ADVERTISEMENT

ಮೂಲ ಸೌಲಭ್ಯ ಒದಗಿಸಲು ಸಲಹೆ

ನಗರಸಭೆ ಅಧಿಕಾರಿಗಳ ವಿರುದ್ಧ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2013, 9:30 IST
Last Updated 3 ಡಿಸೆಂಬರ್ 2013, 9:30 IST

ಗೋಕಾಕ: ‘ಚರಂಡಿ ಸ್ವಚ್ಛತೆ, ಕುಡಿ­ಯುವ ನೀರು ಪೂರೈಕೆ, ಗುಂಡಿಗಳಿಂದ ತುಂಬಿದ ರಸ್ತೆಗಳು ಇತ್ಯಾದಿ ಮೂಲ ಸೌಕರ್ಯಗಳಿಂದ ನಗರದ ಬಹುತೇಕ ವಾರ್ಡ್‌ಗಳು ವಂಚಿತವಾಗಿವೆ. ಸಮಸ್ಯೆ­ಗಳ ಶೀಘ್ರ ಇತ್ಯರ್ಥಕ್ಕಾಗಿ ಸಾರ್ವಜನಿ­ಕರು ನಗರಸಭೆ ಅಧಿಕಾರಿಗಳನ್ನು ಸಂಪರ್ಕಿಸಿದರೂ ಯಾವುದೇ ಪ್ರಯೋ­ಜನ ಆಗಿಲ್ಲ’ ಎಂದು ಎಂದು ಸಾರ್ವ­ಜನಿ­ಕರು ದೂರಿದ್ದಾರೆ.

ಸೋಮವಾರ ಇಲ್ಲಿಯ ಕಾಂಗ್ರೆಸ್ ಮುಖಂಡ ಹಾಗೂ ಉದ್ಯಮಿ ಲಖನ್ ಜಾರಕಿಹೊಳಿ ಅವರ ಸಮ್ಮುಖದಲ್ಲೇ ಸಾರ್ವಜನಿಕರು ತಮ್ಮ ಅಳಲನ್ನು ತೋಡಿಕೊಂಡ ಪ್ರಯುಕ್ತ, ನಗರದ ನಾಯಕ ಗಲ್ಲಿ, ಲಕ್ಕಡ ಗಲ್ಲಿ, ಉಪ್ಪಾರ­ಗಲ್ಲಿ, ಉಳ್ಳಾಗಡ್ಡಿ ಓಣಿ ಸೇರಿದಂತೆ ವಿವಿಧೆಡೆ ದಿಢೀರನೇ ಭೇಟಿ ನೀಡಿ ಅಲ್ಲಿನ ಜನರ ಸಮಸ್ಯೆಗಳನ್ನು ಆಲಿಸಿ ನೇರವಾಗಿ ಆಯಾ ವಾರ್ಡುಗಳ ನಗರಸಭೆ ಸದಸ್ಯ­ರೊಂದಿಗೆ ನಗರಸಭೆಗೆ ಧಾವಿಸಿ ಪೌರಾಯುಕ್ತ ವಿ.ಸಿ. ಚಿನ್ನಪ್ಪಗೌಡರ ಹಾಗೂ ಸಿಬ್ಬಂದಿ­ಯನ್ನು ತರಾಟೆಗೆ ತಗೆದುಕೊಂಡರು.

ಅತಿ ಶೀಘ್ರವೇ ಸಾರ್ವಜನಿಕರ ಎಲ್ಲ ಸಮಸ್ಯೆಗಳಿಗೆ ಸ್ಪಂದಿಸಬೇಕು. ಒಂದು ವೇಳೆ ಯಾವುದೇ ಕೆಲಸಗಳು ಆಗದಿ­ದ್ದರೇ ಸಾರ್ವಜನಿಕರೊಂದಿಗೆ ನಗರ­ಸಭೆಗೆ ಮುತ್ತಿಗೆ ಹಾಕಲಾಗು­ವುದು ಎಂದು ಮುನ್ನೆಚ್ಚರಿಕೆ ನೀಡಿದ ಅವರು, ಪ್ರತಿಯೊಂದು ವಾರ್ಡ್‌ಗಳಿಗೆ ಪೌರಾ­ಯು­ಕ್ತರು ಹಾಗೂ ಸಿಬ್ಬಂದಿ ಖುದ್ದಾಗಿ ಭೇಟಿ ನೀಡಿ ಸಾರ್ವಜನಿಕರ ಸಮಸ್ಯೆ­ಗಳನ್ನು ಆಲಿಸಿ ಪರಿಹಾರ ಕಾರ್ಯಗ­ಳನ್ನು ಕೈಗೊಳ್ಳಬೇಕು. ವಾರ್ಡಗಳನ್ನು ಅಭಿವೃದ್ಧಿಗೊಳಿಸಲು ಸರ್ಕಾರ ಅನು­ದಾನ ನೀಡುತ್ತಿಲ್ಲವೇ ಎಂದು ಪ್ರಶ್ನಿಸಿ ನಗರಸಭೆ ಸದಸ್ಯರು ಮತ್ತು ಜನಪರ ಕಾರ್ಯಗಳ ಅನುಷ್ಠಾನಕ್ಕೆ ಆದ್ಯತೆ ನೀಡುವಂತೆ ಕಿವಿಮಾತು ಹೇಳಿದರು.

ಈ ಸಂದರ್ಭದಲ್ಲಿ ಸ್ಥಾಯಿ ಸಮಿತಿ ಚೇರಮನ್ ಗಿರೀಶ ಖೋತ, ನಗರಸಭೆ ಸದಸ್ಯರಾದ ತಳದಪ್ಪ ಅಮ್ಮಣಗಿ, ಚಂದ್ರಕಾಂತ ಈಳಿಗೇರ, ಭಗವಂತ ಹುಳ್ಳಿ, ಭೀಮಶಿ ಭರಮಣ್ಣವರ, ಸ್ಥಾಯಿ ಸಮಿತಿ ಮಾಜಿ ಚೇರಮನ್ ಕಾಡಪ್ಪ ಮೇಸ್ತ್ರಿ, ನಾಗಪ್ಪ ಶೇಖರಗೋಳ, ಸತೀಶ ಜೇಡರ, ಮುತ್ತು ಜಮಖಂಡಿ, ರಮೇಶ ಪೂಜೇರಿ, ಅನಿಲ ತುರಾಯಿದಾರ, ರಮೇಶ ಬಡೆಪ್ಪಗೋಳ ಸೇರಿದಂತೆ ಅನೇಕರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.