ಗೋಕಾಕ: ಬಾಲಕನ ವಕ್ರವಾಗಿದ್ದ ಕಾಲನ್ನು ಶಸ್ತ್ರಚಿಕಿತ್ಸೆ ಮೂಲಕ ಸಹಜಸ್ಥಿತಿಗೆ ತರುವಲ್ಲಿ ಇಲ್ಲಿನ ವೈದ್ಯರ ತಂಡ ಯಶಸ್ವಿಯಾಗಿದೆ. ಪಟ್ಟಣದ ಸಂಕೇಶ್ವರ–ನರಗುಂದ ರಾಜ್ಯ ಹೆದ್ದಾರಿಯಲ್ಲಿರುವ ಎಸ್–4 (ಸುಖ–ಶಾಂತಿ –ಸೂಪರ್–ಸ್ಪೆಷಾಲಿಟಿ) ಆಸ್ಪತ್ರೆಯ ಮೂಳೆ ತಜ್ಞರಾದ ಡಾ.ರಮೇಶ ಪಟಗುಂದಿ ಅವರು 17 ವರ್ಷ ವಯಸ್ಸಿನ ಯಲ್ಲಪ್ಪ ಕಲ್ಲಪ್ಪ ತೆಳಗಡೆ ಅವರ ವಕ್ರ ಕಾಲನ್ನು ಶಸ್ತ್ರಚಿಕಿತ್ಸೆ ಮೂಲಕ ಸಹಜಸ್ಥಿತಿಗೆ ತರುವಲ್ಲಿ ಯಶಸ್ವಿಯಾಗಿದ್ದಾರೆ.
ಚಿಕ್ಕ ವಯಸ್ಸಿನಲ್ಲೇ ಕಾಲಿನ ಮೂಳೆ ವಕ್ರವಾಗಿ ತಿರುಗಿದ ಕಾರಣ ನಡೆದಾಡದ ಸ್ಥಿತಿ ತಲುಪಿದ್ದ ಯಲ್ಲಪ್ಪ ಅವರನ್ನು ಸಂಬಂಧಿಕರು ಚಿಕಿತ್ಸೆಗಾಗಿ ಇಲ್ಲಿಯ ಎಸ್–4 ಆಸ್ಪತ್ರೆಗೆ ದಾಖಲಿಸಿದ್ದರು.
ಮುರಿದುಹೋಗಿದ್ದ ಕಾಲಿನ ಮೂಳೆಯನ್ನು ಮೊದಲು ಶಸ್ತ್ರಚಿಕಿತ್ಸೆ ಮೂಲಕ ಸರಿ ಪಡಿಸಿ, ಬಳಿಕ ಮೂಳೆಯ ವಕ್ರತೆಯನ್ನು ತೀಡಿ ಅತ್ಯಲ್ಪ ಅವಧಿಯಲ್ಲಿ ನೇರಗೊಳಿಸುವ ಮೂಲಕ ಸಾಮಾನ್ಯರಂತೆ ನಡೆದಾಡಲು ವೈದ್ಯರು ಅನುವು ಮಾಡಿಕೊಟ್ಟಿದ್ದಾರೆ.
‘ಚಿಕಿತ್ಸೆಯ ಮೊದಲ ಎರಡು ತಿಂಗಳು ಕಾಲಿಗೆ ಪ್ಲಾಸ್ಟರ್ ಅಳವಡಿಸಲಾಗಿತ್ತು. ನಂತರ ಎರಡು ತಿಂಗಳು ವಾಕರ್ ಸಹಾಯದಿಂದ ನಡೆದಾಡಲು ಸಲಹೆ ನೀಡಲಾಗಿತ್ತು. ಇದಾದ ಬಳಿಕ ಕೊನೆಯ ಹಂತದಲ್ಲಿ ಯಾರ ಸಹಾಯ ಇಲ್ಲದೇ ತನ್ನಷ್ಟಕ್ಕೆ ತಾನೇ ತಿರುಗಾಡಲು ರೋಗಿ ಆರಂಭಿಸಿದ’ ಎಂದು ವೈದ್ಯ ಪಟಗುಂದಿ ‘ಪ್ರಜಾವಾಣಿ’ಗೆ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.