ADVERTISEMENT

ಚುನಾವಣಾ ಕರ್ತವ್ಯಕ್ಕೆ ಸಿಬ್ಬಂದಿ ಕೊರತೆ

ಮಾದರಿ ನೀತಿ ಸಂಹಿತೆ ಅನುಷ್ಠಾನ ಸಭೆಯಲ್ಲಿ ಜಿಲ್ಲಾಧಿಕಾರಿ ಎಸ್‌. ಜಿಯಾವುಲ್ಲಾ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2018, 7:31 IST
Last Updated 22 ಮಾರ್ಚ್ 2018, 7:31 IST

ಬೆಳಗಾವಿ: ‘ಮುಂಬರುವ ವಿಧಾನಸಭೆ ಚುನಾವಣೆಗೆ ಸಿಬ್ಬಂದಿ ಕೊರತೆ ಕಂಡುಬಂದಿದ್ದು, ಎಲ್ಲ ಇಲಾಖೆಗಳು ಹಾಗೂ ಸರ್ಕಾರಿ ಸಂಸ್ಥೆಗಳು ತಮ್ಮ ವ್ಯಾಪ್ತಿಯ ನೌಕರರ ಬಗ್ಗೆ ತಕ್ಷಣವೇ ಮಾಹಿತಿ ಒದಗಿಸಬೇಕು. ವಿಳಂಬವಾದಲ್ಲಿ ಜನತಾ ಪ್ರಾತಿನಿಧ್ಯ ಕಾಯ್ದೆ ಪ್ರಕಾರ ಕ್ರಮ ಕೈಗೊಳ್ಳುವುದು ಅನಿವಾರ್ಯವಾಗುತ್ತದೆ’ ಎಂದು ಜಿಲ್ಲಾ ಚುನಾವಣಾಧಿಕಾರಿ ಎಸ್. ಜಿಯಾವುಲ್ಲಾ ಹೇಳಿದರು.

ಬುಧವಾರ ನಡೆದ ಮಾದರಿ ನೀತಿಸಂಹಿತೆ ಅನುಷ್ಠಾನ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಚುನಾವಣೆ ಸುಗಮವಾಗಿ ನಡೆಸಬೇಕಾದರೆ ಅಗತ್ಯ ಸಿಬ್ಬಂದಿ ನಿಯೋಜನೆ ಅತ್ಯಗತ್ಯ. ಆದ್ದರಿಂದ ಈ ಕರ್ತವ್ಯದಿಂದ ಯಾರಿಗೂ ವಿನಾಯಿತಿ ನೀಡುವುದಿಲ್ಲ. ಪ್ರತಿ ನೌಕರರೂ ಚುನಾವಣಾ ಕೆಲಸ ಮಾಡಬೇಕು’ ಎಂದು ಸ್ಪಷ್ಟಪಡಿಸಿದರು.

ADVERTISEMENT

‘ನೀತಿಸಂಹಿತೆ ಜಾರಿಯಾದ 24 ಗಂಟೆಯೊಳಗೆ ನಾಮಫಲಕ, ಬ್ಯಾನರ್‌, ಬಂಟಿಂಗ್‌ ಹಾಗೂ ಪೋಸ್ಟ್‌ರ್‌ಗಳನ್ನು ತೆರವುಗೊಳಿಸಲು ತಂಡಗಳನ್ನು ರಚಿಸಬೇಕು. ಅಗತ್ಯ ಪರಿಕರಗಳನ್ನು ಈಗಿನಿಂದಲೇ ಸಜ್ಜಾಗಿ ಇಟ್ಟುಕೊಳ್ಳುಬೇಕು’ ಎಂದು ತಿಳಿಸಿದರು.

