ಅಥಣಿ: ಪಟ್ಟಣದ ಕೆರೆಯ ಪಕ್ಕದಲ್ಲಿರುವ ಖಾಲಿ ಜಾಗದಲ್ಲಿ 25 ಕುಟುಂಬಗಳು ಟೆಂಟ್ ಹಾಗೂ ಗುಡಿಸಲು ಹಾಕಿಕೊಂಡು, ಮೂಲಸೌಲಭ್ಯಗಳ ಕೊರತೆಯ ನಡುವೆ ಜೀವನ ನಡೆಸುತ್ತಿವೆ.
20 ವರ್ಷಗಳಿಂದಲೂ ಅವರು ಇಲ್ಲಿದ್ದಾರೆ. ಕಲ್ಲು ಒಡೆಯುವುದು ಮೊದಲಾದ ಸಣ್ಣ ಪುಟ್ಟ ಕೆಲಸಗಳನ್ನು ಮಾಡಿ ಅವರು ಜೀವನದ ಬಂಡಿ ಸಾಗಿಸುತ್ತಿದ್ದಾರೆ. ಆದರೆ, ಸ್ಥಳೀಯ ಸಂಸ್ಥೆಯವರು ಅವರಿಗೆ ಪರ್ಯಾಯ ಜಾಗ ಒದಗಿಸಿಲ್ಲ.
ಮಳೆ ಬಂದಾಗ ಕೆರೆಯು ತುಂಬಿ ಅವರ ಟೆಂಟ್, ಗುಡಿಸಲುಗಳಿಗೆ ನೀರು ನುಗ್ಗುತ್ತದೆ. ಆದರೂ ಅವರು ಅಲ್ಲೇ ವಾಸವಿದ್ದಾರೆ! ‘ರಾಜಕಾರಣಿಗಳು ಮತಕ್ಕಾಗಿ ಅವರನ್ನು ಬಳಸಿಕೊಂಡಿದ್ದಾರೆಯೇ ಹೊರತು ಸೌಲಭ್ಯ ಕೊಡಿಸುವಲ್ಲಿ ವಿಫಲವಾಗಿದ್ದಾರೆ’ ಎಂಬ ಮಾತುಗಳು ಕೇಳಿಬರುತ್ತಿವೆ. ಅವರಿಗೆ ಭಾವಚಿತ್ರವುಳ್ಳ ಮತದಾರರ ಗುರುತಿನ ಚೀಟಿ, ಆಧಾರ್ ಕಾರ್ಡ್ ನೀಡಲಾಗಿದೆ. ಇಲ್ಲಿನ ರಹವಾಸಿಗಳೆಂದು ಪರಿಗಣಿಸಲಾಗಿದೆ. ಅವರಿಗೆ ನಿವೇಶನ ಕೊಟ್ಟಿಲ್ಲ. ಮನೆಗಳನ್ನು ಕಟ್ಟಿಕೊಟ್ಟಿಲ್ಲ.
‘ಹಲವು ವರ್ಷಗಳಿಂದಲೂ ನಾವು ಇಲ್ಲಿದ್ದೇವೆ. ನಿವೇಶನ ದೊರೆತಿಲ್ಲ. ಸಂಸದರು, ಶಾಸಕರು, ಪುರಸಭೆ ಸದಸ್ಯರನ್ನು ಭೇಟಿಯಾಗಿ ಮನವಿ ಮಾಡಿಕೊಂಡಿದ್ದೇವೆ. ಪುರಸಭೆಗೆ ಹಲವು ಬಾರಿ ಅರ್ಜಿಗಳನ್ನು ಸಲ್ಲಿಸಿದ್ದೇವೆ. ಇದರಿಂದ ಪ್ರಯೋಜನವಾಗಿಲ್ಲ. ನಮಗೆ ಬೇರೆ ಕಡೆ ಜಾಗವಿಲ್ಲ. ಹೀಗಾಗಿ, ಇಲ್ಲಿಯೇ ಇದ್ದೇವೆ. ಸರ್ಕಾರ ನಮಗೆ ಮನೆ ಕಟ್ಟಿಸಿಕೊಟ್ಟರೆ ಅನುಕೂಲವಾಗುತ್ತದೆ’ ಎಂದು ನಿವಾಸಿ ನಾಗರಾಜ ಬಾಗಡಿ ಕೋರಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.