ADVERTISEMENT

ಸಿದ್ಧಾರೂಢ ಜಯಂತಿ:ರಾಜ್ಯ ಮಟ್ಟದ ಭಜನೆ ಸ್ಪರ್ಧೆ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2018, 6:28 IST
Last Updated 20 ಮಾರ್ಚ್ 2018, 6:28 IST

ಬೆಳಗಾವಿ: ಹುಬ್ಬಳ್ಳಿಯ ಸಿದ್ಧಾರೂಢ ಸ್ವಾಮೀಜಿಯವರ ಜಯಂತ್ಯುತ್ಸವ ಅಂಗವಾಗಿ ಮಠದಲ್ಲಿ ಏಪ್ರಿಲ್‌ 8ರಿಂದ 15ರವರೆಗೆ ರಾಜ್ಯ ಮಟ್ಟದ ಭಜನೆ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.

ಭಾಗವಹಿಸಲು ಇಚ್ಛಿಸುವವರ ಏ.5ರೊಳಗೆ ಹೆಸರು ನೋಂದಾಯಿಸಬೇಕು. ಪ್ರವೇಶ ಶುಲ್ಕ ₹ 300. ವಿಜೇತರಿಗೆ ಬಹುಮಾನ ನೀಡಲಾಗುವುದು ಎಂದು ಸ್ಪರ್ಧೆ ಸಮಿತಿಯ ಅಧ್ಯಕ್ಷ ಶಾಮಾನಂದ ಬಾ.ಪೂಜೇರಿ ಹೇಳಿದರು.

ಮೂರು ಭಜನೆಗಳನ್ನು ಹಾಡಲು ಅವಕಾಶವಿದ್ದು, ಇದರಲ್ಲಿ ಕನಿಷ್ಠ ಎರಡು ಪದಗಳನ್ನು ಕೈವಲ್ಯ ಸಾಹಿತ್ಯದ (ಕೈವಲ್ಯ
ಸಾಹಿತ್ಯವೆಂದರೆ ನಿಜಗುಣ ಶಿವಯೋಗಿಗಳು, ಸರ್ಪಭೂಷಣ ಶಿವಯೋಗಿಗಳು ಹಾಗೂ ಮಹಾಲಿಂಗ ರಂಗರ ಸಾಹಿತ್ಯ
ಗಳಿಂದ ಆಯ್ಕೆ ಮಾಡಿರುವಂತಹದ್ದು) ಪದಗಳನ್ನು ಕಡ್ಡಾಯವಾಗಿ ಹಾಡಬೇಕು. ಸ್ಪರ್ಧೆಯಲ್ಲಿ ಭಾಗವಹಿಸುವವರಿಗೆ ಊಟ, ವಸತಿಯನ್ನು ಮಠದ ವತಿಯಿಂದ ಮಾಡಲಾಗುವುದು. ಭಾಗವಹಿಸಿದ ಪ್ರತಿಯೊಂದು ತಂಡಕ್ಕೆ ಸವಿನೆನಪಿನ ಕಾಣಿಕೆ ಹಾಗೂ ಪ್ರಶಸ್ತಿ ಪತ್ರ ನೀಡಲಾಗುವುದು ಎಂದು ಗುರುವಾರ ಇಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ADVERTISEMENT

ಪ್ರಥಮ– ₹ 60,000 ದ್ವಿತೀಯ– ₹ 45,000, ತೃತೀಯ– ₹ 35,000, ಸಮಾಧಾನಕರ– ₹ 6,000 (10 ತಂಡಗಳಿಗೆ ನೀಡಲಾಗುವುದು). 16 ವರ್ಷದ ಒಳಗಿನ ಬಾಲಕರ ಒಂದು ತಂಡ ಹಾಗೂ ಬಾಲಕಿಯರ ಒಂದು ತಂಡಕ್ಕೆ ಪ್ರತಿಭಾ ಪುರಸ್ಕಾರ ₹ 7,000, ಮಹಿಳಾ ಭಜನಾ ತಂಡಕ್ಕೆ ಪುರಸ್ಕಾರ ₹ 7,000 ನೀಡಲಾಗುವುದು ಎಂದು ಅವರು ತಿಳಿಸಿದರು.

