ಬೆಳಗಾವಿ: ಗ್ರಾಮೀಣ ಕ್ಷೇತ್ರದ ಮುತಗಾ ಗ್ರಾಮದಲ್ಲಿ ಜೈನ ಸಮುದಾಯ ಭವನ ನಿರ್ಮಾಣಕ್ಕೆ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಅವರು ₹ 28 ಲಕ್ಷ ಅನುದಾನ ಮಂಜೂರು ಮಾಡಿಸಿದ್ದು, ಸಂಬಂಧಿಸಿದ ಆದೇಶಪತ್ರವನ್ನು ಮುಖಂಡರಿಗೆ ಶುಕ್ರವಾರ ಹಸ್ತಾಂತರಿಸಿದರು.
‘ಆ ಗ್ರಾಮದ ಜೈನ ಸಮುದಾಯದ ಪ್ರತಿನಿಧಿಗಳು ನನ್ನನ್ನು ಭೇಟಿಯಾಗಿ ಭವನ ಮಂಜೂರು ಮಾಡಿಸಿಕೊಡುವಂತೆ ಬೇಡಿಕೆ ಇಟ್ಟಿದ್ದರು. ಇದು ಅವರ 15 ವರ್ಷಗಳ ಬೇಡಿಕೆಯಾಗಿತ್ತು. ಅವರ ಮನವಿ ಆಧರಿಸಿ ಪ್ರಸ್ತಾವ ಸಿದ್ದಪಡಿಸಿ ಅಲ್ಪಸಂಖ್ಯಾತರ ಇಲಾಖೆ ವತಿಯಿಂದ ಅನುದಾನ ಮಂಜೂರು ಮಾಡಿಸಿದ್ದೇನೆ’ ಎಂದು ಶಾಸಕಿ ತಿಳಿಸಿದರು.
ಅನುದಾನ ಕೊಡಿಸಿದ್ದಕ್ಕಾಗಿ ಸಮುದಾಯದ ಮುಖಂಡರು ಶಾಸಕರನ್ನು ಸತ್ಕರಿಸಿದರು.
ಅಹವಾಲು ಆಲಿಕೆ: ಶಾಸಕರು ತಮ್ಮ ಕಚೇರಿಗೆ ಕ್ಷೇತ್ರದ ವಿವಿಧ ಭಾಗಗಳಿಂದ ಬಂದಿದ್ದ ಜನರ ಅಹವಾಲುಗಳನ್ನು ಆಲಿಸಿ, ಸಮಸ್ಯೆಗಳ ಪರಿಹಾರಕ್ಕೆ ಸ್ಪಂದಿಸಿದರು.
ಮಾರ್ಕಂಡೇಯ ನಗರ, ಚಂದನಹೊಸೂರ, ಬೆಕ್ಕಿನಕೇರಿ, ಗೆಜಪತಿ ಮೊದಲಾದ ಗ್ರಾಮಗಳ ಜನರು ಚರ್ಚಿಸಿದರು. ‘ಹಂತ ಹಂತವಾಗಿ ಕ್ಷೇತ್ರದ ಎಲ್ಲ ಅಭಿವೃದ್ಧಿ ಕೆಲಸಗಳು ಪ್ರಗತಿಯಲ್ಲಿವೆ. ಯಾವುದೇ ಕೆಲಸಗಳು ಬಾಕಿ ಉಳಿಯದಿರುವಂತೆ ನೋಡಿಕೊಳ್ಳುತ್ತಿದ್ದೇನೆ. ನನ್ನ ಗಮನಕ್ಕೆ ಬಂದ ಎಲ್ಲ ಕೆಲಸಗಳನ್ನು ಆದ್ಯತೆಯ ಮೇಲೆ ಮಾಡುತ್ತಿದ್ದೇನೆ. ತ್ವರಿತವಾಗಿ ಸ್ಪಂದಿಸುತ್ತಿದ್ದೇನೆ’ ಎಂದು ಲಕ್ಷ್ಮಿ ಹೇಳಿದರು.
‘ಏನೇ ಸಮಸ್ಯೆಗಳಿದ್ದರೂ ಬಂದು ಚರ್ಚಿಸಬಹುದು. ಯಾರೂ ಹಿಂಜರಿಯುವ ಅಗತ್ಯವಿಲ್ಲ. ಕ್ಷೇತ್ರದ ಜನರಿಗೆ ಸದಾ ಲಭ್ಯವಿರುತ್ತೇನೆ. ನಿಮ್ಮೊಂದಿಗೆ ಇರುತ್ತೇನೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.