿ ಬಹುಸಂಖ್ಯಾತರ ಮೇಲೆ ಆಹಾರದ ಬಗ್ಗೆ ರಾಜ್ಯದ ಬಿಜೆಪಿ ಸರ್ಕಾರ ನಿರ್ಭಂಧ ಹೇರುತ್ತಿದೆ. ರಾಜ್ಯಪಾಲರು ಈ ಮಸೂದೆಗೆ ಅಂಕಿತ ಹಾಕಬಾರದು ಎಂದು ಸೇಫ್- ವಾರ್ಡ್ ಸಂಸ್ಥೆ ಸದಸ್ಯರು ಹೆಚ್ಚುವರಿ ಜಿಲ್ಲಾಧಿಕಾರಿ ಡಾ. ವಿ.ಎಸ್.ಚೌಗಲಾ ಅವರ ಮೂಲಕ ಮಂಗಳವಾರ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ದಲಿತ ಮತ್ತು ಅಲ್ಪಸಂಖ್ಯಾತರ ಸಮುದಾಯಗಳ ರಕ್ಷಣೆಗೆ ಮುಂದಾಗಿಲ್ಲ. ಅವರ ಆಹಾರದ ಮೇಲೆ ನಿರ್ಬಂಧ ಹೇರುತ್ತಿದೆ. ಸರ್ಕಾರ ತನ್ನ ರಾಜಕೀಯ ಲಾಭಕ್ಕಾಗಿ ಈ ಮಸೂದೆಗೆ ಕೈಹಾಕ್ಕಿದ್ದು, ರಾಜ್ಯಪಾಲರು ಮಸೂದೆಗೆ ಸಹಿ ಹಾಕಬಾರದು.
ಆಹಾರ ಸೇವನೆ ಆಯಾ ಸಮುದಾಯಕ್ಕೆ ಬಿಟ್ಟ ವಿಚಾರ. ಇಂತಹದ್ದೇ ಆಹಾರ ಸೇವಿಸಿ ಎಂದು ಹೇಳುವ ಹಕ್ಕು ಯಾರಿಗೂ ಇಲ್ಲ. ಸರ್ಕಾರದ ಈ ನಿರ್ಧಾರ ಬಹುಸಂಖ್ಯಾತ ದಲಿತ ಸಮುದಾಯವನ್ನು ಕೆರಳಿಸುವಂತಿದೆ ಎಂದು ಮನವಿಯಲ್ಲಿ ಹೇಳಲಾಗಿದೆ.
ಸರ್ಕಾರಕ್ಕೆ ಪ್ರಾಣಿ-ಪಕ್ಷಿ ಹಾಗೂ ಇತರೆ ಜೀವರಾಶಿಗಳ ಮೇಲೆ ದಯೆ ಇದ್ದರೆ, ಎಮ್ಮೆ, ಕುರಿ, ಕೋಳಿ, ಮೀನು ಸೇವನೆಗಳ ಮೇಲೆ ನಿರ್ಭಂಧ ಹೇರಲಿ. ಸರ್ಕಾರ ಈ ಮಸೂದೆಯನ್ನು ಜಾರಿಗೆ ತಂದರೆ ರಾಜ್ಯಾದ್ಯಂತ ದಲಿತಪರ ಸಂಘಟನೆಗಳು ಕೂಡಿ ಪ್ರತಿಭಟನೆ ನಡೆಸಲಿವೆ ಎಂದು ಮನವಿಯಲ್ಲಿ ಎಚ್ಚರಿಕೆ ನೀಡಲಾಗಿದೆ.
ಸಂಸ್ಥೆಯ ಅಧ್ಯಕ್ಷ ಸಂತೋಷ ಮೇತ್ರಿ, ದಲಿತ ಸಂಘರ್ಷ ಸಮಿತಿಯ ಅಶೋಕ ಐನಾವರ, ಮಲ್ಲೆೀಶ ಕೋಲಕಾರ, ದಲಿತ ಪ್ರಗತಿಪರ ಸೇನೆ ಜಿಲ್ಲಾ ಅಧ್ಯಕ್ಷ ಶಿವಪುತ್ರ ಮೇತ್ರಿ, ಶ್ರೀ ಕಾಂತ ಯಳವಾರ ಹಾಗೂ ಇತರರು ಮನವಿ ಸಲ್ಲಿಸುವ ಸಂದರ್ಭ ದಲ್ಲಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.