ADVERTISEMENT

`ಜಾಗೃತಿಯಿಂದ ಯೋಜನೆ ಯಶಸ್ವಿ'

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2013, 6:45 IST
Last Updated 2 ಸೆಪ್ಟೆಂಬರ್ 2013, 6:45 IST

ಯರಗಟ್ಟಿ (ಬೈಲಹೊಂಗಲ): `ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ಜನರಿಗೆ ಆರೋಗ್ಯ ಸೇವೆಗಳ ಬಗ್ಗೆ ಸಮರ್ಪಕವಾಗಿ ತಿಳಿವಳಿಕೆ ನೀಡಿದರೆ ಸರ್ಕಾರದ ಯೋಜನೆಗಳು ಯಶಸ್ವಿಯಾಗಿ ಅನುಷ್ಠಾನಗೊಳ್ಳಲಿವೆ' ಎಂದು ಎಂದು ಕೆಎಲ್‌ಇ ಸಂಸ್ಥೆ ನಿರ್ದೇಶಕ ಡಾ. ವಿ.ಎಸ್. ಸಾಧುನವರ ಹೇಳಿದರು.

ಬೆಳಗಾವಿಯ ಜವಾಹರಲಾಲ್ ನೆಹರೂ ವೈದ್ಯಕೀಯ ಕಾಲೇಜು ಸುವರ್ಣ ಮಹೋತ್ಸವ ಅಂಗವಾಗಿ ಜಿಲ್ಲಾ ಆರೋಗ್ಯ ಇಲಾಖೆ, ಕೆಎಲ್‌ಇ ಡಾ.ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರ, ಬೈಲಹೊಂಗಲದ ಕಿತ್ತೂರ ರಾಣಿ ಚನ್ನಮ್ಮ ಅರ್ಬನ್ ಕ್ರೆಡಿಟ್ ಸೌಹಾರ್ದ ಸಹಕಾರಿ ನಿ., ಸವದತ್ತಿ ತಾಲ್ಲೂಕು ಪಂಚಾಯ್ತಿ ವತಿಯಿಂದ ಗ್ರಾಮದ ಆರೋಗ್ಯ ಕೇಂದ್ರದಲ್ಲಿ ಭಾನುವಾರ ಏರ್ಪಡಿಸಿದ್ದ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಡಾ. ಪ್ರಭಾಕರ ಕೋರೆ ನೇತೃತ್ವದಲ್ಲಿ ಕೆಎಲ್‌ಇ ಸಂಸ್ಥೆಯ ಆಸ್ಪತ್ರೆ ಗ್ರಾಮೀಣ ಭಾಗದ ಬಡ ಜನರ ಬಾಗಿಲಲ್ಲಿ ಆರೋಗ್ಯ ತಪಾಸಣೆ ಮಾಡಿ, ಜಾಗೃತಿ ಮೂಡಿಸಲು ಮುಂದಾಗಿದೆ. ಗ್ರಾಮಸ್ಥರು ಯೋಜನೆಯ ಸದುಪಯೋಗ ಪಡೆಯಬೇಕು ಎಂದು ಹೇಳಿದರು.
ಶಾಸಕ ಮಹಾಂತೇಶ ಕವಟಿಗಿಮಠ ಮಾತನಾಡಿ `ಕೆಎಲ್‌ಇ ಆಸ್ಪತ್ರೆಯಲ್ಲಿ ಉಚಿತ ಆರೋಗ್ಯ ಸೌಲಭ್ಯ ಒದಗಿಸಲು ಆದ್ಯತೆ ನೀಡಿದೆ. ಸಾರ್ವಜನಿಕರು ಅದರ ಪ್ರಯೋಜನ ಪಡೆಯಬೇಕು ಎಂದು ನುಡಿದರು.

ಶಾಸಕ ಆನಂದ ಮಾಮನಿ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಡಾ. ವಿಶ್ವನಾಥ ಪಾಟೀಲ, ಯರಝರ್ವಿಯ ಡಾ. ಶಂಕರಲಿಂಗಪ್ಪ, ವೈದ್ಯಕೀಯ ನಿರ್ದೇಶಕ ಡಾ.ಎಂ.ವಿ.ಜಾಲಿ, ಉಪಾಧ್ಯಕ್ಷ ಬಸವರಾಜ ತಟವಾಟಿ, ಜಿ.ಪಂ. ಸದಸ್ಯೆ ವಿದ್ಯಾರಾಣಿ ಸೊನ್ನದ, ಗ್ರಾ.ಪಂ. ಅಧ್ಯಕ್ಷೆ ಕಸ್ತೂರೆವ್ವ ಭೋವಿ, ತಾ.ಪಂ. ಸದಸ್ಯ ಫಕೀರಪ್ಪ ಕಾಮೋಶಿ, ಟಿ.ಕೆ.ಪಾಟೀಲ ಭಾಗವಹಿಸಿದ್ದರು.

ತಜ್ಞ ವೈದ್ಯರಾದ ಡಾ.ಎಸ್.ವಿ.ಮೆಟಗುಡ್ಡ, ಡಾ.ಜಯಪ್ರಕಾಶ, ಡಾ.ಪಾಂಗಿ, ಡಾ. ರಾಜು ಬಡಿಗೇರ, ಡಾ.ಅರವಿಂದ ತೆಣಗಿ, ಡಾ.ಸಂತೋಷ ಕುರಬೇಟ್ ಸೇರಿದಂತೆ 162 ವೈದ್ಯರು 3000ಕ್ಕಿಂತ ಹೆಚ್ಚು ಜನರ ಆರೋಗ್ಯ ತಪಾಸಣೆ ಮಾಡಿದರು.
ವೈದ್ಯಕೀಯ ಅಧೀಕ್ಷಕ ಡಾ.ಆರ್.ಎಸ್. ಮುಧೋಳ ಸ್ವಾಗತಿಸಿದರು. ಪ್ರಾಚಾರ್ಯ ಡಾ. ಅಶೋಕ ಗೋಧಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಎನ್.ಎಂ. ಹಾರೂಗೊಪ್ಪ ಪ್ರಾರ್ಥಿಸಿದರು. ಪ್ರಮೋದ ಸೂಳಿಕೇರಿ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.