ತೆಲಸಂಗ: ಗ್ರಾಮದ ಶಿವರಾಜ್ ಮಲ್ಲಿಕಾರ್ಜುನ ರೊಟ್ಟಿ ಕುಳ್ಳ ಹಾಗೂ ಮೂಗ. ಎರಡೂವರೆ ಅಡಿ ಎತ್ತರ ಈತನಿಗೆ ಈಗ 25 ವರ್ಷ. ಗ್ರಾಮಸ್ಥರೊಂದಿಗೆ ಲವಲವಿಕೆಯಿಂದ ವರ್ತಿಸುವ ಈತನ ಬೆಳವಣಿಗೆಗೆ ಹೆತ್ತವರು ಯಾವುದೂ ಕೊರತೆ ಮಾಡಿಲ್ಲ. ಅಂಥ ಅಪರೂಪದ ವ್ಯಕ್ತಿಗೆ ಬುಧವಾರ ಜನ್ಮದಿನ ಆಚರಿಸಲಾಯಿತು.
25 ನೇ ವರ್ಷದ ಅಂಗವಾಗಿ ಇಡೀ ಗ್ರಾಮಸ್ಥರಿಗೆ ಊಟ ಹಾಕಿ ಊರವರನ್ನು ಸೇರಿಸಿ, ಆತನಿಗೆ ಯಾವುದೇ ಕೊರತೆಯಾಗಂತೆ ನೋಡಿಕೊಂಡಿದ್ದು ಮಾದರಿಯಾಗಿದೆ.
ಶಿವರಾಜ ಕುಳ್ಳ ಇರಬಹುದು ಆದರೆ ಆತ ನನ್ನ ಮಗ, ಅವನನ್ನು ಪ್ರೀತಿಯಿಂದ ಬೆಳೆಸಿದ್ದೇವೆ. ಜನರೊಂದಿಗೆ ಬೆರೆತು ಈಗ ಎಲ್ಲ ವ್ಯವಹಾರಿಕ ಜ್ಞಾನ ಪಡೆದಿದ್ದಾನೆ ಎಂದು ಆತನ ತಾಯಿ ಸಂಗೀತಾ ಹೇಳಿದರು.
ನಿವೃತ್ತ ಸೈನಿಕ ಗಂಗಪ್ಪ ಗಂಗಾಧರ, ವಿವರಣೆ ನೀಡಿ ಮಲ್ಲಿಕಾರ್ಜುನ ಹಾಗೂ ಸಂಗೀತಾ ದಂಪತಿಗೆ ಶಿವರಾಜ್ ಎರಡನೇ ಮಗ. ಶಿವರಾಜಗಿಂತ ಮೊದಲು ಜನಿಸಿದ ಬಸವರಾಜ ಕೂಡಾ ಮಾತು ಬಾರದೆ ಕುಳ್ಳಗಾಗಿ ಇದ್ದ. ಆತ 16ನೇ ವಯಸಲ್ಲಿ ಮೃತಪಟ್ಟನು. ಶಿವರಾಜನ ನಂತರ ಜನಿಸಿದ ನಾಗರಾಜ ಕೂಡಾ ಕುಳ್ಳನಾಗಿದ್ದ, ಆತ ಬಾಲ್ಯದಲ್ಲಿಯೇ ಸಾವನ್ನಪ್ಪಿದ. ಈ ದಂಪತಿಗೆ ಜನಿಸಿದ 3 ಮಕ್ಕಳೂ ಕುಳ್ಳರು. ಆದರೆ 25ವರ್ಷ ಬದುಕಿದ್ದು ಶಿವರಾಜ್ ಮಾತ್ರ. ಮಾತು ಬಾರದೆ ಇದ್ದರೂ ವ್ಯವಹಾರಿಕ ಎಲ್ಲ ಜ್ಞಾನವನ್ನು ಹೊಂದಿದ್ದಾನೆ ಎಂದು ಹೇಳಿದರು.
ಮಗ ಹೇಗೇ ಇದ್ದರೂ ಅದು ನಮ್ಮದೇ ಎಂದು ಕೊರತೆ ಇಲ್ಲದಂತೆ ಬೆಳೆಸಿದ್ದಕ್ಕೆ ಪಾಲಕರ ಬಗ್ಗೆ ಹೆಮ್ಮೆಯ ಮಾತುಗಳು ಕೇಳಿಬಂದವು.
ಯುವ ಮುಖಂಡ ರವಿ ಖವಟಗಿ ಅವರು ಕೂಡ ಶಿವರಾಜ್ನ ವ್ಯವಹಾರ ಜ್ಞಾನವನ್ನು ಶ್ಲಾಘಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.