ಅಥಣಿ: ತಾಲ್ಲೂಕಿನ ನದಿಇಂಗಳಗಾಂವ ಗ್ರಾಮದ ಪೇರಲ ತೋಟದಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳು ಪ್ರಾಣ ಭಯದಲ್ಲೇ ಪಾಠ ಕಲಿಯಬೇಕಾದ ಸ್ಥಿತಿ ನಿರ್ಮಾಣವಾಗಿದೆ.
ಕಳೆದ ತಿಂಗಳು ಬಂದಿದ್ದ ನೆರೆಯಿಂದಾಗಿ ಶಾಲೆ ಮುಳುಗಡೆಯಾಗಿತ್ತು. 4 ಕೋಣೆಗಳ ಗೋಡೆಗಳು ಕುಸಿದುಬಿದ್ದಿದ್ದವು. ಅಲ್ಲಿನ 148 ವಿದ್ಯಾರ್ಥಿಗಳಿಗೆ ಶಿಥಿಲ ಕಟ್ಟಡದ ಆವರಣದಲ್ಲೇ ಶಿಕ್ಷಕರು ಪಾಠ ಮಾಡುತ್ತಿದ್ದಾರೆ. ಬಯಲಲ್ಲೇ ಪಾಠ ನಡೆಯುತ್ತಿದೆ. ಆತಂಕದಲ್ಲೇ ಅವರು ದಿನ ಕಳೆಯುತ್ತಿದ್ದಾರೆ.
ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಮಹಾಮಳೆಗೆ ಕೃಷ್ಣಾ ನದಿ ಉಕ್ಕಿ ಹರಿಯುತ್ತಿದ್ದು, ನದಿ ಪಾತ್ರದಲ್ಲಿರುವ ತಾಲ್ಲೂಕಿನ 12 ಶಾಲೆಗಳ 1,800 ಮಕ್ಕಳು ಶಿಕ್ಷಣದಿಂದ ವಂಚಿತವಾಗುವ ಸ್ಥಿತಿಗೆ ತಲುಪಿರವುದು ಆತಂಕಕ್ಕೆ ಕಾರಣವಾಗಿದೆ. ತಾಲ್ಲೂಕಿನ ಹಲ್ಯಾಳ, ದರೂರು, ನದಿ ಇಂಗಳಗಾಂವ, ತೀರ್ಥ, ಸಪ್ತಸಾಗರ, ಶೇಗುಣಸಿ, ಅವರಖೋಡ, ದೊಡ್ಡವಾಡ, ಸತ್ತಿ, ಸವದಿ, ದರ್ಗಾ, ಜನವಾಡ ಗ್ರಾಮಗಳ ಜನರು ಸ್ಥಳಾಂತರಗೊಳ್ಳುವಂತೆ ಬೆಳಗಾವಿ ಜಿಲ್ಲಾಡಳಿತ ತಿಳಿಸಿದೆ.
ಶಿಥಿಲಗೊಂಡಿರುವ ಶಾಲೆಗಳ ಗೋಡೆಗಳನ್ನು ದುರಸ್ತಿಪಡಿಸಬೇಕು. ಮಕ್ಕಳಿಗೆ ಪಠ್ಯಪುಸ್ತಕ ಮೊದಲಾದ ಲೇಖನ ಸಾಮಗ್ರಿಗಳನ್ನು ನೀಡಬೇಕು. ಆತಂಕ ನಿವಾರಿಸಬೇಕು ಎನ್ನುವುದು ವಿದ್ಯಾರ್ಥಿಗಳ ಆಗ್ರಹವಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.