ಬೆಳಗಾವಿ: ಬಸವೇಶ್ವರ ಜಯಂತಿ ಅಂಗವಾಗಿ, ಸಮಗ್ರ ಲಿಂಗಾಯತ ಒಳ ಪಂಗಡಗಳ ಆಶ್ರಯದಲ್ಲಿ ನಗರದಲ್ಲಿ ಭಾನುವಾರ ವೈಭವದ ಮೆರವಣಿಗೆ ನಡೆಯಿತು.
ಪ್ರತಿ ವರ್ಷ ಎಲ್ಲ ಪಂಗಡಗಳೂ ಪ್ರತ್ಯೇಕವಾಗಿ ಜಯಂತಿ ಆಚರಿಸುತ್ತಿದ್ದವು. ಈ ಬಾರಿ ಒಗ್ಗಟ್ಟು ಪ್ರದರ್ಶಿಸುವ ಸಲುವಾಗಿ ಎಲ್ಲ ಒಳಪಂಗಡಗಳ ಮುಖಂಡರು, ಎಲ್ಲ ಪಕ್ಷಗಳ ನಾಯಕರು, 15ಕ್ಕೂ ಹೆಚ್ಚು ಸಂಘಟನೆಗಳ ಪದಾಧಿಕಾರಿಗಳು, 20ಕ್ಕೂ ಹೆಚ್ಚು ಮಠಾಧೀಶರು, ಸಾವಿರಾರು ಸಂಖ್ಯೆಯ ಬಸವಾಭಿಮಾನಿಗಳು ಒಂದಾಗಿ ಹೆಜ್ಜೆ ಹಾಕಿದರು.
ಇಲ್ಲಿನ ರಾಣಿ ಚನ್ನಮ್ಮ ವೃತ್ತದಲ್ಲಿ ಷಟ್ಸ್ಥಲ ಧ್ವಜಾರೋಹಣ ನೆರವೇರಿಸಿ, ವಚನ ಗಾಯನ ಮಾಡಿ, ಬಸವೇಶ್ವರ ಮೂರ್ತಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಮೆರವಣಿಗೆಗೆ ಚಾಲನೆ ನೀಡಲಾಯಿತು. ಅಖಿಲ ಭಾರತ ವೀರಶೈವ ಮಹಾಸಭೆ ಉಪಾಧ್ಯಕ್ಷ ಪ್ರಭಾಕರ ಕೋರೆ, ಜಾಗತಿಕ ಲಿಂಗಾಯತ ಮಹಾಸಭೆಯ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ರೊಟ್ಟಿ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ಜಿಲ್ಲಾ ಘಟಕದ ಅಧ್ಯಕ್ಷೆ ರತ್ನಪ್ರಭಾ ಬೆಲ್ಲದ, ಸಂಘಟಕ ಶಂಕರ ಗುಡಸ ಸೇರಿದಂತೆ ಲಿಂಗಾಯತ, ವೀರಶೈವ ಹಾಗೂ ಇತರೆ ಸಮುದಾಯಗಳ ಬಸವಾಭಿಮಾನಿ ಸಂಘಟನೆಗಳ ಮುಖಂಡರೂ ಪಾಲ್ಗೊಂಡರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ, ಸಂಸದ ಜಗದೀಶ ಶೆಟ್ಟರ, ಶಾಸಕರಾದ ಆಸೀಫ್ ಸೇಠ್, ಬಾಬಾಸಾಹೇಬ ಪಾಟೀಲ, ದುರ್ಯೋಧನ ಐಹೊಳೆ, ಗಣೇಶ ಹುಕ್ಕೇರಿ ನೇತೃತ್ವದಲ್ಲಿ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳ ನಾಯಕರೂ ಜತೆಯಾಗಿ ಹೆಜ್ಜೆ ಹಾಕಿದರು.
ಮಾರ್ಗದುದ್ದಕ್ಕೂ ಬಸವಣ್ಣನವರ ವಚನಗಳ ಪಠಣ, ಗಾಯನ ನಡೆಯಿತು. ಡಿ.ಜೆ ಸೌಂಡ್ ಸಿಸ್ಟಮ್ ನಾದಕ್ಕೆ ಅಳವಡಿಸಿ ಬಿತ್ತರ ಮಾಡಲಾಯಿತು. ಕಿವಿಗಡಚಿಕ್ಕುವ ಸಂಗೀತಕ್ಕೆ ಯುವಜನರು, ಹಿರಿಯರು ಕೂಡ ಹೆಜ್ಜೆ ಹಾಕದರು. ದೇಸಿ ವಾದ್ಯಮೇಳಗಳು, ರೂಪಕಗಳು, ಕೋಲಾಟ ತಂಡಗಳು, ಶರಣರ ವೇಶ ಧರಿಸಿದ ಶಾಲಾ ಮಕ್ಕಳು ಗಮನ ಸೆಳೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.