ADVERTISEMENT

ಬೆಳಗಾವಿಗೆ ವಿಶೇಷ ಅನುದಾನಕ್ಕೆ ಮನವಿ

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2012, 9:00 IST
Last Updated 6 ಆಗಸ್ಟ್ 2012, 9:00 IST

ಬೆಳಗಾವಿ: ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಿಂದ ಜಿಲ್ಲಾ ಪಂಚಾಯಿತಿಗೆ ವಿಶೇಷ ಅನುದಾನವನ್ನು ನೀಡಬೇಕು ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಈರಣ್ಣ ಕಡಾಡಿ ನೇತೃತ್ವದ ಸದಸ್ಯರ ನಿಯೋಗವು ಮುಖ್ಯಮಂತ್ರಿ ಜಗದೀಶ ಶೆಟ್ಟರ ಅವರನ್ನು ಒತ್ತಾಯಿಸಿತು.

ಬೆಂಗಳೂರಿನಲ್ಲಿ ಮುಖ್ಯಮಂತ್ರಿಗಳನ್ನು ಬುಧವಾರ ಭೇಟಿ ಮಾಡಿದ ನಿಯೋಗವು, ಬೆಳಗಾವಿ ಜಿಲ್ಲೆ ಭೌಗೋಳಿಕವಾಗಿ ದೊಡ್ಡಗಾಗಿದ್ದು, 86 ಜಿ.ಪಂ. ಸದಸ್ಯರನ್ನು ಹೊಂದಿದೆ. ಸಣ್ಣ ಹಾಗೂ ದೊಡ್ಡ ಜಿಲ್ಲಾ ಪಂಚಾಯತಿಗಳಿಗೆ ಎಲ್ಲ ಶೀರ್ಷಿಕೆಯಡಿಯೂ ಒಂದೇ ರೀತಿಯಲ್ಲಿ ಅನುದಾನ ನೀಡುತ್ತಿರುವುದರಿಂದ ಗ್ರಾಮೀಣ ಅಭಿವದ್ಧಿಗೆ ಹಾಗೂ ಸದಸ್ಯರ ಬೇಡಿಕೆಗಳಿಗೆ ಸ್ಪಂದಿಸುವುದು ಕಷ್ಟವಾಗಿದೆ.
 
ಅಧ್ಯಕ್ಷರ ವಿವೇಚನಾ ನಿಧಿಗೆ 1 ಕೋಟಿ ರೂಪಾಯಿ ನೀಡಲಾಗುತ್ತಿದೆ. ಬೆಳಗಾವಿಯಲ್ಲಿ 86 ಸದಸ್ಯರಿರುವುರಿಂದ ತಲಾ ಒಂದೊಂದು ಲಕ್ಷ ರೂಪಾಯಿ ನೀಡಲು ಸಾಧ್ಯವಿದೆ. ಆದರೆ, ಕೇವಲ 30 ಸದಸ್ಯರಿರುವ ಜಿ.ಪಂ.ಗೂ 1 ಕೋಟಿ ನೀಡಲಾಗುತ್ತಿದೆ. ಹೀಗಾಗಿ ಜಿಲ್ಲೆಯ ಬೆಳವಣಿಗೆ ದೃಷ್ಟಿಯಿಂದ ಬೆಳಗಾವಿಗೆ ವಿಶೇಷ ಅನುದಾನವನ್ನು ನೀಡಬೇಕು ಎಂದು ಆಗ್ರಹಿಸಿತು.


ಎಸ್‌ಡಿಪಿಗೆ ಸೇರಿಸಿ:
ಡಾ. ಡಿ.ಎಂ. ನಂಜುಂಡಪ್ಪ ವರದಿ ಪ್ರಕಾರ ಜಿಲ್ಲೆಯ ಏಳು ತಾಲ್ಲೂಕುಗಳಿಗೆ ಮಾತ್ರ ವಿಶೇಷ ಅನುದಾನ ಬರುತ್ತಿದೆ. ಉಳಿದ ಬೆಳಗಾವಿ, ಚಿಕ್ಕೋಡಿ, ಖಾನಾ ಪುರ ತಾಲ್ಲೂಕುಗಳಿಗೆ ಅನುದಾನ ಬರು ತ್ತಿಲ್ಲ. ಇದರಿಂದಾಗಿ ಈ ಮೂರು ತಾಲ್ಲೂಕುಗಳ ಅಭಿವೃದ್ಧಿಗೆ ಹಿನ್ನಡೆ ಯಾಗುತ್ತಿದೆ. ಅನುದಾನ ನೀಡುವಾಗ ಭೇದಭಾವ ಮಾಡದೇ, ಈ ಮೂರು ತಾಲ್ಲೂಕುಗಳನ್ನೂ ವಿಶೇಷ ಅಭಿವೃದ್ಧಿ ಯೋಜನೆಯಡಿ ಸೇರಿಸಿಕೊಂಡು ವಿಶೇಷ ಅನುದಾನವನ್ನು ನೀಡಬೇಕು. ಜಿಲ್ಲೆಯಾದ್ಯಂತ ಮಳೆಯ ಅಭಾವ ಇರುವುದರಿಂದ ಖಾನಾಪುರ ಹಾಗೂ ಬೆಳಗಾವಿ ತಾಲ್ಲೂಕುಗಳನ್ನೂ ಬರ ಪೀಡಿತ ಪ್ರದೇಶಗಳೆಂದು ಘೋಷಿಸಬೇಕು ಎಂದು ನಿಯೋಗವು ಮುಖ್ಯಮಂತ್ರಿಗಳನ್ನು ಒತ್ತಾಯಿಸಿತು.

