ADVERTISEMENT

ಪಟ್ಟಾ ಮಂಜೂರಿಗೆ ಅರಣ್ಯ ಅತಿಕ್ರಮಣದಾರರಿಂದ ಪಾದಯಾತ್ರೆ

ಕಾರವಾರ ಪ್ರವೇಶಿಸಿದ ಹಳಿಯಾಳದಿಂದ ಹೊರಟಿದ್ದ ಪಾದಯಾತ್ರೆ; ಬೆಂಗಳೂರು ಚಲೋ ನಡೆಸುವುದಾಗಿ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2017, 5:21 IST
Last Updated 31 ಡಿಸೆಂಬರ್ 2017, 5:21 IST

ಕಾರವಾರ: ‘ಅನೇಕ ವರ್ಷಗಳಿಂದ ಅರಣ್ಯ ಭೂಮಿಯನ್ನು ಅತಿಕ್ರಮಿಸಿಕೊಂಡು, ಸಾಗುವಳಿ ಮಾಡಿಕೊಂಡು ಬಂದಿರುವ ರೈತರ ಹೆಸರಿಗೆ ಪಟ್ಟಾ ಮಂಜೂರು ಮಾಡಬೇಕು’ ಎಂದು ಆಗ್ರಹಿಸಿ ದಲಿತ ಸಂಘರ್ಷ ಸಮಿತಿಯ (ಕೆಂಪು ಸೇನೆ) ನೇತೃತ್ವದಲ್ಲಿ ರೈತರು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್‌ಗೆ ಮನವಿ ಸಲ್ಲಿಸಿದರು.

ಇದೇ 26ರಂದು ಹಳಿಯಾಳದಿಂದ ಪಾದಯಾತ್ರೆ ಹೊರಟು ಶನಿವಾರ ನಗರ ಪ್ರವೇಶಿಸಿದ ಅವರು ಜಿಲ್ಲಾಧಿಕಾರಿ ಕಚೇರಿ ಎದುರಿನ ರಾಷ್ಟ್ರೀಯ ಹೆದ್ದಾರಿಯ ಇಕ್ಕೆಲದಲ್ಲಿ  ಕುಳಿತು ಪ್ರತಿಭಟನೆ ನಡೆಸಿದರು.

‘ಅರಣ್ಯ ಪ್ರದೇಶದ ಭೂಮಿಯನ್ನು ಕಳೆದ ಮೂರು ವರ್ಷಗಳ ಹಿಂದೆ ಅರಣ್ಯ ಇಲಾಖೆ ಜಿ.ಪಿ.ಎಸ್ ಸರ್ವೆ ಮಾಡಿತ್ತು. ಈ ವೇಳೆ ಅಲ್ಲಿ ಅತಿಕ್ರಮಣ ಮಾಡಿಕೊಂಡು ವಾಸಿಸುತ್ತಿದ್ದ ರೈತರ ಎಲ್ಲ ದಾಖಲೆಗಳನ್ನು ಕಾರವಾರದ ಉಪವಿಭಾಗಾಧಿಕಾರಿಗೆ ಸಲ್ಲಿಸಲು ತಿಳಿಸಿದ್ದರು. ಅದರಂತೆ ಎಲ್ಲರೂ ಕೂಡ ಸಲ್ಲಿಸಿದ್ದೆವು. ಆದರೆ ಆ ಅತಿಕ್ರಮಿತ ಅರಣ್ಯ ಜಮೀನುಗಳು ಈವರೆಗೂ ಅಲ್ಲಿ ವಾಸಿಸುತ್ತಿರುವ ರೈತರ ಹೆಸರಿಗೆ ಕಾಯಂ ಆಗಿಲ್ಲ. ಜತೆಗೆ ಅರಣ್ಯ ಹಕ್ಕು ಸಮಿತಿಯಿಂದ ಎಲ್ಲರಿಗೂ ನೋಟಿಸ್‌ ಬಂದಿದ್ದು, ಅದರಲ್ಲಿ ‘75 ವರ್ಷಗಳ ಹಿಂದಿನ ದಾಖಲೆಗಳನ್ನು ಸಲ್ಲಿಸಬೇಕು’ ಎಂದು ಉಲ್ಲೇಖಿಸಿದೆ. ಇದು ಅಸಾಧ್ಯವಾದದ್ದು’ ಎಂದು ತಮ್ಮ ಅಳಲನ್ನು ತೋರಿಕೊಂಡರು.

