ADVERTISEMENT

19 ಯಾಂತ್ರೀಕೃತ ದೋಣಿಗಳ ನಾಶ

​ಪ್ರಜಾವಾಣಿ ವಾರ್ತೆ
Published 7 ಜುಲೈ 2012, 4:00 IST
Last Updated 7 ಜುಲೈ 2012, 4:00 IST
19 ಯಾಂತ್ರೀಕೃತ ದೋಣಿಗಳ ನಾಶ
19 ಯಾಂತ್ರೀಕೃತ ದೋಣಿಗಳ ನಾಶ   

ರಾಮದುರ್ಗ: ಉಪವಿಭಾಗಾಧಿಕಾರಿ ಸಿದ್ಧಲಿಂಗಯ್ಯ ಹಿರೇಮಠ ಅವರ ನೇತೃತ್ವದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳ ತಂಡ ಶುಕ್ರವಾರ ಬೆಳಿಗ್ಗೆಯಿಂದಲೇ ಕಾರ್ಯಾಚರಣೆ ನಡೆಸಿ ಅಕ್ರಮವಾಗಿ ಮರಳು ಎತ್ತುತ್ತಿದ್ದ ಸುಮಾರು 19 ಯಾಂತ್ರಿಕೃತ ದೋಣಿಗಳನ್ನು ಜೆಸಿಬಿ ಯಂತ್ರ ಬಳಸಿ ಧ್ವಂಸಗೊಳಿಸಿದರು.

ಬೆಳಿಗ್ಗೆ 10 ಗಂಟೆಯಿಂದಲೇ ಕಿಲಬನೂರ ಪಕ್ಕದ ನದಿಯಲ್ಲಿ ಬೋಟ್‌ಗಳ ಶೋಧನೆ ಕಾರ್ಯ ನಡೆಸಿದ ಅಧಿಕಾರಿಗಳು ಪಕ್ಕದ ಹೊಲದಲ್ಲಿ ಬಚ್ಚಿಟ್ಟಿದ್ದ ಸುಮಾರು 19 ದೋಣಿಗಳನ್ನು ಧ್ವಂಸಗೊಳಿಸಿದರು. ದಾಳಿಯಿಂದ ತಪ್ಪಿಸಿಕೊಳ್ಳಲು ಬೇರೆಡೆಗೆ ಸಾಗಿಸುತ್ತಿದ್ದ ನಾಲ್ಕು ದೋಣಿಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.

`ಕೇವಲ 4 ಗಂಟೆಗಳ ಕಾಲಾವಕಾಶ ನೀಡಿದರೆ ಎಲ್ಲಾ ದೋಣಿಗಳನ್ನು ಬೇರೆ ಕಡೆ ಸ್ಥಳಾಂತರ ಮಾಡುವುದಾಗಿ ಮರಳು ದಂಧೆ ಮಾಲೀಕರು ಬೇಡಿಕೊಂಡರು. ಬೇರೆ ಕಡೆಗಳಿಂ ದಲೂ ಪ್ರಭಾವ ಬೀರಲು ಮುಂದಾದರೂ ಎಸಿ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಂಡು ಎಲ್ಲ ದೋಣಿಗಳನ್ನು ನಾಶಪಡಿಸಿದರು. ಮರಳು ಗಣಿಗಾರಿಕೆಗೆ ಸಹಕರಿಸಿ ರೈತರು ನೀಡಿದ್ದ ಜಮೀನನ್ನು ಸರ್ಕಾರಿ ಪಡ ಭೂಮಿಯಾಗಿ ಪರಿವರ್ತಿಸಲು ಕ್ರಮ ಕೈಗೊಳ್ಳುವುದಾಗಿ ಅವರು ಹೇಳಿದರು.

ಅಧಿಕಾರಿಗಳ ತಂಡ ನದಿ ಕ್ಷೇತ್ರದಲ್ಲಿ ಕಾರ್ಯಾಚರಣೆ ಆರಂಭಿಸುತ್ತಿದ್ದಂತೆ ದೂರದಲ್ಲಿದ್ದ ಕೆಲವು ದೋಣಿಗಳ ಮಾಲೀಕರು ಗಡಿಬಿಡಿಯಿಂದ ತಮ್ಮ ಬೋಟ್‌ಗಳನ್ನು ಬೇರೆಡೆ ಸಾಗಿಸುತ್ತಿರುವುದು ಸಾಮಾನ್ಯವಾಗಿತ್ತು.

ದಾಳಿಯಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಕಂದಾಯ, ಪೊಲೀಸ್, ಅಗ್ನಿ ಶಾಮಕ ದಳ, ಲೋಕೋಪಯೋಗಿ ಹಾಗೂ ಇತರ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.  ಕಾರ್ಯಾಚರಣೆ ನಾಳೆಯೂ ಮುಂದುವರಿಯಲಿದೆ ಎಂದು ಅಧಿಕಾರಿಗಳು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.