ADVERTISEMENT

`ಶಾಂತಿ-ಸುವ್ಯವಸ್ಥೆಗೆ ಸಹಕಾರ ಅಗತ್ಯ'

​ಪ್ರಜಾವಾಣಿ ವಾರ್ತೆ
Published 2 ಜುಲೈ 2013, 6:30 IST
Last Updated 2 ಜುಲೈ 2013, 6:30 IST

ಗೋಕಾಕ: ನಗರದಲ್ಲಿ ಶಾಂತಿ-ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಎಲ್ಲ ಸಮಾಜಗಳ ಮುಖಂಡರ ಸಹಕಾರ ಅಗತ್ಯವಾಗಿದೆ ಎಂದು ಸಿಪಿಐ ಬಿ.ಎಸ್.ಲೋಕಾಪೂರ ಹೇಳಿದರು.

ಭಾನುವಾರ ಇಲ್ಲಿನ ಶಹರ್ ಪೊಲೀಸ್ ಠಾಣೆಯಲ್ಲಿ ಜರುಗಿದ ದಲಿತರ ಕುಂದು-ಕೊರತೆಗಳ ವಿಚಾರಣೆ ಕುರಿತು ಆಯೋಜಿಸಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಮಾಜ ಘಾತುಕ ಶಕ್ತಿಗಳು ಹಾಗೂ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ನಿರತರಾದವರ ಮಾಹಿತಿ ದೊರೆಯುತ್ತಲೇ ಕಾನೂನು ಕೈಗೆ ತೆಗೆದುಕೊಳ್ಳದೇ ನೇರವಾಗಿ ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಮನವಿ ಮಾಡಿದರು.

ದಲಿತ ಬಾಂಧವರು ತಮ್ಮ ಸಮಸ್ಯೆಗಳ ಇತ್ಯರ್ಥಕ್ಕಾಗಿ ನಮ್ಮನ್ನು ಸಂಪರ್ಕಿಸಬೇಕು. ನಗರದಲ್ಲಿ ಬೀಟ್ ವ್ಯವಸ್ಥೆಯನ್ನು ಚುರುಕುಗೊಳಿಸಲಾಗಿದ್ದು, ಕೆಲ ಕಳ್ಳತನ ಪ್ರಕರಣಗಳಲ್ಲಿ ಆರೋಪಿಗಳನ್ನು ಪತ್ತೆ ಹಚ್ಚಲಾಗಿದೆ. ಕಳ್ಳತನದ ಮಾಲು ವಶಪಡಿಸಿಕೊಂಡು ಸಂಬಂಧಪಟ್ಟವರಿಗೆ ತಲುಪಿಸುವ ವ್ಯವಸ್ಥೆ ಮಾಡಲಾಗಿದೆ ಎಂದರು. ನಗರದಲ್ಲಿ ಹೆಚ್ಚಿನ ಪೊಲೀಸ್ ಸಿಬ್ಬಂದಿಯ ಅವಶ್ಯಕತೆಯಿದ್ದು, ಈ ಕುರಿತು ಪ್ರಸ್ತಾವನೆಯನ್ನು  ಸಲ್ಲಿಸಲಾಗಿದೆ. ನಗರದಲ್ಲಿ ಟ್ರಾಫಿಕ್ ಪೊಲೀಸ್ ಠಾಣೆಯ ಸ್ಥಾಪನೆ ಸಂಬಂಧ ನೀಲ ನಕ್ಷೆಯನ್ನು ಸಲ್ಲಿಸಲಾಗಿದೆ ಎಂದರು.

ಅಪರಾಧ ವಿಭಾಗದ ಪಿಎಸ್‌ಐ ಶಿವಾನಂದ ಆರೇನಾಡ ಮಾತನಾಡಿ, ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಿ ಉತ್ತಮ ಸಮಾಜ ನಿರ್ಮಾಣಕ್ಕೆ ಸಹಕರಿಸಬೇಕು. ಮಾತುಕತೆ, ಒಡನಾಟ ಹಾಗೂ ಬುದ್ಧಿ ಮಾತುಗಳಿಂದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ಪ್ರತಿಯೊಬ್ಬರು ಕಾನೂನು ಪರಿಪಾಲನೆಗೆ ಸಹಕರಿಸುವಂತೆ ಮನವಿ ಮಾಡಿದರು.

ಸಂಕೇಶ್ವರ ಠಾಣೆಯ ಎಸ್‌ಐ ಆರ್.ಎಚ್.ಬಳ್ಳಾರಿ, ನಗರಸಭೆ ಸದಸ್ಯ ತಳದಪ್ಪ ಅಮ್ಮಣಗಿ, ಲಕ್ಷ್ಮಣ ತೆಳಗಡೆ, ಅಶೋಕ ಪಾಟೀಲ, ಶಾಸ್ತ್ರಿಗೊಲ್ಲರ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.