‘ಖಾಸಗಿ ಜಾಗದಲ್ಲಿ ಬ್ಯಾನರ್, ಬಂಟಿಂಗ್‌, ಪೋಸ್ಟರ್‌ ಮೊದಲಾದ ಜಾಹಿರಾತುಗಳನ್ನು ಪ್ರದರ್ಶಿಸಲು ನೀತಿಸಂಹಿತೆಯ ನಿಯಮಗಳ ಪ್ರಕಾರ ಜಾಗದ ಮಾಲೀಕರು ಆ ಭಾಗದ ಸ್ಥಳೀಯ ಪ್ರಾಧಿಕಾರದಿಂದ ಪರವಾನಗಿ ಪಡೆಯಬೇಕು. ಆರೋಗ್ಯ ಇಲಾಖೆಯ ಆಂಬುಲೆನ್ಸ್‌–108 ಹಾಗೂ ಇತರ ವಾಹನಗಳ ಮೇಲೆ ರಾಜಕೀಯ ನಾಯಕರ ಭಾವಚಿತ್ರಗಳನ್ನು ತೆರವುಗೊಳಿಸಬೇಕು. ಇಲಾಖೆಯ ಜಾಲತಾಣಗಳಿಗೂ ಇದು ಅನ್ವಯವಾಗುತ್ತದೆ. ಜಿಲ್ಲಾಮಟ್ಟದ ಜಾಲತಾಣವಾಗಿದ್ದರೆ ಜಿಲ್ಲಾಮಟ್ಟದ ಅಧಿಕಾರಿಗಳೇ ಕ್ರಮ ಕೈಗೊಳ್ಳಬೇಕು’ ಎಂದು ಹೇಳಿದರು.

‘ನೀತಿಸಂಹಿತೆ ಜಾರಿಯಾದ ನಂತರ ಹೊಸ ಸರ್ಕಾರಿ ಕಾಮಗಾರಿಗಳನ್ನು (ಕಟ್ಟದ ನಿರ್ಮಾಣ, ಇತರ) ಪ್ರಾರಂಭಿಸುಂತಿಲ್ಲ ಮತ್ತು ಈಗಾಗಲೇ
ಪ್ರಾರಂಭಿಸಿದ್ದರೆ ಮುಂದುವರಿಸಬಹುದು. ನರೇಗಾ ಹಾಗೂ ಇತರ ಯೋಜನೆಗಳಿಗೆ ಸಂಬಂಧಿಸಿದಂತೆ ಯಾವುದೇ ರೀತಿಯ ಹೊಸ ಫಲಾನು
ಭವಿಗಳನ್ನು ಆಯ್ಕೆ ಮಾಡುವಂತಿಲ್ಲ ಹಾಗೂ ಹೊಸ ಕಾಮಗಾರಿ ಪ್ರಾರಂಭಿಸುಂತಿಲ್ಲ’ ಎಂದರು.

‘ಚುನಾವಣೆಗೆ ನಿಯೋಜಿಸಲ್ಪಟ್ಟ ಸಿಬ್ಬಂದಿ ನೀತಿಸಂಹಿತೆ ಜಾರಿಯಲ್ಲಿರುವ ಅವಧಿಯಲ್ಲಿ ಯಾವುದೇ ರಾಜಕೀಯ ನಾಯಕರು, ಅಭ್ಯರ್ಥಿ ಮತ್ತು ಮುಖಂಡರ ಭೇಟಿ ಮಾಡಬಾರದು. ಯಾವುದೇ ರೀತಿಯಲ್ಲಿಯೂ ಸಂಪರ್ಕ ಇಟ್ಟುಕೊಳ್ಳಬಾರದು’ ಎಂದು ಸೂಚಿಸಿದರು.

ನೀತಿಸಂಹಿತೆ ಜಾರಿಗೆ ತರಲು ಅನುಕೂಲವಾಗುವಂತೆ ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ, ಕಂದಾಯ ನಿರೀಕ್ಷಕರು ಹಾಗೂ ಗ್ರಾಮ ಲೆಕ್ಕಾಧಿಕಾರಿ ಒಳಗೊಂಡ ತಂಡ ರಚಿಸುವಂತೆ ಜಿಲ್ಲಾ ಪಂಚಾಯ್ತಿ ಸಿಇಒ ಆರ್‌. ರಾಮಚಂದ್ರನ್ ತಿಳಿಸಿದರು.

ನಗರ ಸ್ಥಳೀಯ ಸಂಸ್ಥೆಗಳ ಮಟ್ಟದಲ್ಲಿ ಮುಖ್ಯಾಧಿಕಾರಿ, ತಹಶೀಲ್ದಾರ್‌ ಹಾಗೂ ಪಿಎಸ್‌ಐ ಒಳಗೊಂಡ ತಂಡಗಳನ್ನು ರಚಿಸಬೇಕು ಎಂದರು.

ಮಾದರಿ ನೀತಿಸಂಹಿತೆ ನೋಡಲ್ ಅಧಿಕಾರಿ ರಮೇಶ ಕಳಸದ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.