ADVERTISEMENT

ಸಹಕಾರ ಕ್ಷೇತ್ರದಿಂದ ಸಾಮಾಜಿಕ ಪ್ರಗತಿ: ಕೋರೆ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2011, 8:45 IST
Last Updated 3 ಅಕ್ಟೋಬರ್ 2011, 8:45 IST

ಚಿಕ್ಕೋಡಿ: ದುರ್ಬಲ ಹಾಗೂ ಮಧ್ಯಮ ವರ್ಗದ ಜನರ ಆರ್ಥಿಕ ಮತ್ತು ಸಾಮಾಜಿಕ ಪ್ರಗತಿಯಲ್ಲಿ ಮಹತ್ತರ ಪಾತ್ರ ವಹಿಸಿರುವ ಸಹಕಾರ ಕ್ಷೇತ್ರದ ಅಭಿವೃದ್ಧಿಗೆ ಸರಕಾರ ಹಲವು ಯೋಜನೆಗಳನ್ನು ಜಾರಿಗೊಳಿಸುತ್ತಿದೆ ಎಂದು ರಾಜ್ಯ ಸಭೆ ಸದಸ್ಯ ಡಾ. ಪ್ರಭಾಕರ ಕೋರೆ ಹೇಳಿದರು.

ತಾಲ್ಲೂಕಿನ ಅಂಕಲಿ ಗ್ರಾಮದ ಡಾ. ಪ್ರಭಾಕರ ಕೋರೆ ಕ್ರೆಡಿಟ್ ಸೌಹಾರ್ದ ಸಹಕಾರಿಯ 23ನೇ ವಾರ್ಷಿಕ ಸರ್ವ ಸಾಧರಣ ಸಭೆಯಲ್ಲಿ ಅವರು ಮಾತನಾಡಿದರು. ದೇಶದ ಅಭಿವೃದ್ಧಿಗೆ ಪೂರಕವಾಗಿರುವ ಗ್ರಾಮೀಣ ಅಭಿವೃದ್ಧಿಯಲ್ಲಿ ಸಹಕಾರಿ ವಲಯದ ಸಂಘ- ಸಂಸ್ಥೆಗಳು ಅಮೂಲ್ಯ ಕೊಡುಗೆ ನೀಡುತ್ತಿವೆ. ಸಹಕಾರಿ ಚಳವಳಿಯನ್ನು ಉಳಿಸಿ, ಬೆಳೆಸಿಕೊಂಡು ಮುನ್ನಡೆಯುವ ಅಗತ್ಯವಿದೆ ಎಂದು ತಿಳಿಸಿದರು.

ಸಹಕಾರಿಯ ಅಧ್ಯಕ್ಷ ಕೆ.ಕೆ. ಮೈಶಾಳೆ ಅಧ್ಯಕ್ಷತೆ ವಹಿಸಿದ್ದರು. ಸಹಕಾರಿಯ ಪ್ರಧಾನ ವ್ಯವಸ್ಥಾಪಕ ದೇವೇಂದ್ರ ಕರೋಶಿ ಮಾತನಾಡಿ, ಸಂಸ್ಥೆಯು 2010-11ನೇ ಆರ್ಥಿಕ ವರ್ಷದಲ್ಲಿ 4025 ಸದಸ್ಯರನ್ನು, ರೂ 1.1 ಕೋಟಿಗೂ ಹೆಚ್ಚು ಶೇರು ಬಂಡವಾಳವನ್ನು, 6.95 ಕೋಟಿ ರೂ., ನಿಧಿ ಹಾಗೂ 75.77 ಕೋಟಿ ರೂ., ಠೇವುಗಳನ್ನು ಸಂಗ್ರಹಿಸಿದ್ದು, 41.69 ಕೋಟಿ ರೂ.ಸಾಲ ವಿತರಿಸಿದ್ದು, 60.41 ಲಕ್ಷ ರೂ. ನಿವ್ವಳ ಲಾಭ ಗಳಿಸಿ, ಸದಸ್ಯರಿಗೆ ಶೇ 13 ರಷ್ಟು ಲಾಭಾಂಶ ವಿತರಿಸಿದೆ ಎಂದು ಹೇಳಿದರು.

ಸಂಸ್ಥೆಯ ಪಿಗ್ಮಿ ಸಂಗ್ರಾಹಕದಲ್ಲಿ ಪ್ರಥಮ ಸ್ಥಾನ ಪಡೆದ ಚಿಕ್ಕೋಡಿ ಶಾಖೆಯ ಸಂಜಯ ಡಬ್ಬನ್ನವರ ಹಾಗೂ ಅತ್ಯುತ್ತಮ ಶಾಖೆಗಾಗಿ ಕೇರೂರ ಶಾಖೆಗೆ ಪ್ರಶಸ್ತಿ ಪಡೆದಿವೆ.

ಸಂಸ್ಥೆ ಉಪಾಧ್ಯಕ್ಷ ಸಿದಗೌಡ ಮಗದುಮ್, ಸಂಚಾಲಕರಾದ ಅಮಿತ ಕೋರೆ, ಮಲ್ಲಿಕಾರ್ಜುನ ಕೋರೆ, ಬಾಳಗೌಡ ರೇಂದಾಳೆ, ಮಹಾಂತೇಶ ಪಾಟೀಲ, ರಾಮು ಸಂಗೋಟೆ, ಸದಾಶಿವ ಕಮತೆ, ನೇಹರು ಚಿಕಲಿ, ಅಜೀತ ಬಿರಡೆ, ಸಚಿನ ಕುಠೋಳೆ, ಸುಧೀರ ಪೂಜಾರಿ, ಸಚಿನ ಪಾಟೀಲ, ಶೋಭಾತಾಯಿ ಜಕಾತೆ ಹಾಗೂ ಸುರೇಶ ಪಾಟೀಲ ಉಪಸ್ಥಿತರಿದ್ದರು. ಸುನಂದಾ ಮಗದುಮ್ ನಿರೂಪಿಸಿದರು. ಹಿರೇಮಠ ವಂದಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.