ADVERTISEMENT

ಭರತೇಶ ಕಾಲೇಜಿನ್ಲ್ಲಲೊಂದು ಮಾರಾಟ ಮೇಳ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2011, 8:40 IST
Last Updated 8 ಅಕ್ಟೋಬರ್ 2011, 8:40 IST

ಪುಸ್ತಕ ಓದಿಗೂ, ಮಾರುಕಟ್ಟೆಯ ವಾಸ್ತವಕ್ಕೂ ಸಾಕಷ್ಟು ವ್ಯತ್ಯಾಸವಿದೆ ಎಂದು ಹೇಳುವುದುಂಟು. ಇದು ಒಂದಷ್ಟು ನಿಜವೂ ಕೂಡಾ. ಪ್ರಾಯೋಗಿಕ ಜ್ಞಾನವಿರದಿದ್ದರೆ ಓದಿದ್ದನ್ನು ಮಾರುಕಟ್ಟೆಯಲ್ಲಿ ಅಳವಡಿಸಲು ಕಷ್ಟ ಎದುರಿಸಬೇಕಾಗುತ್ತದೆ.

ಇದನ್ನು ಗಮನದಲ್ಲಿಟ್ಟುಕೊಂಡೇ ಇತ್ತೀಚೆಗೆ ಸಾಕಷ್ಟು ಕಾಲೇಜುಗಳಲ್ಲಿ ಓದಿನೊಂದಿಗೆ ಪ್ರಯೋಗಕ್ಕೂ
ಹೆಚ್ಚಿನ ಮಹತ್ವ ನೀಡಲಾಗುತ್ತಿದೆ. ಅಂತಹದೇ ಒಂದು ಪ್ರಯತ್ನದ ಅಂಗವಾಗಿ ಇತ್ತೀಚೆಗೆ ಬೆಳಗಾವಿಯ ಭರತೇಶ ಕಾಲೇಜ್ ಆಫ್ ಬಿಸಿನೆಸ್ ಅಡ್ಮಿನಿಸ್ಟ್ರೇಶನ್‌ನಲ್ಲಿ `ವಣಿಕಮಾರ್ಗ~ ಎಂಬ ವಿಶಿಷ್ಟ ಕಾರ್ಯಕ್ರಮ ನಡೆಯಿತು.

ಬಿಬಿಎ ವಿದ್ಯಾರ್ಥಿಗಳಿಗೆ ವಸ್ತುಗಳ ಉತ್ಪಾದನೆ. ವಸ್ತುವಿನ ವೈಶಿಷ್ಟ್ಯ, ಮಾರುಕಟ್ಟೆ, ಮಾರಾಟ ಸೇರಿದಂತೆ ಹತ್ತು, ಹಲವು ವಿಷಯಗಳನ್ನು ಹೇಳಿಕೊಡಲಾಗುತ್ತದೆ. ಇವುಗಳನ್ನು ಮಾರುಕಟ್ಟೆಯಲ್ಲಿ ಹೇಗೆ ಪ್ರಯೋಗಿಸಬೇಕು ಎಂಬುದನ್ನೂ ವಿದ್ಯಾರ್ಥಿಗಳಿಂದಲೇ ಪ್ರಾಯೋಗಿಕವಾಗಿ ಮಾಡಿಸಲಾಯಿತು.

ಬಿಬಿಎ ಮೂರನೆಯ ಸೆಮಿಸ್ಟರ್‌ನಲ್ಲಿರುವ ವಿದ್ಯಾರ್ಥಿಗಳನ್ನು ಆರು ತಂಡಗಳಾಗಿ ರಚಿಸಲಾಯಿತು.
ಪ್ರತಿಯೊಂದು ತಂಡಕ್ಕೂ ಬಂಡವಾಳ ಹೂಡಿಕೆ ಮಾಡಿ ವಸ್ತುಗಳ ಉತ್ಪಾದನೆ, ಅವುಗಳ ಮಾರಾಟ, ಲಾಭ ಗಳಿಕೆ ಹೇಗೆ ಆಗುತ್ತದೆ ಎಂಬುದನ್ನು ಮಾರುಕಟ್ಟೆ ಸೃಷ್ಟಿಸುವ ಮೂಲಕ ಪ್ರಾಯೋಗಿಕವಾಗಿ ತಿಳಿಸಿ ಕೊಡಲಾಯಿತು.

ಸ್ಯಾಂಡ್‌ವಿಚ್, ಕ್ಯಾರೆಟ್ ಫ್ಯಾಂಟಸಿ, ಚಾಟ್ಸ್, ಕ್ರಂಚಿ ಡೆಸ್ಟೆನಿ, ಸ್ಪೈಸಿ ಆಂಡ್ ಜ್ಯೂಸ್, ಹಾಟ್ ಪಕೋಡಾ.. ಹೀಗೆ ಒಂದೊಂದು ತಂಡಕ್ಕೆ ಒಂದಷ್ಟು ತಿನಿಸುಗಳ ತಯಾರಿಕೆ ಜವಾಬ್ದಾರಿ ನೀಡಲಾಯಿತು. ನಂತರ ಅದನ್ನು ಮಾರಾಟಕ್ಕೆ ಒಂದು ದಿನವನ್ನು ನಿಗದಿ ಪಡಿಸಿ, ಅವುಗಳ ಮಾರಾಟಕ್ಕೆ ಕ್ಯಾಂಪಸ್ ಆವರಣದಲ್ಲಿಯೇ ಮಾರುಕಟ್ಟೆಯೊಂದನ್ನು ಸೃಷ್ಟಿಸಲಾಯಿತು.

