ADVERTISEMENT

14ಲಕ್ಷ ಪಡಿತರ ಚೀಟಿ ಸಿದ್ಧ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2013, 9:32 IST
Last Updated 3 ಡಿಸೆಂಬರ್ 2013, 9:32 IST

ಸುವರ್ಣಸೌಧ (ಬೆಳಗಾವಿ): ರಾಜ್ಯದಲ್ಲಿ 32 ಲಕ್ಷ ಮಂದಿ ಹೊಸ ಪಡಿತರ ಚೀಟಿಗಳನ್ನು ಕೋರಿ ಅರ್ಜಿ ಸಲ್ಲಿಸಿದ್ದು, 14 ಲಕ್ಷ ಪಡಿತರ ಚೀಟಿಗಳು ವಿತರಣೆಗೆ ಸಿದ್ಧವಾಗಿವೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ದಿನೇಶ್ ಗುಂಡೂರಾವ್ ಅವರು ಸೋಮವಾರ ವಿಧಾನ ಪರಿಷತ್‌ಗೆ ತಿಳಿಸಿದರು.

ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿಯ ವೈ.ಎ.ನಾರಾಯಣಸ್ವಾಮಿ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ‘14 ಲಕ್ಷ ಅರ್ಜಿಗಳ ಪರಿಶೀಲನೆ ಮುಗಿದಿದ್ದು, ಪಡಿತರ ಚೀಟಿಗಳು ವಿತರಣೆಗೆ ಸಿದ್ಧವಾಗಿವೆ. ಉಳಿದ ಅರ್ಜಿಗಳನ್ನು ಪರಿಶೀಲಿಸಿ ಜನವರಿ ಅಂತ್ಯದೊಳಗೆ ವಿಲೇವಾರಿ ಮಾಡಲಾಗುವುದು’ ಎಂದರು.

96.87 ಲಕ್ಷ ಕುಟುಂಬಗಳು ಅನ್ನಭಾಗ್ಯ ಯೋಜನೆಯ ಲಾಭ ಪಡೆಯುತ್ತಿವೆ. ಡಿಸೆಂಬರ್‌ ತಿಂಗಳಿಗೆ ಈ ಯೋಜನೆಗೆ 2,81,049 ಟನ್ ಆಹಾರ ಧಾನ್ಯದ ಅಗತ್ಯವಿದೆ. ಕೇಂದ್ರ ಸರ್ಕಾರ 2,04,144 ಟನ್‌ ಆಹಾರ ಧಾನ್ಯ ಒದಗಿಸುತ್ತಿದೆ. ರಾಜ್ಯ ಸರ್ಕಾರ 76,905 ಟನ್‌ ಆಹಾರ ಧಾನ್ಯವನ್ನು ಹೊಂದಿಸಿಕೊಳ್ಳುತ್ತಿದೆ ಎಂದು ವಿವರ ನೀಡಿದರು.

ಕೇಂದ್ರ ಸರ್ಕಾರದ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯ ಜಾರಿಯ ನಿಯಮಾವಳಿಗಳು ರಚನೆ ಆದ ಬಳಿಕ ರಾಜ್ಯ ಸರ್ಕಾರ ಆಹಾರ ಧಾನ್ಯಗಳ ಖರೀದಿಗೆ ವೆಚ್ಚ ಮಾಡುತ್ತಿರುವ ಮೊತ್ತದಲ್ಲಿ ಇಳಿಕೆ ಆಗಲಿದೆ. ಇದರಿಂದ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಹೆಚ್ಚಿನ ಮೊತ್ತ ಇಳಿಕೆ ಆಗಲಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.