ADVERTISEMENT

‘ಅಷ್ಟು ವರ್ಷಗಳ ಹಿಂದಿನ ನಮ್ಮ ಪೂರ್ವಜರು ವಿದ್ಯೆ ಕಲಿತಿರಲಿಲ್ಲ. ಆದರೂ ಇರುವ ಎಲ್ಲ ದಾಖಲೆಗಳನ್ನು ನಾವು ನೀಡಿದ್ದೇವೆ. ಅದೂ ಕೂಡ ಸರಿಯಾಗಿಲ್ಲವೆಂದು ಅಧಿಕಾರಿಗಳು ಸಬೂಬು ಹೇಳುತ್ತಿದ್ದಾರೆ. ಅಧಿಕಾರಿಗಳು ಅವರಿಗೆ ಸಂಬಂಧಪಟ್ಟಿರುವ 75 ವರ್ಷಗಳ ಹಿಂದಿನ ದಾಖಲೆಗಳನ್ನು ನೀಡಲಿ ನೋಡೋಣ’ ಎಂದು ಸವಾಲು ಹಾಕಿದರು.

‘ಅರಣ್ಯ ಭೂಮಿಗಳನ್ನು ಅತಿಕ್ರಮಣ ಮಾಡಿದ್ದು ಕೃಷಿಗಾಗಿ. ಅದರ ಮೇಲೆಯ ಎಲ್ಲರೂ ಅವಲಂಬಿತರಾಗಿದ್ದಾರೆ. ಈ ಜಮೀನುಗಳನ್ನು ವಶಪಡಿಸಿಕೊಂಡರೆ ರೈತರ ಬದುಕು ದುಸ್ತರವಾಗಲಿದೆ. ಹಳಿಯಾಳದಲ್ಲಿ ಅರಣ್ಯ ಭೂಮಿ ಅತಿಕ್ರಮಿಸಿಕೊಂಡ ಕೆಲ ರೈತರ ಜಮೀನುಗಳನ್ನು ಜಿ.ಪಿ.ಎಸ್ ಸರ್ವೆ ಮಾಡಿಲ್ಲ. ಅದನ್ನು ಶೀಘ್ರ ಪೂರ್ಣಗೊಳಿಸಿ, ಅವರಿಗೂ ಪಟ್ಟಾವನ್ನು ಮಂಜೂರು ಮಾಡಿಸಬೇಕು. ನೀಡಿರುವ ದಾಖಲೆಗಳ ಆಧಾರದ ಮೇಲೆ ಹಾಗೂ ಸಾಗುವಳಿ ಮಾಡಿದ ಬಗ್ಗೆ ವಹಿವಾಟನ್ನು ಪರಿಶೀಲಿಸಿ ಜಮೀನುಗಳನ್ನು ಮಂಜೂರಿಸಿ, ಪಟ್ಟಾ ಒದಗಿಸಿಕೊಡಬೇಕು’ ಎಂದು ಒತ್ತಾಯಿಸಿದರು.

ಸಂಘಟನೆಯ ಉತ್ತರಕರ್ನಾಟಕ ವಿಭಾಗದ ಅಧ್ಯಕ್ಷ ವಿ.ಬಿ.ರಾಮಚಂದ್ರ, ರಾಜ್ಯ ಘಟಕದ ಕಾರ್ಯದರ್ಶಿ ವಿ.ಬಿ.ವೀರಭದ್ರ ಗೌಡ, ಖಜಾಂಚಿ ಎಸ್.ಸುಬ್ಬಣ್ಣ, ಕೆ.ನಾಗರಾಜ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.