ಕ್ಯಾಂಪಸ್ ಆವರಣದಲ್ಲಿರುವ ಇನ್ನಿತರ ಶಾಲಾ-ಕಾಲೇಜುಗಳಿಗೆ ತೆರಳಿ, ನಾಳೆ ನಾವು ತಯಾರಿಸಿದ ವಸ್ತುಗಳ ಮಾರಾಟ ಮೇಳ ಏರ್ಪಡಿಸಿದ್ದೇವೆ. ಆಗಮಿಸಬೇಕು ಎಂದು ಬಿಬಿಎ ವಿದ್ಯಾರ್ಥಿಗಳು ಆಹ್ವಾನ ನೀಡಿದರು. 

ಮನೆಯಲ್ಲಿ ತಯಾರಿಸಿ ತಂದಿದ್ದ ಹಾಗೂ ಅಲ್ಲಿಯೇ ತಯಾರಿಸಿದ ವಸ್ತುಗಳನ್ನು ಮಾರಾಟ ಮಾಡುವ ಮೂಲಕ ವಿದ್ಯಾರ್ಥಿಗಳು ವಹಿವಾಟಿನ ಸಣ್ಣ, ಸಣ್ಣ ಅಂಶಗಳನ್ನು ಅರಿತುಕೊಂಡರು.

`ಅದಕ್ಕೂ ಮೊದಲು ವಿದ್ಯಾರ್ಥಿಗಳಿಗೆ ವಸ್ತುವಿನ ಗುಣಮಟ್ಟ, ಗ್ರಾಹಕರ ಮನೋಭಾವ, ಬೆಲೆ ಪೈಪೋಟಿ ಮುಂತಾದ ವಿಷಯಗಳನ್ನು ಮಾರುಕಟ್ಟೆಯಲ್ಲಿ ಹೇಗೆ ನಿಭಾಯಿಸಬೇಕು ಎಂದು ಹೇಳಿ ಕೊಟ್ಟೆವು~ ಎನ್ನುತ್ತಾರೆ  ಪ್ರೊ.ಜಿ.ಎಂ. ಶೆಟ್ಟಿ.

`ತಾವು ತಯಾರಿಸಿದ ವಸ್ತುಗಳನ್ನು ಜಾಣ್ಮೆಯಿಂದ ಹೇಗೆ ಮಾರಾಟ ಮಾಡುತ್ತಾರೆ. ಮಾರಾಟಕ್ಕೆ ಬೇಕಾದ ಅಂಶಗಳನ್ನು ಹೇಗೆ ಬಳಸಿಕೊಳ್ಳುತ್ತಾರೆ ಎಂಬುದನ್ನು ವೀಕ್ಷಿಸಿ, ಸುಧಾರಣೆ ಮಾಡಿಕೊಳ್ಳಬೇಕಾದ ಅಂಶಗಳ ಬಗ್ಗೆ ಮಾರ್ಗದರ್ಶನ ಮಾಡಲಾಗುತ್ತದೆ~ ಎಂದು ಅವರು ತಿಳಿಸಿದರು. 

`ಮಾರಾಟ ಮಾಡುವಲ್ಲಿ ಅನುಸರಿಸಬೇಕಾದ ಅಂಶಗಳೇನು? ಗ್ರಾಹಕರೊಂದಿಗೆ ಹೇಗೆ ವ್ಯವಹರಿಸಬೇಕು. ವಸ್ತುವಿನ ಗುಣಮಟ್ಟದ ಮಹತ್ವ ಏನು ಎಂಬುದು ಮಾರಾಟ ಮೇಳದಿಂದಾಗಿ ಗೊತ್ತಾಗಿದೆ~ ಎಂದು ವಿದ್ಯಾರ್ಥಿ ಪವನಕುಮಾರ ತಮ್ಮ ಅನಿಸಿಕೆ ಹಂಚಿಕೊಂಡರು.

`ಗ್ರಾಹಕರನ್ನು ಹೇಗೆ ಸೆಳೆಯಬೇಕು. ವಸ್ತುವಿನ ಮಾರಾಟ ಹೇಗೆ ಮಾಡಬೇಕು. ವಸ್ತುವಿನ ಬಗೆಗೆ ಗ್ರಾಹಕರ ಅನಿಸಿಕೆಗಳು ಏನು? ಅವರ ಅನಿಸಿಕೆಗಳನ್ನು ಮುಂದಿನ ಬಾರಿಗೆ ಅಳವಡಿಸಿಕೊಳ್ಳುವುದರ ಬಗೆಗೆ  ಮೇಳದಿಂದ ಗೊತ್ತಾಯಿತು~ ಎನ್ನುವುದು ವಿದ್ಯಾರ್ಥಿನಿ ಆಫ್ಷಾನ್ ಸಯ್ಯದ್ ಅನಿಸಿಕೆಯಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.