ADVERTISEMENT

ಸುವರ್ಣ ವಿಧಾನಸೌಧ ವೀಕ್ಷಣೆಗೆ ಜನ ಜಾತ್ರೆ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2012, 9:15 IST
Last Updated 13 ಅಕ್ಟೋಬರ್ 2012, 9:15 IST

ಬೆಳಗಾವಿ: ಸಮೀಪದ ಹಲಗಾ- ಬಸ್ತವಾಡ ಗ್ರಾಮದ ವ್ಯಾಪ್ತಿಯಲ್ಲಿ ಗುರುವಾರ (ಅ. 11) ಲೋಕಾರ್ಪಣೆಗೊಂಡ  ಸುವರ್ಣ ವಿಧಾನಸೌಧ ಕಟ್ಟಡ ನೋಡಲು ಶುಕ್ರವಾರ ವಿದ್ಯಾರ್ಥಿಗಳು, ಸುತ್ತಮುತ್ತಲಿನ ಗ್ರಾಮಸ್ಥರು ತಂಡೋಪಂಡವಾಗಿ ಆಗಮಿಸಿದರು. ವಿದ್ಯುದ್ದೀಪಗಳಿಂದ ಅಲಂಕೃತ ಕಟ್ಟಡ ನೋಡಲು ಸಾವಿರಾರು ಜನರು ಆಗಮಿಸಿದ್ದರು.

ಕಟ್ಟಡ ವೀಕ್ಷಣೆಗೆ ಬಂದ ಜನರಿಗೆ ಪಾಸಿನ ಕಿರಕಿರಿ ಸಹ ಉಂಟಾಯಿತು. ಪೊಲೀಸರು ಹಾಗೂ ಭದ್ರತಾ ಸಿಬ್ಬಂದಿ ಪಾಸ್ ಇರದ ಜನರನ್ನು ಆವರಣದ ಒಳಗೆ ಬಿಡುತ್ತಿರಲಿಲ್ಲ. ನಂತರ ಕೆಲವರು ಮನವಿ ಮಾಡಿಕೊಂಡು ಕಟ್ಟಡ ವೀಕ್ಷಣೆಗೆ ತೆರಳಿದರು.

`ಉದ್ಘಾಟನೆ ಸಂದರ್ಭದಲ್ಲಿ ವಿದ್ಯುತ್ ಅಲಂಕಾರ ಮಾಡಿದ್ದು, ಕಟ್ಟಡ ವೀಕ್ಷಣೆಗೆ ನ. 1ರ ವರೆಗೆ ಸಾರ್ವಜನಿಕರಿಗೆ ಪ್ರವೇಶ ಮುಕ್ತಗೊಳಿಸಬೇಕು. ಇದಕ್ಕಾಗಿ ರಾತ್ರಿ 7.30 ರಿಂದ 9ರವರೆಗೆ ವೇಳೆ ನಿಗದಿಪಡಿಸಬೇಕು~ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಯ.ರು. ಪಾಟೀಲ ಒತ್ತಾಯಿಸಿದ್ದಾರೆ. ಸುವರ್ಣ ವಿಧಾನಸೌಧ ಕಟ್ಟಡಕ್ಕೆ ವಿವಿಧ ಇಲಾಖೆಗಳ ಕಚೇರಿಗಳನ್ನು ಸ್ಥಳಾಂತರಿಸಬೇಕು ಎಂದು ಆಗ್ರಹಿಸಿರುವ ಅವರು, ಉತ್ತರ ಕರ್ನಾಟಕದ ಜನತೆ ಸರ್ಕಾರಿ ಮಟ್ಟದ ತಮ್ಮ ಕೆಲಸಗಳಿಗೆ ಬೆಂಗಳೂರಿಗೆ ಹೋಗುವುದನ್ನು ತಪ್ಪಿಸಬೇಕು. ಈ ಎಲ್ಲ ಕೆಲಸಗಳು ಸುವರ್ಣ ವಿಧಾನಸೌಧದಲ್ಲಿಯೇ ಆಗುವಂತೆ ಅನುಕೂಲ ಮಾಡಿಕೊಡಬೇಕು ಎಂದು ಮನವಿ ಮಾಡಿದ್ದಾರೆ.

ಸುವರ್ಣ ವಿಧಾನಸೌಧದ ಉದ್ಘಾಟನೆ ನಂತರ ಕಟ್ಟಡದೊಳಗೆ ಗಣ್ಯಾತಿಗಣ್ಯರಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು. ಆದರೆ ಶುಕ್ರವಾರದ ಮಧ್ಯಾಹ್ನದವರೆಗೂ ಸ್ವಚ್ಛತೆ ಕಾರ್ಯ ನಡೆದಿರಲಿಲ್ಲ. ಎಲ್ಲೆಂದರಲ್ಲಿ ಪ್ಲಾಸ್ಟಿಕ್ ಬಾಟಲಿಗಳು, ತಟ್ಟೆಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.