ವೈಯಕ್ತಿಕ ಬಹುಮಾನಗಳ ವಿವರ: ಉತ್ತಮ ಹಾಡುಗಾರಿಕೆಗೆ ₹ 3,000, ಉತ್ತಮ ಹಾರ್ಮೋನಿಯಂ ವಾದಕರಿಗೆ ₹ 3,000, ಉತ್ತಮ ತಬಲಾ ವಾದಕರಿಗೆ ₹ 3,000 ಉತ್ತಮ ತಾಳ ವಾದಕರಿಗೆ ₹ 3,000 ಉತ್ತಮ ಧಮಡಿ ವಾದಕರಿಗೆ ₹ 3,000 ನೀಡಲಾಗುವುದು ಎಂದು ನುಡಿದರು.

ಅವಕಾಶವಿಲ್ಲ: ಸಿನಿಮಾ, ಜಾನಪದ ಶೈಲಿಯ ಹಾಡುಗಳಿಗೆ ಅವಕಾಶವಿಲ್ಲ. ಕೈವಲ್ಯ ಪದಗಳನ್ನು ಹೊರತುಪಡಿಸಿದರೆ, ಸಿದ್ಧಾರೂಢರ ಮೇಲಿನ ಪದ್ಯ, ದಾಸರ ಪದ್ಯ, ಶರೀಫರ ಪದ್ಯ ಹಾಡಬಹುದು. ತಮ್ಮ ಹಾಡಿನ ಸಾಹಿತ್ಯದ ಒಂದು ಪ್ರತಿಯನ್ನು ತೀರ್ಪುಗಾರರಿಗೆ ನೀಡಬೇಕು. ತಾವು ಹಾಡುವ ಪದ್ಯದ ಹೆಸರು, ರಚಿಸಿದ ಕವಿಗಳ ಹೆಸರು, ರಾಗ, ತಾಳಗಳ ವಿವರವನ್ನು ಒಂದು ಹಾಳೆಯ ಮೇಲೆ ಬರೆದು ನೀಡಬೇಕು. ತಂಡದ ಕಲಾವಿದರ ಸಂಖ್ಯೆ 6ಕ್ಕಿಂತ ಕಡಿಮೆ ಇರಬಾರದು ಹಾಗೂ 10ಕ್ಕಿಂತ ಹೆಚ್ಚು ಇರಬಾರದು ಎಂದು ಹೇಳಿದರು. ಹೆಚ್ಚಿನ ಮಾಹಿತಿಗಾಗಿ ಮೊಬೈಲ್‌ ಸಂಖ್ಯೆ 9620693060 ಸಂಪರ್ಕಿಸಬಹುದು ಎಂದರು.

ನ್ಯಾಯಾಧೀಶರಿಂದ ಉದ್ಘಾಟನೆ: ಏ.8ರಂದು ಬೆಳಿಗ್ಗೆ 10.30ಕ್ಕೆ ಜಿಲ್ಲಾ ಸೆಷನ್ಸ್‌ ನ್ಯಾಯಾಧೀಶ ರಾಮಚಂದ್ರ ಡಿ. ಹುದ್ದಾರ ಸ್ಪರ್ಧೆಗೆ ಚಾಲನೆ ನೀಡಲಿದ್ದಾರೆ. ಸಿದ್ಧಾರೂಢ ಸ್ವಾಮಿ ಸಾನ್ನಿಧ್ಯ ವಹಿಸಲಿದ್ದಾರೆ  ಎಂದು ತಿಳಿಸಿದರು.

ಸ್ಪರ್ಧಾ ಸಮಿತಿಯ ಉಪಾಧ್ಯಕ್ಷ ನಾರಾಯಣಪ್ರಸಾದ ಅ.ಪಾಠಕ ಕಾರ್ಯದರ್ಶಿ ಬಸವರಾಜ ಸಿ. ಕಲ್ಯಾಣಶೆಟ್ಟರ, ಧರ್ಮಧರ್ಶಿ ನಾರಾಯಣ ಲ.ನಿರಂಜನ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.