ADVERTISEMENT

ಬಾಲಕನ ಹೃದಯದ ರಕ್ತನಾಳದಲ್ಲಿ ಗಡ್ಡೆ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2012, 9:00 IST
Last Updated 19 ಫೆಬ್ರುವರಿ 2012, 9:00 IST

ಬೆಳಗಾವಿ: ಎರಡು ವರ್ಷದ ಬಾಲಕನ ಹೃದಯದ ರಕ್ತನಾಳದಲ್ಲಿ ಬೆಳೆಯುತ್ತಿದ್ದ ಅಪಾಯಕಾರಿ ಗಡ್ಡೆಯನ್ನು ಥೊರಕೊಸ್ಕೋಪಿಕ್ ಶಸ್ತ್ರಚಿಕಿತ್ಸೆ ಮೂಲಕ ತೆಗೆಯುವಲ್ಲಿ ನಗರದ ಡಾ. ಪ್ರಭಾಕರ ಕೋರೆ ಆಸ್ಪತ್ರೆಯ ಚಿಕ್ಕ ಮಕ್ಕಳ ತಜ್ಞ ಶಸ್ತ್ರಚಿಕಿತ್ಸಕ ಡಾ. ವಿಜಯ ಪೂಜಾರ ಯಶಸ್ವಿಯಾಗಿದ್ದಾರೆ.
 

ಬೆಳಗಾವಿಯ ಘಿಗಲ್ಲಿ ನಿವಾಸಿ ಹನಸ್ ಹಾಜಿ ಉಸಿರಾಟದ ತೀವ್ರ ತೊಂದರೆ ಅನುಭವಿಸುತ್ತಿದ್ದನು. ಎರಡು ವಾರಗಳ ಕಾಲ ಚಿಕಿತ್ಸೆ ನೀಡಿಯೂ ಆರೋಗ್ಯ ಮತ್ತಷ್ಟು ಹದಗೆಟ್ಟಿದ್ದರಿಂದ ತುರ್ತು ಚಿಕಿತ್ಸೆಗಾಗಿ ನಗರದ ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರಕ್ಕೆ ಕರೆದುಕೊಂಡು ಬರಲಾಯಿತು.

ಚಿಕ್ಕ ಮಕ್ಕಳ ತಜ್ಞ ಶಸ್ತ್ರಚಿಕಿತ್ಸಕ ಡಾ. ವಿಜಯ ಪೂಜಾರ, ಮಗುವನ್ನು ಪರೀಕ್ಷಿಸಿದಾಗ ಹದಯದ ಮೇಲಗಡೆ ಗಡ್ಡೆ ಬೆಳೆದದ್ದು ಕಂಡು ಬಂತು. ಮಗುವನ್ನು ಸಿಟಿ ಸ್ಕ್ಯಾನ್‌ಗೊಳಪಡಿಸಿದಾಗ ಹದಯದ ರಕ್ತನಾಳದ ಮಧ್ಯೆ ಗಡ್ಡೆ ಬೆಳೆಯುತ್ತಿರುವುದು ಪತ್ತೆಯಾಯಿತು.

ತಕ್ಷಣ ಬಾಲಕನನ್ನು ಆಸ್ಪತ್ರೆಯ ಒಳರೋಗಿಯಾಗಿ ದಾಖಲಿಸಿಕೊಂಡು ಅತ್ಯಂತ ವಿರಳ ಮತ್ತು ಅಪಾಯಕಾರಿಯಾದ ಸೂಪರಿಯರ ಮಿಡಿಸ್ಟಿನಿಯಲ್ ಗಡ್ಡೆಯನ್ನು ಅತ್ಯಾಧುನಿಕ ವಿಧಾನದಿಂದ ಮಗುವಿನ ಬಲ ಎದೆಗೂಡಿನ ಮೇಲೆ ಮೂರು ಚಿಕ್ಕ ರಂದ್ರಗಳನ್ನು ಮಾಡಿ ಥೊರಕೊಸ್ಕೋಪಿಕ್ ಶಸ್ತ್ರಚಿಕಿತ್ಸೆ ಮೂಲಕ ಹೊರತೆಗೆಯಲಾಯಿತು. ಗಡ್ಡೆಯನ್ನು ಹೊರತೆಗೆಯಲು ವಿಳಂಬ ಮಾಡಿದ್ದರೆ ಮಗುವಿನ ಜೀವಕ್ಕೇ ಅಪಾಯ ಉಂಟಾಗಬಹುದಿತ್ತು ಎಂದು ಡಾ. ವಿಜಯ ಪೂಜಾರಿ ತಿಳಿಸಿದ್ದಾರೆ.

ಡಾ. ವಿಜಯ ಪೂಜಾರ ಅವರಿಗೆ ಡಾ. ಬಸವರಾಜ ಕಾಜಗಾರ ಹಾಗೂ ಅರವಳಿಕೆ ತಜ್ಞ ಡಾ. ಸುರೇಶ ಶಸ್ತ್ರಚಿಕಿತ್ಸೆಗೆ ಸಹಾಯ ನೀಡಿದರು. ಎದೆಯ ಭಾಗವನ್ನು ತೆರೆಯದೇ ಕೇವಲ ರಂದ್ರ ಮಾಡಿ ಗಡ್ಡೆಯನ್ನು ಯಶಸ್ವಿಯಾಗಿ ಹೊರತೆಗೆದ ಡಾ. ವಿ. ಸಿ. ಪೂಜಾರ ಅವರನ್ನು ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಎಂ.ವಿ. ಜಾಲಿ ಅಭಿನಂದಿಸಿದ್ದಾರೆ.ನಗರದ ಆಲ್ ನಜರ್ ವೆಲ್‌ಫೇರ್ ಕಮಿಟಿಯು ಬಾಲಕನ ಶಸ್ತ್ರಚಿಕಿತ್ಸೆಗೆ ಅಗತ್ಯ ಆರ್ಥಿಕ ನೆರವನ್ನು ನೀಡಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.