ADVERTISEMENT

ಎಟಿಎಂ ಕಾರ್ಡ್‌ ಬಳಸಿ ವಂಚನೆ: ಬಂಧನ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2022, 12:56 IST
Last Updated 5 ಅಕ್ಟೋಬರ್ 2022, 12:56 IST

ಚಿಕ್ಕೋಡಿ: ಎಟಿಎಂನಿಂದ ಹಣ ತೆಗೆಯಲು ಸಹಾಯ ಮಾಡುವ ನೆಪದಲ್ಲಿ, ವಂಚಿಸುತ್ತಿದ್ದ ವ್ಯಕ್ತಿಯನ್ನು ಮಂಗಳವಾರ ಬಂಧಿಸಿದ ಪೊಲೀಸರು, ವಿವಿಧ ಬ್ಯಾಂಕುಗಳ 51 ಕಾರ್ಡ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ಸಾವರ್ಡೆ ಗ್ರಾಮದ ನಿವಾಸಿ ಅಮೂಲ್‌ ದಿಲೀಪ್‌ ಸಖಟೆ (30) ಬಂಧಿತ.

ಚಿಕ್ಕೋಡಿಯಲ್ಲಿ ವಿಜಯಾ ರಾನಪ್ಪ ಢಾಲೆ ಎನ್ನುವ ಮಹಿಳೆ ಈಚೆಗೆ ಎಟಿಎಂನಿಂದ ಹಣ ತೆಗೆಯಲು ಹೋಗಿದ್ದರು. ಅಲ್ಲಿಯೇ ನಿಂತಿದ್ದ ಆರೋಪಿ ಹಣ ತೆಗೆಯಲು ಸಹಾಯ ಮಾಡುವುದಾಗಿ ಹೇಳಿ ಅವರ ಎಟಿಎಂ ಪಡೆದಿದ್ದ. ಅದರ ‍ಪಿನ್‌ ಸಂಖ್ಯೆಯನ್ನೂ ಪಡೆದುಕೊಂಡ ಬಳಿಕ ನಕಲಿ ಕಾರ್ಡ್‌ವೊಂದನ್ನು ಮಹಿಳೆಗೆ ನೀಡಿ ಕಳುಹಿಸಿದ್ದ. ನಂತರ ಅವರ ಕಾರ್ಡ್‌ ಬಳಸಿ ₹ 37,500 ಹಣ ತೆಗೆದುಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ವಿಜಯಾ ಅವರು ದೂರು ನೀಡಿದ ನಂತರ ತನಿಖೆ ಕೈಗೊಂಡ ಚಿಕ್ಕೋಡಿ ಪೊಲೀಸರು ಆರೋಪಿಯನ್ನು ‍ಪತ್ತೆ ಮಾಡುವಲ್ಲಿ ಯಶಸ್ವಿಯಾದರು.

ಈ ಆರೋಪಿ ಅಥಣಿ, ಗೋಕಾಕ, ನಿಪ್ಪಾಣಿ, ಚಿಕ್ಕೋಡಿ, ಬಾಗಲಕೋಟೆ ಹಾಗೂ ಮಹಾರಾಷ್ಟ್ರದ ಕೆಲವು ಕಡೆ ಇದೇ ರೀತಿ ಕಾರ್ಡ್‌ಗಳನ್ನು ಕಬಳಿಸಿ ಹಣ ಪಡೆದಿದ್ದಾಗಿ ಪೊಲೀಸರು ತಿಳಿಸಿದ್ದಾರೆ.

ಸಿಪಿಐ ಆರ್‌.ಆರ್‌.ಪಾಟೀಲ, ಪಿಎಸ್‌ಐ ಯಮನಪ್ಪ ಮಾಂಗ ನೇತೃತ್ವದಲ್ಲಿ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದಾರೆ.

*
ಕಳವು: ಮಹಿಳೆ ಬಂಧನ

ಸವದತ್ತಿ: ಇಲ್ಲಿನ ಯಲ್ಲಮ್ಮನ ಗುಡ್ಡದಲ್ಲಿ ನವರಾತ್ರಿ ದರ್ಶನಕ್ಕೆ ಬಂದ ಮಹಿಳೆಯ ಚಿನ್ನಾಭರಣ ಕದ್ದ ಆರೋಪದ ಮೇರೆಗೆ ಇನ್ನೊಬ್ಬ ಮಹಿಳೆಯನ್ನು ಮಂಗಳವಾರ ಬಂಧಿಸಲಾಗಿದೆ.

ಬಂಧಿತರಿಂದ ₹ 2 ಲಕ್ಷ ಬೆಲೆಬಾಳುವ 40 ಗ್ರಾಂ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.