ADVERTISEMENT

ಶಾಸಕ ವಿಶ್ವನಾಥಗೆ ಗ್ರಾಮಸ್ಥರಿಂದ ಮನವಿ

ರಾಮದುರ್ಗ ಆರ್‌ಟಿಒ ಕಚೇರಿಗೆ ಮುರಗೋಡ ಹೋಬಳಿ ಗ್ರಾಮಗಳ ಸೇರ್ಪಡೆಗೆ ವಿರೋಧ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2018, 5:30 IST
Last Updated 10 ಮಾರ್ಚ್ 2018, 5:30 IST

ಬೈಲಹೊಂಗಲ: ರಾಮದುರ್ಗದಲ್ಲಿ ಪ್ರಾರಂಭಿಸಲಾದ ಸಹಾಯಕ ಪ್ರಾದೇಶಿಕ ಸಾರಿಗೆ ಕಚೇರಿ ವ್ಯಾಪ್ತಿಗೆ ಮುರಗೋಡ ಹೋಬಳಿಮಟ್ಟದ ಗ್ರಾಮಗಳನ್ನು ಸೇರ್ಪಡೆ ಮಾಡಿರುವುದನ್ನು ವಿರೋಧಿಸಿ ಗ್ರಾಮಗಳ ಹಿತರಕ್ಷಣಾ ಸಮಿತಿ ಸದಸ್ಯರು ಶಾಸಕ ಡಾ.ವಿಶ್ವನಾಥ ಪಾಟೀಲ ಅವರಿಗೆ ಶುಕ್ರವಾರ ಮನವಿ ಸಲ್ಲಿಸಿದರು.

ಶಾಸಕರ ನಿವಾಸಕ್ಕೆ ತೆರಳಿದ ಗ್ರಾಮಸ್ಥರು, ಈ ತೊಂದರೆ ನಿವಾರಿಸುವ ನಿಟ್ಟಿನಲ್ಲಿ ಸರ್ಕಾರದ ಮೇಲೆ ಒತ್ತಡ ಹೇರುವಂತೆ ಆಗ್ರಹಿಸಿದರು.

ಹೋರಾಟ ಸಮಿತಿ ಕಾರ್ಯದರ್ಶಿ ಮಹಾಂತೇಶ ಬಾಳಿಕಾಯಿ ಮಾತನಾಡಿ, ‘ಮುರಗೋಡ ಹೋಬಳಿ ಜನರು ನಿತ್ಯದ ವ್ಯಾಪಾರ, ವಹಿವಾಟುಗಳಿಗೆ ಬೈಲಹೊಂಗಲ ಪಟ್ಟಣ ಆಶ್ರಯಿಸಿದ್ದಾರೆ. ಆದರೆ, ಆರ್‌ಟಿಒ ಕಚೇರಿಗಾಗಿ ರಾಮದುರ್ಗಕ್ಕೆ ಹೋಗುವುದು ತುಂಬಾ ಕಷ್ಟ. ಹೀಗಾಗಿ ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ಮುರಗೋಡ ಹೋಬಳಿಯನ್ನು ಮೊದಲಿನಂತೆ ಬೈಲಹೊಂಗಲ ಸಹಾಯಕ ಪ್ರಾದೇಶಿಕ ಸಾರಿಗೆ ಕಚೇರಿ ವ್ಯಾಪ್ತಿಗೆ ಒಳಪಡಿಸಬೇಕು. ಒಂದು ವೇಳೆ ಮನವಿಗೆ ಸ್ಪಂದಿಸದಿದ್ದರೆ ಇದೇ 19 ರಂದು ಬೆಳಗಾವಿ- ಬಾಗಲಕೋಟೆ ರಾಜ್ಯ ಹೆದ್ದಾರಿ ರಸ್ತೆ ತಡೆದು ಪ್ರತಿಭಟನೆ ನಡೆಸಲಾಗುವುದು’ ಎಂದರು.

ADVERTISEMENT

ಗ್ರಾಮಸ್ಥರ ಮನವಿ ಸ್ವೀಕರಿಸಿದ ಶಾಸಕ ವಿಶ್ವನಾಥ ಪಾಟೀಲ ಮಾತನಾಡಿ, ‘ಗ್ರಾಮಸ್ಥರ ಮನವಿ ಕುರಿತು ಸಾರಿಗೆ ಸಚಿವ ಎಚ್.ಎಂ. ರೇವಣ್ಣ, ಸರ್ಕಾರದ ಅಧೀನ ಕಾರ್ಯದರ್ಶಿಗಳಿಗೆ ಪತ್ರ ಬರೆಯುತ್ತೇನೆ’ ಎಂದು ಭರವಸೆ ನೀಡಿದರು.

ಬಸಪ್ಪ ಕಾರಗಿ, ಮಲ್ಲಪ್ಪ ಕುರಬೇಟ, ಮಲ್ಲನಗೌಡ ಗೌಡತಿ, ಉದಯ ಚಿಕ್ಕನಗೌಡರ, ಮಲ್ಲಿಕಾರ್ಜುನ ಸೊಗಲದ, ಮಹಾಂತೇಶ ಬಡಿಗೇರ, ದೀಪಕ ಬಾಳಿಕಾಯಿ, ಸಾಗರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.