ಬೆಳಗಾವಿ: ತಾಲ್ಲೂಕಿನಲ್ಲಿ ಮುಂಗಾರು ಹಂಗಾಮಿನಲ್ಲಿ ರೈತರಿಗೆ ರಿಯಾಯಿತಿ ದರದಲ್ಲಿ ಬಿತ್ತನೆ, ರಸಗೊಬ್ಬರ, ಲಘು ಪೋಷಕಾಂಶ, ಸಾವಯನ ಗೊಬ್ಬರ ವಿತರಿಸಲಾಗುತ್ತಿದ್ದು ರೈತರು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಸಹಾಯಕ ಕೃಷಿ ನಿರ್ದೇಶಕ ಜಿ.ಬಿ. ಕಲ್ಯಾಣಿ ಮನವಿ ಮಾಡಿದ್ದಾರೆ.
ತಾಲ್ಲೂಕಿನಲ್ಲಿ 48,050 ಹೆಕ್ಟರ್ ಮುಂಗಾರು ಬಿತ್ತನೆ ಗುರಿ ಇದ್ದು ಭತ್ತ, ಸೋಯಾಬೀನ್ ಪ್ರಮುಖ ಬೆಳೆಯಾಗಿವೆ. ಇದಕ್ಕೆ ಬೇಕಾಗುವ ಪ್ರಮಾಣಿತ ಬೀಜ ಸೋಯಾಬೀನ್ 4,000 ಕ್ವಿಂಟಲ್, ಭತ್ತ 350 ಕ್ವಿಂಟಲ್ ಬೀಜವನ್ನು 12 ವಿತರಣಾ ಕೇಂದ್ರಗಳ ಮೂಲಕ ಕೊಡಲಾಗುತ್ತಿದೆ.
ಶಿವಾಜಿನಗರದ ಬೆಳಗಾವಿ ರೈತ ಸಂಪರ್ಕ ಕೇಂದ್ರ, ಕಾಕತಿ ಪಿಕೆಪಿಎಸ್ ಸೊಸೈಟಿ ಮತ್ತು ಕಾಕತಿ ರೈತ ಸಂಪರ್ಕ ಕೇಂದ್ರ, ಉಚಗಾಂವ ರೈತ ಸಂಪರ್ಕ ಕೇಂದ್ರ, ಬೆಳಗುಂದಿ ಹಾಗೂ ನಂದಿಹಳ್ಳಿ ಪಿಕೆಪಿಎಸ್, ಹಿರೇಬಾಗೇವಾಡಿ ಪಿಕೆಪಿಎಸ್, ಹಲಗಾ ಪಿಕೆಪಿಎಸ್, ಬೆಂಡಿಗೇರಿ ಪಿಕೆಪಿಎಸ್ ಬಡಾಲ ಅಂಕಲಗಿ ಪಿಕೆಪಿಎಸ್, ಮಾರೀಹಾಳ ಪಿಕೆಪಿಎಸ್, ಮೋದಗಾ ಪಿಕೆಪಿಎಸ್ನಲ್ಲಿ ಬೀಜ ವಿತರಣೆ ಆರಂಭವಾಗಿದೆ ಎಂದು ತಿಳಿಸಿದ್ದಾರೆ.
ಹೆಚ್ಚು ಇಳುವರಿ ಕೊಡುವ ಭತ್ತದ ಬೀಜಗಳಾದ ಇಂಟಾನ್ ಐ.ಆರ್-64, ಜಯಾ, ಬಿ.ಪಿ.ಟಿ, ಅಭಿಲಾಷಾ ಹಾಗೂ ಹೈಬ್ರಿಡ್ ಭತ್ತದ ತಳಿಗಳಾದ ಗಂಗಾ ಕಾವೇರಿ ಮತ್ತು ವಿ.ಎನ್.ಆರ್. ಮುಂತಾದವುಗಳನ್ನು ನೀಡಲಾಗುತ್ತಿದೆ. ಇದರ ಜೊತೆಗೆ ಗೋವಿನ ಜೋಳ, ಹೆಸರು, ತೊಗರಿ, ಬಿತ್ತನೆ ಬೀಜಗಳನ್ನೂ ದಾಸ್ತಾನು ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಇಲ್ಲಿಯವರೆಗೆ 112 ಮಿ.ಮೀ. ಸಾಮಾನ್ಯ ಮಳೆ ಆಗಬೇಕಿತ್ತು. ಆದರೆ 101 ಮಿ.ಮೀ. ಆಗಿದೆ. ರೈತರು ಹೊಲದಲ್ಲಿ ಬಿತ್ತನೆ ಪೂರ್ವ ಚಟುವಟಿಕೆ ಪ್ರಾರಂಭಿಸಿದ್ದು, ಭೂಮಿ ಸಿದ್ಧತೆ ಕಾರ್ಯ, ಮಣ್ಣಿಗೆ ಸಾವಯವ ಗೊಬ್ಬರ ಕೂಡಿಸುವ ಕಾರ್ಯಗಳು ಭರದಿಂದ ಸಾಗಿವೆ ಎಂದು ಮಾಹಿತಿ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.