ಮೂಡಲಗಿ: ಮೂಡಲಗಿ ತಾಲ್ಲೂಕಿನ ರಚನೆಗಾಗಿ ಸ್ಥಳೀಯ ಕಲ್ಮೇಶ್ವರ ವೃತ್ತದಲ್ಲಿ ನಡೆಸುತ್ತಿರುವ ಧರಣಿ ಮಂಗಳವಾರ 34ನೇ ದಿನಕ್ಕೆ ಕಾಲಿಟ್ಟಿದೆ. ಭಗೀರಥ ಸಮಾಜ ಸೇವಾ ಸಂಘ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಧರಣಿಯಲ್ಲಿ ಭಾಗವಹಿಸಿ, ತಮ್ಮ ಬೆಂಬಲ ಸೂಚಿಸಿದರು.
ಈ ವೇಳೆ ಮಾತನಾಡಿದ ಭಗೀರಥ ಸಮಾಜದ ಬಿ.ಬಿ. ಹಂದಿಗುಂದ, ‘40 ವರ್ಷಗಳ ಹೋರಾಟದ ಫಲವಾಗಿ ಮೂಡಲಗಿಗೆ ಸಿಕ್ಕಿದ್ದ ತಾಲ್ಲೂಕು ಮಾನ್ಯತೆಯನ್ನು ಜಿಲ್ಲಾ ಉಸ್ತುವಾರಿ ಸಚಿವರು, ಅರಭಾವಿ ಶಾಸಕರು ರದ್ದು ಮಾಡಿ ಜನರಿಗೆ ಸಮಸ್ಯೆಯನ್ನು ಮಾಡಿದರು’ ಎಂದು ದೂರಿದರು.
ಸಾಹಿತಿ ಉಮೇಶ ಬೆಳಕೂಡ ಮಾತನಾಡಿ, ‘ಬುಧವಾರ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಮೂಡಲಗಿ ತಾಲ್ಲೂಕು ರಚನೆಯ ಆದೇಶ ದೊರೆಯುವ ಸಾಧ್ಯತೆ ಇದ್ದು, ನಮ್ಮ ಹೋರಾಟಕ್ಕೆ ಜಯ ಸಿಗಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಶಾರದಾ ನಾಯ್ಕ, ರವಿ ತುಪ್ಪದ, ಶಂಕ್ರಯ್ಯಾ ಹಿರೇಮಠ, ಚೇತನ ನಿಶಾನಿಮಠ, ರಾಮಚಂದ್ರ ಜಾಧವ, ರವಿ ಜಾಧವ, ಸುರೇಶ ಲಂಕೆಪ್ಪನವರ, ರಾಕೇಶ ಚೌಗಲಾ, ಲಕ್ಷ್ಷಣ ಅಡಿಹುಡಿ, ಸಂಚಾಲಕ ಭೀಮಪ್ಪ ಗಡಾದ ಮಾತನಾಡಿದರು.
ಧರಣಿಯಲ್ಲಿ 6ನೇ ದಿನದ ಉಪವಾಸ ಸತ್ಯಾಗ್ರಹದಲ್ಲಿ ಬಿಜೆಪಿ ಮುಖಂಡರಾದ ಈರಣ್ಣ ಕಡಾಡಿ, ಅಶೋಕ ಪೂಜೇರಿ, ಈರಣ್ಣ ಅಂಗಡಿ, ಈಶ್ವರ ಮುರಗೋಡ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.