ADVERTISEMENT

ಶಾಸನಬದ್ಧ ಕಾಯ್ದೆ ಜಾರಿಯಾಗಲಿ: ಕಡಬೂರು

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2012, 6:00 IST
Last Updated 10 ಫೆಬ್ರುವರಿ 2012, 6:00 IST
ಶಾಸನಬದ್ಧ ಕಾಯ್ದೆ ಜಾರಿಯಾಗಲಿ: ಕಡಬೂರು
ಶಾಸನಬದ್ಧ ಕಾಯ್ದೆ ಜಾರಿಯಾಗಲಿ: ಕಡಬೂರು   

ಬೆಳಗಾವಿ: `ಕಬ್ಬಿನ ಬೆಲೆ ನಿಗದಿಗಾಗಿ ಶಾಸನಬದ್ಧ ಕಾಯ್ದೆಯನ್ನು ಜಾರಿಗೊಳಿಸದಿದ್ದರೆ ರಾಜ್ಯ ಬಜೆಟ್ ಅಧಿವೇಶನದ ಆರಂಭದ ದಿನದಿಂದಲೇ ಉಪವಾಸ ನಡೆಸಲಾಗುವುದು~ ಎಂದು ಕಬ್ಬು ಬೆಳೆಗಾರರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಕಡಬೂರು ಶಾಂತಕುಮಾರ ಎಚ್ಚರಿಸಿದರು.

`ರಾಜ್ಯದಲ್ಲಿ ಶಾಸನಬದ್ಧ ಕಾಯ್ದೆ ಇಲ್ಲದಿರುವುದರಿಂದ ಒಂದೊಂದು ಸಕ್ಕರೆ ಕಾರ್ಖಾನೆ ಪ್ರತಿ ಟನ್ ಕಬ್ಬಿಗೆ ಒಂದೊಂದು ಬೆಲೆ ನೀಡುತ್ತಿವೆ. ಮುಖ್ಯಮಂತ್ರಿಗಳೇ ಸ್ವತಃ ಪ್ರತಿ ಟನ್ ಕಬ್ಬಿಗೆ 2 ಸಾವಿರ ರೂಪಾಯಿ ನೀಡಬೇಕು ಎಂದು ಹೇಳಿದ್ದರೂ ಪಾಲಿಸುತ್ತಿಲ್ಲ~ ಎಂದು ಅವರು ಟೀಕಿಸಿದರು.

`ಬೇರೆ ರಾಜ್ಯಗಳಲ್ಲಿ ಈಗಾಗಲೇ ಶಾಸನಬದ್ಧ ಕಾಯ್ದೆ ಜಾರಿಯಲ್ಲಿದೆ. ಆದರೆ ರಾಜ್ಯದಲ್ಲಿ ಜನಪ್ರತಿನಿಧಿಗಳೇ ಸಕ್ಕರೆ ಕಾರ್ಖಾನೆಗಳ ಮಾಲೀಕರಾಗಿರುವುದರಿಂದ ಕಾಯ್ದೆ ಜಾರಿಗೆ ಅಡ್ಡಿ ಪಡಿಸುತ್ತಿದ್ದಾರೆ~ ಎಂದರು.

`ರಾಜ್ಯದಲ್ಲಿರುವ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ಸಕ್ಕರೆ ಕಾರ್ಖಾನೆಗಳ ಲಾಬಿಗೆ ಒಳಗಾಗಿದ್ದು, ರೈತ ವಿರೋಧಿ ನೀತಿ ಅನುಸರಿಸುತ್ತಿವೆ. ಸಕ್ಕರೆ ಬೆಲೆ ಕುಸಿದಿದೆ ಎಂದು ಕೇಂದ್ರಕ್ಕೆ ಕಾರ್ಖಾನೆಗಳ ನಿಯೋಗ ತೆಗೆದುಕೊಂಡು ಹೋಗುತ್ತಿರುವ ಸಕ್ಕರೆ ಸಚಿವರು, ಬೆಲೆ ಹೆಚ್ಚಳಕ್ಕೆ ರೈತರು ಮಾಡುತ್ತಿರುವ ಹೋರಾಟದತ್ತ ಗಮನ ಹರಿಸುತ್ತಿಲ್ಲ~ ಎಂದು ಅವರು ಟೀಕಿಸಿದರು.

ಪ್ರಸಕ್ತ ವರ್ಷ ಪ್ರತಿ ಟನ್ ಕಬ್ಬಿಗೆ 2 ಸಾವಿರ ರೂಪಾಯಿ ಹಾಗೂ ಕಳೆದ ವರ್ಷದ 200 ರೂಪಾಯಿ ಬಾಕಿ ನೀಡದ ಸಕ್ಕರೆ ಕಾರ್ಖಾನೆಗಳ ಗೋದಾಮಿಗೆ ಬೀಗ ಹಾಕುವ ಕೆಲಸವನ್ನು ಜಿಲ್ಲಾಧಿಕಾರಿಗಳು ಮಾಡಬೇಕು. ಈ ಕುರಿತು ಅವರಿಗೆ ಮನವಿ ಸಲ್ಲಿಸಲಾಗುವುದು ಎಂದು ಸುದ್ದಿಗಾರರಿಗೆ ಶಾಂತಕುಮಾರ ತಿಳಿಸಿದರು.

ಇದಕ್ಕೂ ಮೊದಲು ಸಂಘದ ಸಭೆ ನಡೆಯಿತು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಾಬು ಉಪಾಸಿ, ಚಂದ್ರೇಗೌಡ ದಾಸ್ತಿಕೊಪ್ಪ, ಲಿಂಗರಾಜ ಪಾಟೀಲ, ಸಿದಗೌಡ ಮೋದಗಿ ಮತ್ತಿತರರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.