ಬೆಳಗಾವಿ: ಅಥಣಿ, ಗೋಕಾಕ ಹಾಗೂ ಕಾಗವಾಡ ವಿಧಾನಸಭಾ ಕ್ಷೇತ್ರಗಳಿಂದ ಸ್ಪರ್ಧೆ ಬಯಸಿ ಅಭ್ಯರ್ಥಿಗಳು ಸಲ್ಲಿಸಿದ್ದ ನಾಮಪತ್ರಗಳ ಪರಿಶೀಲನಾ ಕಾರ್ಯ ಮಂಗಳವಾರ ನಡೆಯಿತು. ಈ ಮೂರು ಕ್ಷೇತ್ರಗಳಿಂದ ಒಟ್ಟು 47 ಮಂದಿ ನಾಮಪತ್ರ ಸಲ್ಲಿಸಿದ್ದರು. 10 ಮಂದಿಯ ನಾಮಪತ್ರಗಳು ತಿರಸ್ಕೃತಗೊಂಡಿವೆ.
ದಾಖಲೆಗಳು ಇಲ್ಲದಿರುವ ಹಾಗೂ ಘೋಷಣಾ ಪತ್ರದಲ್ಲಿ ಕೆಲವು ಅಂಶಗಳನ್ನು ಭರ್ತಿ ಮಾಡದಿರುವ ನಾಮಪತ್ರಗಳನ್ನು ಚುನಾವಣಾ ಅಧಿಕಾರಿಗಳು ತಿರಸ್ಕರಿಸಿದ್ದಾರೆ. ಮೂರು ಕ್ಷೇತ್ರಗಳಲ್ಲೂ ಮಾನ್ಯತೆ ಪಡೆದ ರಾಜಕೀಯ ಪಕ್ಷಗಳ ಅಧಿಕೃತ ಅಭ್ಯರ್ಥಿಗಳ ನಾಮಪತ್ರಗಳು ಕ್ರಮಬದ್ಧವಾಗಿವೆ. ಅಭ್ಯರ್ಥಿಗಳು, ಸೂಚಕರು ಹಾಗೂ ಪ್ರತಿನಿಧಿಗಳ ಸಮ್ಮುಖದಲ್ಲಿ ಪ್ರಕ್ರಿಯೆ ನಡೆಯಿತು. ಕೆಲವರು ಹೆಚ್ಚುವರಿಯಾಗಿ ಸಲ್ಲಿಸಿದ್ದ ನಾಮಪತ್ರಗಳನ್ನು ಪುರಸ್ಕರಿಸಲಾಗಿಲ್ಲ.
ಗೋಕಾಕ: ಇಲ್ಲಿ 13 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರು. ಈ ಪೈಕಿ ಇಬ್ಬರ (ಸತೀಶ ಜಾರಕಿಹೊಳಿ ಹಾಗೂ ವಿವೇಕಾನಂದ ಬಿ. ಜತ್ತಿ) ನಾಮಪತ್ರಗಳು ತಿರಸ್ಕೃತವಾಗಿವೆ. ಇವರಿಬ್ಬರೂ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳೆಂದು ಉಮೇದುವಾರಿಕೆ ಸಲ್ಲಿಸಿದ್ದರು. ಆದರೆ, ಫಾರಂ ಎ ಹಾಗೂ ಫಾರಂ ಬಿ ಲಗತ್ತಿಸದ ಕಾರಣ ತಿರಸ್ಕೃತಗೊಂಡಿವೆ. 11 ಮಂದಿಯ ನಾಮಪತ್ರಗಳು ಕ್ರಮಬದ್ಧವಾಗಿವೆ.
ಪ್ರಕ್ರಿಯೆ ವೇಳೆ ಅಭ್ಯರ್ಥಿಗಳಾದ ಅಶೋಕ ಹಣಜಿ, ಪ್ರಕಾಶ ಭಾಗೋಜಿ, ರಮೇಶ ಜಾರಕಿಹೊಳಿ, ಅಶೋಕ ಪೂಜಾರಿ, ಸತೀಶ ಪೂಜಾರಿ ಹಾಗೂ ಎಸ್.ಬಿ. ಗದಾಡಿ (ಕಾಂಗ್ರೆಸ್ ಪ್ರತಿನಿಧಿ) ಹಾಜರಿದ್ದರು. ಅಕ್ಕಪಕ್ಕದಲ್ಲಿ ಕುಳಿತಿದ್ದ ರಮೇಶ ಜಾರಕಿಹೊಳಿ ಹಾಗೂ ಅಶೋಕ ಪೂಜಾರಿ ಉಭಯ ಕುಶಲೋಪರಿ ನಡೆಸಿದ್ದು ವಿಶೇಷವಾಗಿತ್ತು.
ಅಥಣಿ: ಇಲ್ಲಿ 18 ಮಂದಿ ನಾಮಪತ್ರ ಸಲ್ಲಿಸಿದ್ದರು. ಈ ಪೈಕಿ ಸತ್ಯಪ್ಪ ಬಾಗೆನ್ನವರ (ಕಾಂಗ್ರೆಸ್) ಹಾಗೂ ಅಣ್ಣಾರಾಯ ಹಾಲಳ್ಳಿ (ಜೆಡಿಎಸ್) ಸಲ್ಲಿಸಿದ್ದ ನಾಮಪತ್ರಗಳನ್ನು ಫಾರಂ ‘ಎ’ ಹಾಗೂ ಫಾರಂ ‘ಬಿ’ ಲಗತ್ತಿಸದ ಕಾರಣ ಪುರಸ್ಕರಿಸಲಾಗಿಲ್ಲ. 16 ಮಂದಿಯ ನಾಮಪತ್ರಗಳು ಕ್ರಮಬದ್ಧವಾಗಿವೆ.
ಕಾಗವಾಡದಲ್ಲಿ 16 ಅಭ್ಯರ್ಥಿಗಳ ಪರವಾಗಿ ಒಟ್ಟು 17 ನಾಮನಿರ್ದೇಶನಪತ್ರಗಳು ಸಲ್ಲಿಕೆಯಾಗಿದ್ದವು. ಈ ಪೈಕಿ ಚಂದ್ರಕಾಂತ ಇಮ್ಮಡಿ, ರವೀಂದ್ರ ಗಾಣಿಗೇರ, ಬಾಬಾಸಾ ದೊಂಡಿಬಾ ಶಿಂಧೆ, ಓಂಪ್ರಕಾಶ ಪಾಟೀಲ, ದಿಗ್ವಿಜಯ ಪಾಟೀಲ ಹಾಗೂ ಶ್ರೀನಿವಾಸ ಪಾಟೀಲ ಅವರ ನಾಮಪತ್ರಗಳು ತಿರಸ್ಕೃತವಾಗಿವೆ. 10 ಮಂದಿಯ ನಾಮಪತ್ರಗಳು ಸಿಂಧುವಾಗಿವೆ.
ನಾಮಪತ್ರಗಳನ್ನು ವಾಪಸ್ ಪಡೆಯಲು ನ. 21 ಕೊನೆಯ ದಿನವಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.