ಬೆಳಗಾವಿ: ಜಿಲ್ಲೆಯ ಸವದತ್ತಿ ತಾಲ್ಲೂಕಿನಲ್ಲಿ ಮಂಗಳವಾರ ಸಂಜೆ ಸಿಡಿಲು ಬಡಿದು ಇಬ್ಬರು ರೈತ ಮಹಿಳೆಯರು ಸಾವಿಗೀಡಾದರು. 47 ಕುರಿಗಳು ಮೃತಪಟ್ಟಿವೆ.
ಚಿಕ್ಕಉಳ್ಳಿಗೇರಿ ಗ್ರಾಮದ ಯಲ್ಲವ್ವ ವಿಠ್ಠಲ ಇಂಚಲ (30), ಭಾಗವ್ವ ಮಹಾದೇವಪ್ಪ ಕಡಕೋಳ (50) ಮೃತರು. ರೇಣವ್ವ ರುದ್ರಪ್ಪ ಮಾಳಗಿ (20) ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರು ಹೊಲದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಸಿಡಿಲು ಬಡಿದಿದೆ.
ನವೀಲುತೀರ್ಥ ಗುಡ್ಡದ ಮೇಲೆ ಟೆಂಟ್ನಲ್ಲಿದ್ದ 47 ಕುರಿಗಳು ಮೃತಪಟ್ಟಿವೆ. ಹುಕ್ಕೇರಿಯ ಶ್ರೀಕಾಂತ ಅಪ್ಪಣ್ಣ ದಳವಾಯಿ ಅವರಿಗೆ ಸೇರಿದ ಕುರಿಗಳು ಇವಾಗಿವೆ. ಸ್ಥಳಕ್ಕೆ ಸವದತ್ತಿ ಶಾಸಕರೂ ಆಗಿರುವ ವಿಧಾನಸಭೆ ಉಪಸಭಾಧ್ಯಕ್ಷ ಆನಂದ ಮಾಮನಿ ಭೇಟಿ ನೀಡಿ ಪರಿಶೀಲಿಸಿದರು. ಸವದತ್ತಿ ಠಾಣಯಲ್ಲಿ ಪ್ರಕರಣ ದಾಖಲಾಗಿದೆ.
ಜೋರು ಮಳೆ: ನಗರವೂ ಸೇರಿದಂತೆ ಜಿಲ್ಲೆಯ ಹಲವು ಕಡೆಗಳಲ್ಲಿ ಮಂಗಳವಾರ ಮಧ್ಯಾಹ್ನದ ನಂತರ ಬಿಟ್ಟೂ ಬಿಟ್ಟು ಗುಡುಗು–ಸಿಡಿಲು ಸಹಿತ ಜೋರು ಮಳೆ ಸುರಿದಿದ್ದರಿಂದ, ಜನಜೀವನ ಅಸ್ತವ್ಯಸ್ತವಾಗಿತ್ತು.
ನಗರದಲ್ಲಿ ಬೆಳಿಗ್ಗೆ ಸುಮಾರು 9ರವರೆಗೂ ಮಂಜು ಕವಿದಿತ್ತು. ವಾಹನಗಳು ದೀಪ ಹಾಕಿಕೊಂಡು ಸಾಗುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಮಧ್ಯಾಹ್ನ ದಟ್ಟ ಮೋಡ ಕವಿದು ಮುಸ್ಸಂಜೆಯಂತಹ ವಾತಾವರಣ ನಿರ್ಮಾಣವಾಗಿತ್ತು. ಬಳಿಕ, ಜೋರು ಮಳೆ ಸುರಿಯಿತು. ಚರಂಡಿಗಳು ಉಕ್ಕಿ ಹರಿದಿದ್ದರಿಂದ ರಸ್ತೆಗಳಲ್ಲಿ ನೀರು ನಿಂತಿತ್ತು. ಇದರಿಂದ ವಾಹನಗಳ ಸಂಚಾರಕ್ಕೆ ತೊಂದರೆಯಾಯಿತು.
ಚಿಕ್ಕೋಡಿ, ಸದಲಗಾ, ಯಕ್ಸಂಬಾ, ಹಿರೇಬಾಗೇವಾಡಿ, ಕೌಜಲಗಿ, ಹಾರೂಗೇರಿ, ಮೂಡಲಗಿ, ಖಾನಾಪುರ, ರಾಮದುರ್ಗ, ಸವದತ್ತಿ, ಬೈಲಹೊಂಗಲದಲ್ಲಿ ಜೋರು ಮಳೆಯಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.