ಅಧಿವೇಶನ ನಡೆಸಿ:

ಬೆಳಗಾವಿಯಲ್ಲಿ ಸಿದ್ಧಗೊಂಡಿರುವ ಸುವರ್ಣ ಸೌಧವನ್ನು ಶೀಘ್ರದಲ್ಲೇ ಉದ್ಘಾಟಿ ಮುಂದಿನ ವಿಧಾನಮಂಡಲದ ಅಧಿವೇಶನವನ್ನು ಬೆಳಗಾವಿಯಲ್ಲೇ ನಡೆಸಬೇಕು ಎಂದು ಕಡಾಡಿ ನೇತೃತ್ವದ ನಿಯೋಗವು ಮನವಿ ಮಾಡಿತು.
ಸುವರ್ಣ ಸೌಧ ಉದ್ಘಾಟಿಸಿ ಅಧಿ ವೇಶನ ನಡೆಸುವ ಮೂಲಕ ಉತ್ತರ ಕರ್ನಾಟಕ ಹಾಗೂ ಬೆಳಗಾವಿ ಜಿಲ್ಲೆಯ ಸಮಸ್ಯೆಗಳಿಗೆ ಪರಿಹಾರ ಕಂಡು ಕೊಳ್ಳ ಬೇಕು ಎಂದು ಆಗ್ರಹಿಸಿದರು.

ಇದಕ್ಕೆ ಸ್ಪಂದಿಸಿದ ಮುಖ್ಯಮಂತ್ರಿ ಜಗದೀಶ ಶೆಟ್ಟರ, ಕೆಲವೇ ದಿನಗಳಲ್ಲಿ ಸುವರ್ಣ ಸೌಧದ ಉದ್ಘಾಟನೆ ದಿನಾಂಕವನ್ನು ನಿಶ್ಚಯಿಸಲಾಗುವುದು. ಬಳಿಕ ಅಧಿವೇಶನ ಕರೆಯುವ ಕುರಿತು ಚರ್ಚಿಸಿ ನಿಧಾರ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಗೋಕಾಕ ತಾಲ್ಲೂಕನ್ನು ಬರ ಪೀಡಿತ ಪ್ರವೇಶವೆಂದು ಘೋಷಿಸಿದ ಹಾಗೂ ರೈತರ ಸಾಲ ಬಡ್ಡಿ ಮನ್ನಾ ಮಾಡಿದ ಮುಖ್ಯಮಂತ್ರಿಗಳನ್ನು ಜಿ.ಪಂ. ಅಧ್ಯಕ್ಷ ಈರಣ್ಣ ಕಡಾಡಿ ನಿಯೋಗದ ಪರವಾಗಿ ಸನ್ಮಾನಿಸಿದರು.

ಬಳಿಕ ನಿಯೋಗವು ಉಪ ಮುಖ್ಯ ಮಂತ್ರಿ, ಗ್ರಾಮೀಣ ಅಭಿವದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಅವರೊಂದಿಗೆ ವಿವಿಧ ಬೇಡಿಕೆಗಳ ಕುರಿತು ಚರ್ಚಿಸಿತು.

ಜಿಲ್ಲಾ ಉಸ್ತುವಾರಿ ಮತ್ತು ಕೃಷಿ ಸಚಿವ ಉಮೇಶ ಕತ್ತಿ, ಜಲಸಂಪನ್ಮೂಲ ಸಚಿವ ಬಸವರಾಜ ಬೊಮ್ಮೋಯಿ, ಶಾಸಕ ಪ್ರಹ್ಲಾದ ರೆಹಮಾನಿ, ಜಿ.ಪಂ ಉಪಾಧ್ಯಕ್ಷೆ ಸುನಿತಾ ಶಿರಗಾಂವಿ, ಆರೋಗ್ಯ ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷೆ ರತ್ನಾ ಯಾದವಾಡ ಸೇರಿದಂತೆ 50ಕ್ಕೂ  ಸದಸ್ಯರು ಭಾಗವಹಿಸಿದ್ದರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT