ADVERTISEMENT

ಮರಾಠಾ ಯೋಧರ ಪುನರ್ ಮಿಲನ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2011, 10:35 IST
Last Updated 30 ಅಕ್ಟೋಬರ್ 2011, 10:35 IST

ಬೆಳಗಾವಿ: ಭಾರತೀಯ ಸೇನೆಯ ಮರಾಠಾ ಸೈನಿಕರ ತರಬೇತಿ ಕೇಂದ್ರ ಹಾಗೂ ಮಾಜಿ ಸೈನಿಕರ ಮರಾಠಾ ಲೈಟ್ ಇನ್‌ಫೆಂಟ್ರಿಯ 14ನೇ ಪುನರ್ ಮಿಲನ ಕಾರ್ಯಕ್ರಮ ಶನಿವಾರ ಸಂಭ್ರಮದಿಂದ ನಡೆಯಿತು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಎಂಎಲ್‌ಐಆರ್‌ಸಿಯ ಕರ್ನಲ್ ಹಾಗೂ ಆರ್ಮಿ ಸ್ಟಾಫ್ ಉಪ ಮುಖ್ಯಾಧಿಕಾರಿ ನರೇಂದ್ರ ಸಿಂಗ್ ಅವರು ಯೋಧರ ಸ್ಮಾರಕಕ್ಕೆ ಮಾಲಾರ್ಪಣೆ ಮಾಡುವ ಮೂಲಕ ದೇಶಕ್ಕಾಗಿ ಬಲಿದಾನ ಮಾಡಿದ ಯೋಧರಿಗೆ ಗೌರವ ಸಲ್ಲಿಸಿದರು. ಯೋಧರು, ಮಾಜಿ ಸೈನಿಕರು ಹಾಗೂ ಜೂನಿಯರ್ ಕಮಿಷನ್ಡ್ ಆಫೀಸರ್‌ಗಳು ಸಹ ಪುಷ್ಪ ಸಮರ್ಪಿಸಿದರು.

ವಿವಿಧ ಕಾರ್ಯಾಚರಣೆ ಸಂದರ್ಭದಲ್ಲಿ ದೇಶದ ರಕ್ಷಣೆಗಾಗಿ ಬಲಿದಾನಗೈದ ಯೋಧರ ಮಡದಿಯರಾದ `ವೀರ ಮಹಿಳೆ~ಯರನ್ನು ವೀಣಾ ಸಿಂಗ್ ಹಾಗೂ ಪುಷ್ಪ ರಮೇಶ ಅವರು ಇದೇ ಸಂದರ್ಭದಲ್ಲಿ ಸತ್ಕರಿಸಿದರು.
ಕಾರ್ಯಕ್ರಮದ ಸವಿನೆನಪಿಗಾಗಿ ಸೇನಾ ಅಂಚೆ ವಿಭಾಗವು ಸಿದ್ಧಪಡಿಸಿದ್ದ ಅಂಚೆ ಚೀಟಿಯನ್ನು ನರೇಂದ್ರ ಸಿಂಗ್ ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಿದರು.

ವಿಶೇಷ ಸೈನಿಕ ಸಮ್ಮೇಳನದಲ್ಲಿ ಮಾತನಾಡಿದ ಲೆಫ್ಟಿನೆಂಟ್ ಜನರಲ್ ನರೇಂದ್ರ ಸಿಂಗ್, ನಿಸ್ವಾರ್ಥವಾಗಿ ದೇಶದ ರಕ್ಷಣೆಗಾಗಿ ಸೇವೆ ಸಲ್ಲಿಸುತ್ತಿರುವ ಮರಾಠಾ ಲೈಟ್ ಇನ್‌ಫೆಂಟ್ರಿ ರೆಜಿಮೆಂಟ್ ಸೈನಿಕರ ಸೇವೆಯನ್ನು ಶ್ಲಾಘಿಸಿದರು.

ಸಮಾರಂಭದಲ್ಲಿ ಸುಮಾರು 250 ಸೇವೆ ಸಲ್ಲಿಸುತ್ತಿರುವ ಹಾಗೂ ಮಾಜಿ ಅಧಿಕಾರಿಗಳು, ಸುಮಾರು ಒಂದು ಸಾವಿರಕ್ಕೂ ಹೆಚ್ಚು ಜ್ಯೂನಿಯರ್ ಕಮಿಷನ್ಡ್ ಆಫಿಸರ್‌ಗಳು ಹಾಗೂ ಸೈನಿಕರು ಪಾಲ್ಗೊಂಡಿದ್ದರು. ಸುಮಾರು 45 ವೀರ ಮಹಿಳೆಯರು ಹಾಗೂ ದೇಶಕ್ಕಾಗಿ ಬಲಿದಾನಗೈದ ಯೋಧರ ಪಾಲಕರು ಸಮಾರಂಭದಲ್ಲಿ ಹಾಜರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.