ಹುಕ್ಕೇರಿ: ಮಹಿಳೆಯರ ರಕ್ಷಣೆ ಗಾಗಿಯೇ ಸರ್ಕಾರ ವಿಶೇಷ ಕಾನೂನು ರೂಪಿಸಿದೆ. ಈ ಕುರಿತು ಮಹಿಳೆಯರಿಗೆ ಅರಿವು ಅಗತ್ಯ ಎಂದು ತ್ವರಿತಗತಿ ನ್ಯಾಯಾಲಯದ ನ್ಯಾಯಾಧೀಶ ವಿ.ವಿ. ಮಲ್ಲಾಪೂರ ಹೇಳಿದರು.
ಅವರು ಸ್ಥಳೀಯ ಸರ್ಕಾರಿ ಉರ್ದು ಪ್ರೌಢ ಶಾಲೆಯಲ್ಲಿ ತಾಲ್ಲೂಕು ಕಾನೂನು ಸೇವಾ ಸಮಿತಿ ಆಶ್ರಯದಲ್ಲಿ ಆಯೋಜಿಸಿದ್ದ ಮಹಿಳೆಯರಿಗಾಗಿ ಕಾನೂನು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪಿತ್ರಾರ್ಜಿತ ಆಸ್ತಿಯಲ್ಲಿ ಎರಡನೆಯ ಹೆಂಡತಿಗೆ ಹಾಗೂ ಆಕೆಯ ಮಕ್ಕಳಿಗೆ ಹಕ್ಕು ಇರುವುದಿಲ್ಲ ಎಂದು ತಿಳಿಸಿದರು.ದಿವಾಣಿ ನ್ಯಾಯಾಧೀಶ ಸುನೀಲ ಹೊಸಮನಿ ಮಾತನಾಡಿ ಬಾಲ್ಯ ವಿವಾಹ ಕಾಯ್ದೆ, ಜೀವನಾಂಶ ಕುರಿತು ವಿವರಿಸಿ, ಮಹಿಳಾ ಕಾಯ್ದೆ ದುರುಪಯೋಗ ಆಗುತ್ತಿದೆ ಎಂದರು.
ಬಡವರಿಗೆ ಉಚಿತವಾಗಿ ಕಾನೂನು ಸಲಹೆ ಹಾಗೂ ದಾವೆ ಮಾಡಲು ಕಾನೂನು ಸೇವಾ ಸಮಿತಿಯಲ್ಲಿ ವಕೀಲರಿದ್ದು ಅವರು ಯಾವುದೇ ರೀತಿಯ ಶುಲ್ಕ ಆಕಾರಣೆ ಮಾಡುವುದಿಲ್ಲ. ಮಹಿಳೆಯರಿಗೆ ಅನ್ಯಾಯವಾದಲ್ಲಿ ಕಾನೂನು ಸೇವಾ ಸಮಿತಿಯ ನೆರವು ಪಡೆಯಲು ಸೂಚಿಸಿದರು.
ಹಿರಿಯ ದಿವಾಣಿ ನ್ಯಾಯಾಧೀಶೆ ರೇಣುಕಾ ಕುಲಕರ್ಣಿ ಮಾತನಾಡಿ, ಧರ್ಮ ಹಾಗೂ ಕಾನೂನು ಒಂದೇ ನಾಣ್ಯದ ಎರಡು ಮುಖಗಳು. ಕುಟುಂಬದಲ್ಲಿ ಮಹಿಳೆಯ ಪಾತ್ರ ಪುರುಷನಿಗಿಂತ ದೊಡ್ಡದಾಗಿದ್ದು ತಂದೆ- ತಾಯಿ, ಅತ್ತೆ-ಮಾವ ಮತ್ತಿತರರನ್ನು ಇಳೆ ವಯಸ್ಸಿನಲ್ಲಿ ಚೆನ್ನಾಗಿ ನೋಡಿಕೊಳ್ಳಬೇಕು ಎಂದು ಅವರು ತಿಳಿಸಿದರು.
ಆಸ್ತಿ ಮಾಡದೆ ಮಕ್ಕಳಿಗೆ ಒಳ್ಳೇ ಶಿಕ್ಷಣ ಹಾಗೂ ಸಂಸ್ಕಾರ ನೀಡಲು ಕಿವಿ ಮಾತು ಹೇಳಿದರು.
ಮುಖ್ಯ ಶಿಕ್ಷಕಿ ಪಿ.ಬಿ. ಪಾಟೀಲ ಸ್ವಾಗತಿಸಿದರು. ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ರಾಜೇಂದ್ರ ತೇರದಾಳ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.