ಖಾನಾಪುರ: ಸ್ಥಳೀಯ ವಿಧಾನಸಭಾ ಮತಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಹಾಗೂ ಆರ್.ಎನ್ ಶುಗರ್ಸ್ ಅಧ್ಯಕ್ಷ ನಾಸೀರ್ ಬಾಗವಾನ ಅವರು ತಾಲ್ಲೂಕಿನ ಗೋಲಿಹಳ್ಳಿ ಗ್ರಾಮದ ಬಳಿ ನಿರ್ಮಿಸುತ್ತಿರುವ ಆರ್.ಎನ್. ಬಾಗವಾನ ಶುಗರ್ಸ್ನ ಕಾರ್ಖಾನೆ ಆವರಣದಲ್ಲಿ ಕಳೆದ ಎರಡು ದಿನಗಳಿಂದ ಮಾಟ-ಮಂತ್ರ ಮಾಡಿ ಅಲ್ಲಲ್ಲಿ ಪೂಜಿಸಿದ ಲಿಂಬೆಹಣ್ಣು ಹಾಗೂ 22ರ ಮಧ್ಯರಾತ್ರಿ ಈ ಒಂದು ತೆಂಗಿನ ಕಾಯಿ, ಮೊಟ್ಟೆ ಸೇರಿದಂತೆ ಇನ್ನಿತರ ವಾಮಾಚಾರದ ಸಾಮಗ್ರಿಗಳನ್ನು ಇಟ್ಟ ಘಟನೆ ಬುಧವಾರ ಬೆಳಕಿಗೆ ಬಂದಿದೆ.
ತಾಲ್ಲೂಕಿನಲ್ಲಿ ಈಗಾಗಲೇ ಕಳೆದ ಐದು ವರ್ಷಗಳಿಂದ ಜೆಡಿಎಸ್ ಪಕ್ಷ ಸಂಘಟನೆ ಜೊತೆಗೆ ಅಪಾರ ಜನಬೆಂಬಲ ಹೊಂದಿರುವ ಜೆಡಿಎಸ್ ಅಭ್ಯರ್ಥಿ ನಾಸೀರ ಬಾಗವಾನ ಈ ವಿಧಾನ ಸಭೆ ಚುನಾವಣೆಯಲ್ಲಿ ಪರಾಭವಗೊಳ್ಳಲಿ ಎಂದು ಮಾಟ-ಮಂತ್ರ ಮಾಡಿಸಿ ಇಡಲಾಗುತ್ತಿದೆ ಎಂದು ಜೆಡಿಎಸ್ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಘಟನೆ ಬಗ್ಗೆ ನಾಸೀರ್ ಬಾಗವಾನ ತಾವು ತಾಲ್ಲೂಕಿನ ರೈತರ ಕಬ್ಬಿನ ಸಂಕಷ್ಟ ದೂರಮಾಡಲು ಸಕ್ಕರೆ ಕಾರಖಾನೆಯನ್ನು ನಿರ್ಮಿಸಲಾಗುತ್ತಿದ್ದು, ಕಾರಖಾನೆ ಕಾಮಗಾರಿ ಪ್ರಾರಂಭಗೊಂಡ ದಿನದಿಂದಲೂ ತಮ್ಮ ಅಭಿವೃದ್ಧಿ ಪರ ಕಾರ್ಯಗಳನ್ನು ಸಹಿಸದ ಕೆಲ ರಾಜಕೀಯ ವ್ಯಕ್ತಿಗಳು ಇಂತಹ ಕೃತ್ಯ ಎಸಗುತ್ತಿದ್ದಾರೆ.
ಆದರೆ ತಾವು ಇದಕ್ಕೆ ಬಗ್ಗುವುದಿಲ್ಲ ಎಂದಿದ್ದಾರೆ. ಈ ಘಟನೆಯ ಕುರಿತು ತಾಲ್ಲೂಕಿನ ವಿವಿಧ ರಾಜಕೀಯ ಮುಖಂಡರು ತಮ್ಮ ಪ್ರತಿಕ್ರಿಯೆ ನೀಡಿದ್ದು, ಈಗ ಚುನಾವಣಾ ಸಮಯವಾದ್ದರಿಂದ ಜನರ ಅನುಕಂಪವನ್ನು ಗೆಲ್ಲಲು ಹಾಗೂ ಸಾರ್ವಜನಿಕರ ಗಮನವನ್ನು ತಮ್ಮತ್ತ ಸೆಳೆಯಲು ಜೆಡಿಎಸ್ ಕಾರ್ಯಕರ್ತರೇ ಈ ಕೃತ್ಯ ಎಸಗಿರಬಹುದು ಎಂದಿದ್ದಾರೆ. ಘಟನಾ ಸ್ಥಳಕ್ಕೆ ನಂದಗಡ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲಿಸಿ ತನಿಖೆ ಕೈಗೊಂಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.