ADVERTISEMENT

ಬೆಳಗಾವಿ: ಮಕ್ಕಳಿಗೆ ಹೆಚ್ಚು ಅಂಕ ಗಳಿಸುವ ಒತ್ತಡ ಹೇರಬೇಡಿ

​ಪ್ರಜಾವಾಣಿ ವಾರ್ತೆ
Published 31 ಜನವರಿ 2026, 9:30 IST
Last Updated 31 ಜನವರಿ 2026, 9:30 IST
ಅಥಣಿ ಪಟ್ಟಣದ ಹೊರವಲಯದಲ್ಲಿ ಎಸ್ಎಂ ನಾರಗೊಂಡ ಶಿಕ್ಷಣ ಸಂಸ್ಥೆಯ ಕಟ್ಟಡ ಲೋಕಾರ್ಪಣೆ ಹಾಗೂ ಸಂಗೀತ ರಸಮಂಜರಿ ಕಾರ್ಯಕ್ರಮವನ್ನು ನಟ ವಿ.ರವಿಚಂದ್ರನ್‌ ಅವರು ಉದ್ಘಾಟಿಸಿದರು. ಶಾಸಕ ಲಕ್ಷ್ಮಣ ಸವದಿ ಭಾಗವಹಿಸಿದ್ದರು
ಅಥಣಿ ಪಟ್ಟಣದ ಹೊರವಲಯದಲ್ಲಿ ಎಸ್ಎಂ ನಾರಗೊಂಡ ಶಿಕ್ಷಣ ಸಂಸ್ಥೆಯ ಕಟ್ಟಡ ಲೋಕಾರ್ಪಣೆ ಹಾಗೂ ಸಂಗೀತ ರಸಮಂಜರಿ ಕಾರ್ಯಕ್ರಮವನ್ನು ನಟ ವಿ.ರವಿಚಂದ್ರನ್‌ ಅವರು ಉದ್ಘಾಟಿಸಿದರು. ಶಾಸಕ ಲಕ್ಷ್ಮಣ ಸವದಿ ಭಾಗವಹಿಸಿದ್ದರು   

ಅಥಣಿ: ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಮತ್ತು ಉಜ್ವಲ ಭವಿಷ್ಯಕ್ಕಾಗಿ ಶಿಕ್ಷಣ ಬಹಳ ಮಹತ್ವವಾದದ್ದು, ಆದರೆ ಇತ್ತೀಚಿನ ದಿನಗಳಲ್ಲಿ ಮಕ್ಕಳಿಗೆ ಕೇವಲ ಹೆಚ್ಚು ಅಂಕಗಳಿಸುವ ಶಿಕ್ಷಣ, ಒತ್ತಡದ ಬದುಕಿನಲ್ಲಿ ಸಾಧನೆ ಬಯಸುತ್ತಿದ್ದೇವೆ. ಶಿಕ್ಷಕರು ಮತ್ತು ಪಾಲಕರು ಮಕ್ಕಳಿಗೆ ಒಳ್ಳೆಯ ಗುಣಮಟ್ಟದ ಶಿಕ್ಷಣದ ಜೊತೆಗೆ ಒಳ್ಳೆಯ ಸಂಸ್ಕಾರ ಮತ್ತು ಮಾನವೀಯ ಮೌಲ್ಯಗಳನ್ನು ಕಲಿಸಿಕೊಡಬೇಕಾದ ಇಂದಿನ ಅಗತ್ಯವಾಗಿದೆ ಎಂದು ಖ್ಯಾತ ಚಿತ್ರನಟ ರವಿಚಂದ್ರನ್ ಹೇಳಿದರು.

ಅಥಣಿ ಪಟ್ಟಣದ ಹೊರವಲಯದಲ್ಲಿ ಎಸ್ಎಂ ನಾರಗೊಂಡ ಶಿಕ್ಷಣ ಸಂಸ್ಥೆಯ ಕಟ್ಟಡ ಲೋಕಾರ್ಪಣೆ ಹಾಗೂ ಸಂಗೀತ ರಸಮಂಜರಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಅಥಣಿಯಲ್ಲಿ ನೂತನವಾಗಿ ಪ್ರಾರಂಭಗೊಂಡಿರುವ ಎಸ್.ಎಮ್.ನಾರಗೊಂಡ ಇಂಟರ್‌ನ್ಯಾಶನಲ್‌ ಸ್ಕೂಲ್‌ ಮಕ್ಕಳಿಗೆ ಸಂಸ್ಕಾರದೊಂದಿಗೆ ಗುಣಮಟ್ಟದ ಶಿಕ್ಷಣವನ್ನು ನೀಡಿ ಅವರ ಭವಿಷ್ಯ ಉಜ್ವಲಗೊಳಿಸುವಂತಾಗಲಿ ಎಂದರು.

