ಇಂಚಲ (ಬೈಲಹೊಂಗಲ): ‘ಸಮಾಜದ ಒಳಿತಿಗೆ ದುಡಿದ ಗುರು ಸಿದ್ದಾರೂಢರ ಹೆಸರನ್ನು ಹುಬ್ಬಳ್ಳಿಯ ವಿಮಾನನಿಲ್ದಾಣಕ್ಕೆ ನಾಮಕರಣ ಮಾಡಬೇಕು’ ಎಂದು ಸುಕ್ಷೇತ್ರ ಇಂಚಲ ಶಿವಯೋಗೀಶ್ವರ ಸಾಧು ಸಂಸ್ಥಾನಮಠದ ಪೀಠಾಧಿಪತಿ ಶಿವಾನಂದ ಭಾರತಿ ಸ್ವಾಮೀಜಿ ಮನವಿ ಮಾಡಿದರು.
ಶ್ರೀಮಠಕ್ಕೆ ಸೋಮವಾರ ಭೇಟಿ ನೀಡಿದ ಕೇಂದ್ರ ಆಯುಷ್ ಸಚಿವ ಶ್ರೀಪಾದ ಯಸೋ ನಾಯಕ ಹಾಗೂ ರಾಜ್ಯ ಮುಜರಾಯಿ ಸಚಿವ ರುದ್ರಪ್ಪ ಲಮಾಣಿ ಅವರೊಂದಿಗೆ ಮಾತನಾಡಿದ ಶ್ರೀಗಳು ಈ ವಿಷಯ ಪ್ರಸ್ತಾಪಿಸಿದರು.
‘ಸಮಾಜದ ಸೃಷ್ಟಿಕರ್ತ ಭಗವಂತನ ಸಮಾನವಾಗಿ ಹೆಸರು ಮಾಡಿದ ಶ್ರೇಯಸ್ಸು ಸಿದ್ದಾರೂಢರಿಗೆ ಸಲ್ಲುತ್ತದೆ. ದೇಶ, ಸಮಾಜಕ್ಕಾಗಿ ದುಡಿದ ಮಹಾನ್ ವ್ಯಕ್ತಿಗಳ ಹೆಸರು ಮುಂದಿನ ಜನಾಂಗದವರಿಗೆ ಗೊತ್ತಾಗುವಂತಾಗಲು ಪುಸ್ತಕಗಳನ್ನು ಪ್ರಕಟಿಸಬೇಕು.
ಅಣೆಕಟ್ಟು ಹಾಗೂ ಪ್ರಮುಖ ವೃತ್ತಗಳಿಗೆ ಹೆಸರು ಇಡಬೇಕು. ಧರ್ಮಕ್ಕಾಗಿ ದುಡಿದವರ ಜೀವನ ಸಾಧನೆಯನ್ನು ದಾಖಲಿಸಬೇಕು. ಅವರನ್ನು ಸಮಾಜ ನೆನಪಿಸಿಕೊಳ್ಳುವಂತೆ ಮಾಡಬೇಕು. ಇದಕ್ಕಾಗಿ ಇದೇ 4ರಂದು ಮಠಾಧಿಪತಿಗಳು ಮತ್ತು ಭಕ್ತರಿಂದ ರಾಜ್ಯ, ಕೇಂದ್ರ ಸರ್ಕಾರಗಳ ಗಮನಸೆಳೆಯಲು ಹೋರಾಟ ಹಮ್ಮಿಕೊಳ್ಳಲಾಗಿದೆ’ ಎಂದು ತಿಳಿಸಿದರು.
ಶ್ರೀಗಳ ಮನವಿಗೆ ಸ್ಪಂದಿಸಿದ ಸಚಿವರು, ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಸಂಸದ ಸುರೇಶ ಅಂಗಡಿ, ಶಾಸಕ ಡಾ.ವಿಶ್ವನಾಥ ಪಾಟೀಲ, ಪುರಸಭೆ ಸದಸ್ಯ ರಾಜು ಜನ್ಮಟ್ಟಿ, ಮುಖಂಡರಾದ ಅಮರಸಿಂಹ ಪಾಟೀಲ, ಶಿವಾನಂದ ಕೌಜಲಗಿ, ಮಹಾಂತೇಶ ಕೌಜಲಗಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.