ತೆಲಸಂಗ: ತೆಲಸಂಗ ಹೋಬಳಿಯಲ್ಲಿ ದ್ರಾಕ್ಷಿ ಬೆಳೆಗೆ ದವಣ್ಯಾ ಮತ್ತು ಕೊಳೆ ರೋಗ ತಗುಲಿದ್ದು, ಈ ಬಗ್ಗೆ ತಹಶೀಲ್ದಾರರಿಗೆ ವರದಿ ನೀಡುವುದಾಗಿ ತೋಟಗಾರಿಗೆ ಅಧಿಕಾರಿ ಅಶ್ವಿನಿ ಹೇಳಿದರು. ಸಮೀಪದ ಕಕಮರಿ ಗ್ರಾಮದ ಅಶೋಕ ಶಿರಗುಪ್ಪಿ ಅವರ ದ್ರಾಕ್ಷಿ ತೋಟಕ್ಕೆ ಶುಕ್ರವಾರ ಭೇಟಿ ನೀಡಿ ಪರಿಶೀಲಿಸಿದ ಅವರು, ಹೋಬಳಿಯಲ್ಲಿ ನೂರಾರು ಎಕರೆಗಳಲ್ಲಿ ಈ ರೋಗ ಬಾಧೆ ಕಂಡುಬಂದಿದ್ದು, ದ್ರಾಕ್ಷಿ ಕಾಯಿಗಳ ಗೊಂಚಲು ಕತ್ತರಿಸಿ ನೆಲಕ್ಕೆ ಬೀಳುತ್ತಿವೆ, ಎಲ್ಲ ಕಡೆ ಪರಿಶೀಲನೆ ನಡೆಸಿ ವರದಿ ನೀಡುವುದಾಗಿ ಭರವಸೆ ನೀಡಿದರು.
ಹವಾಮಾನ ವೈಪರಿತ್ಯದಿಂದ ದ್ರಾಕ್ಷಿ ಕಾಯಿಗಟ್ಟಲು ಆರಂಭಿಸಿದ ಹಂತದಲ್ಲಿ ಈ ರೋಗ ಕಂಡುಬಂದಿದೆ. ಈ ವಾತಾವರಣದಲ್ಲಿ ಈ ರೋಗ ನಿಯಂತ್ರಿಸಲು ಕಷ್ಟವಾಗಿದೆ. ಸಾಕಷ್ಟು ಪ್ರಯತ್ನ ಪಟ್ಟರೂ ದ್ರಾಕ್ಷಿ ಬೆಳೆ ರೋಗ ಹತೋಟಿ ಆಗಿಲ್ಲ. ಇದೇ ಸ್ಥಿತಿ ಇನ್ನಷ್ಟು ದಿನ ಕಾಡಿದರೆ ಈ ವರ್ಷ ಒಂದೂ ಗೊಣೆಯನ್ನು ಪಡೆಯಲಾಗದು ಎಂದು ರೈತರಾದ ಅಶೋಕ ಶಿರಗುಪ್ಪಿ, ಶ್ರೀಶೈಲ ಜನಗೌಡ, ಅಮೋಘ ವಡೆಯರ ಅಧಿಕಾರಿಗಳಿಗೆ ತಿಳಿಸಿದರು.
ಪ್ರಸಕ್ತ ಸಾಲಿನಲ್ಲಿ ಕಾಡಿದ ಬರದಲ್ಲಿಯೂ ಟ್ಯಾಂಕರ್ ಮೂಲಕ ನೀರು ಹಾಕಿ ದ್ರಾಕ್ಷಿ ಗಿಡ ಬೆಳೆಸಿದ ರೈತರಿಗೆ ಈಗ ಇನ್ನೊಂದು ಸಂಕಟ ಬಂದಿದೆ. ಹುಲುಸಾಗಿ ಬೆಳೆದ ದ್ರಾಕ್ಷಿ ಬೆಳೆಗೆ ದವಣ್ಯಾ ಹಾಗೂ ಕೊಳೆ ರೋಗ ಮರ್ಮಾಘಾತ ನೀಡಿದೆ. ಇದರಿಂದ ಲಕ್ಷಾಂತರ ರೂಪಾಯಿ ನಷ್ಟವಾಗುತ್ತದೆ. ಸರ್ಕಾರ ಬೆಳೆ ನಷ್ಟದ ಬಗ್ಗೆ ಮಾತಾಡುತ್ತಿಲ್ಲ ಎಂದೂ ಕಕಮರಿ ರೈತ ಅಶೋಕ ಶಿರಗುಪ್ಪಿ ತಮ್ಮ ಅಳಲು ತೋಡಿಕೊಂಡರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.