ADVERTISEMENT

ಮಕ್ಕಳು ಕಷ್ಟಪಟ್ಟು ಓದುವುದಕ್ಕಿಂತ ಇಷ್ಟಪಟ್ಟು ಓದುವ ಶಿಕ್ಷಣ ನಮಗೆ ಬೇಕಾಗಿದೆ. ಮಕ್ಕಳ ಸಾಧನೆಗೆ ಪಾಲಕರು, ಶಿಕ್ಷಕರು ಪ್ರೋತ್ಸಾಹ ನೀಡಬೇಕು. ಎಲ್ಲರಿಗೂ ಗುಣಮಟ್ಟದ ಶಿಕ್ಷಣ ಸಿಗುವಂತಾಗಬೇಕು. ಶಿಕ್ಷಣದಿಂದ ಮಾತ್ರ ಮಕ್ಕಳ ಭವಿಷ್ಯ ಉಜ್ವಲಗೊಳ್ಳಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಶಾಸಕ ಲಕ್ಷ್ಮಣ ಸವದಿ ಮಾತನಾಡಿ, ಗ್ರಾಮೀಣ ಪ್ರದೇಶದ ಮಕ್ಕಳಿಗೆ ಒಳ್ಳೆಯ ಗುಣಮಟ್ಟದ ಶಿಕ್ಷಣ ನೀಡುವ ಸಂಕಲ್ಪ ಹೊಂದಿರುವ ವಿವೇಕ ನಾರಗೊಂಡ ಈ ಶಿಕ್ಷಣ ಸಂಸ್ಥೆಯನ್ನ ಹುಟ್ಟು ಹಾಕಿದ್ದಾರೆ. ಈಗಾಗಲೇ ಸಮೀಪದ ಹಾರೂಗೇರಿ ಗ್ರಾಮದಲ್ಲಿ ಅವರ ಶಾಲೆಯು ಉತ್ತಮವಾಗಿ ಮುನ್ನಡೆಯುತ್ತಿದ್ದು, ಅಲ್ಲಿನ ಮಕ್ಕಳ ಉತ್ತಮ ಫಲಿತಾಂಶದ ಮೂಲಕ ಶಾಲೆಯ ಹೆಸರನ್ನು ನಾಡಿನಲ್ಲಿ ಬೆಳೆಸಿದ್ದಾರೆ. ಈಗ ಅಥಣಿಯಲ್ಲಿ ಕೂಡ ಅವರು ನೂತನವಾಗಿ ಶಾಲೆಯನ್ನು ಪ್ರಾರಂಭಿಸುತ್ತಿದ್ದು ನಮಗೆ ಸಂತಸ ತಂದಿದೆ ಎಂದರು.

ಶಿಕ್ಷಣ ಸಂಸ್ಥೆಯ ಅಧ್ಯಕ್ಷ ವಿವೇಕ ನಾರಗೊಂಡ ಮಾತನಾಡಿ ನಾನು ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳಿಗೆ ಗುಣಾತ್ಮಕ ಶಿಕ್ಷಣ ನೀಡುವ ಉದ್ದೇಶದಿಂದ ಈ ಸಂಸ್ಥೆಯನ್ನ ಕಟ್ಟಿದ್ದೇವೆ. ತಾಲೂಕಿನ ಮಕ್ಕಳು ಬೇರೆ ಬೇರೆ ಜಿಲ್ಲೆ ಮತ್ತು ತಾಲೂಕುಗಳಿಗೆ ಹೋಗಿ ಶಿಕ್ಷಣ ಪಡೆದು ಸಾಧನೆ ಮಾಡುತ್ತಿದ್ದಾರೆ ಎಂದರು.

ಶೇಗುಣಸಿಯ ಮಹಾಂತ ಸ್ವಾಮೀಜಿ ಆಶೀರ್ವಚನ ನೀಡಿದರು.

ಶಾಲೆಯ ಸಂಸ್ಥಾಪಕ ಅಧ್ಯಕ್ಷ ಶ್ರೀಶೈಲ ನಾರಗೊಂಡ ಅಧ್ಯಕ್ಷತೆ ವಹಿಸಿದ್ದರು. ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಪರಪ್ಪ ಸವದಿ, ಯುವ ಮುಖಂಡ ಚಿದಾನಂದ ಸವದಿ, ಡಾ.ಮಹಾಂತೇಶ ಜಾಲಗೇರಿ, ಕ್ಷೇತ್ರ ಶಿಕ್ಷಣಾಧಿಕಾರಿ ಎಮ್.ಆರ್. ಮುಂಜೆ, ಪ್ರಾಚಾರ್ಯ ಇ.ಜಿ. ದಿಕ್ಷೀತ, ಪ್ರಶಾಂತ ಎಲ್.ಎಚ್. ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

ಜನಮನ ಸೆಳೆದ ರಸಮಂಜರಿ: ಸರಿಗಮಪ ಖ್ಯಾತಿಯ ಗಾಯಕರಾದ ಸುನೀಲ ಗಜಗೊಂಡ, ದರ್ಶನ ಮೆಳವಂಕಿ, ಸುರಕ್ಷಾದಾಸ, ಪ್ರಜ್ಞಾ ಮರಾಠೆ, ಐಶ್ವರ್ಯ ಗಂಗೂ ಅವರ ಕಂಠಸಿರಿಯಿಂದ ಮೂಡಿ ಬಂದ ಸಂಗೀತ ಕಾರ್ಯಕ್ರಮ ರಂಜಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.