ಅಥಣಿ: ಇಲ್ಲಿನ ಮೋಟಗಿಮಠದಲ್ಲಿ ಶರಣ ಸಂಸ್ಕೃತಿ ಉತ್ಸವ ಅಂಗವಾಗಿ ಗುರುವಾರ ‘ಬಸವಭೂಷಣ’ ರಾಜ್ಯಮಟ್ಟದ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು.
ಭಾಲ್ಕಿಯ ಬಸವಲಿಂಗ ಪಟ್ಟದೇವರು ಮತ್ತು ನಿವೃತ್ತ ಅಧಿಕಾರಿ ಡಾ.ಶಿವಾನಂದ ಜಾಮದಾರ ಪ್ರಶಸ್ತಿ ಪ್ರದಾನ ಮಾಡಲಾಯಿತು.
‘ಪ್ರಶಸ್ತಿಯನ್ನು ಶ್ರೀಗಳ ಪಾದಕ್ಕೆ ಅರ್ಪಿಸುತ್ತೇನೆ. ₹ 25ಸಾವಿರವನ್ನೂ ಮಠಕ್ಕೇ ಕೊಡುತ್ತೇನೆ. ಹಣವನ್ನು ಸಮಾಜಸೇವೆಗೆ ಬಳಸಬೇಕು’ ಎಂದು ಜಾಮದಾರ ಕೋರಿದರು. ‘ಪ್ರಶಸ್ತಿ ಪಡೆಯಲು ಒಂದೆಡೆ ಸಂತೋಷ ಹಾಗೂ ಇನ್ನೊಂದೆಡೆ ಮುಜುಗುರ ಆಗುತ್ತದೆ’ ಎಂದರು.
‘ಲಿಂಗಾಯತ ಸ್ವತಂತ್ರ ಧರ್ಮಕ್ಕಾಗಿ ನಡೆಯುತ್ತಿರುವ ಹೋರಾಟ ನಿಲ್ಲುವುದಿಲ್ಲ. ಇದಕ್ಕಾಗಿ ಸಾಕಷ್ಟು ದಾಖಲೆಗಳನ್ನು ಡಾ.ಶಿವಾನಂದ ಜಾಮದಾರ ಸಂಗ್ರಹ ಮಾಡಿದ್ದಾರೆ. ಅವರ ಹೋರಾಟಕ್ಕೆ ಬೆಂಬಲವಿದೆ. ಸರ್ಕಾರ ಮಾನ್ಯತೆ ಸಿಗಲಿ ಬಿಡಲಿ, ಲಿಂಗಾಯತ ಸ್ವತಂತ್ರ ಧರ್ಮವೆ. ಸರ್ಕಾರದ ಮಾನ್ಯತೆ ಅಗತ್ಯವಿದೆ. ಆಗ ಇದು ಜಾಗತಿಕ ಧರ್ಮದ ಸ್ಥಾನಮಾನ ಪಡೆಯುತ್ತದೆ’ ಎಂದು ತೋಂಟದ ಸಿದ್ಧರಾಮ ಸ್ವಾಮೀಜಿ ಹೇಳಿದರು.
ಮೋಟಗಿ ಮಠದ ಪ್ರಭುಚನ್ನಬಸವ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು. ಅರುಣ ಯಲಗುದ್ರಿ, ಬಿ.ಎಲ್. ಪಾಟೀಲ, ಮಹಾಂತ ದೇವರು, ಅನಿಲ ಸುಣಧೋಳಿ, ವಿಜಯಕುಮಾರ ನೇಮಗೌಡ ಇದ್ದರು. ಸಾಹಿತಿ ವಾಮನ ಕುಲಕರ್ಣಿ ನಿರೂಪಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.